ಕರ್ನಾಟಕ

karnataka

ಸುಧಾಕರ್​ ಚಾಲೆಂಜ್​ನಿಂದ ಇಡೀ ಕಾಂಗ್ರೆಸ್​ ನಲುಗಿದೆ : ಸಿಎಂ ಬೊಮ್ಮಾಯಿ ತಿರುಗೇಟು

By

Published : Jan 25, 2023, 4:40 PM IST

Updated : Jan 25, 2023, 5:09 PM IST

CM Basavaraja bommai

ಬಿಜೆಪಿ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್​ ದಾಖಲೆ ಬಿಡುಗಡೆ ಮಾಡಿ ಮಾತನಾಡಲಿ. ಆಗ ನಾನೂ ಕೂಡ ತನಿಖೆ ಮಾಡಿಸುತ್ತೇನೆ ಎಂದು ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ: ಸಚಿವ ಸುಧಾಕರ್​ ಅವರು ಮೊದಲು ಕಾಂಗ್ರೆಸ್​ನಲ್ಲಿ ಶಾಸಕರಾಗಿದ್ದವರು. ಅವರ ಹಗರಣ ಏನು ಅನ್ನೋದು ಸುಧಾಕರ್​ ಅವರಿಗೆ ಗೊತ್ತಿರುತ್ತವೆ. ಅದನ್ನು ಈಗ ಹೇಳಿದ್ದಾರೆ ಅಷ್ಟೆ. ಕಾಂಗ್ರೆಸ್​ನವರಿಗೆ ಒಬ್ಬ ಸುಧಾಕರ್​ ಅವರನ್ನೇ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಕಾಂಗ್ರೆಸ್​ನವರಿಗೆ ನಾನು ಸವಾಲು ಹಾಕುತ್ತೇನೆ. ದಾಖಲೆ ಬಿಡುಗಡೆ ಮಾಡಿ ಮಾತನಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಜಂಟಿ ಮಾಧ್ಯಮಗೋಷ್ಟಿಯ ಹೇಳಿಕೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಟಾಂಗ್​ ನೀಡಿದ್ದಾರೆ.

ಇಂದು ಹಿರೇಕೇರೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರೇಕೇರೂರು ತಾಲೂಕಿನ ಬಸರಹಳ್ಳಿ ಹೆಲಿಪ್ಯಾಡ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೊಮ್ಮಾಯಿ ಜೊತೆ ಕೃಷಿ ಸಚಿವ ಬಿ ಸಿ ಪಾಟೀಲ್​ ಅವರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈ ವಿಷಯ ಈಗಾಗಲೇ ಅಸೆಂಬ್ಲಿಯಲ್ಲೂ ಚರ್ಚೆ ಆಗಿದೆ. ಆ ವೇಳೆ ಯಾವುದೇ ಸಮರ್ಪಕ ದಾಖಲೆ ಕೊಡಲು ಅವರಿಂದ ಸಾಧ್ಯವಾಗಿಲ್ಲ. ಈಗಲೂ ಅವರಿಗೆ ನಾನು ಸವಾಲು ಹಾಕುವೆ. 3000 ಕೋಟಿ ಯಾವಾಗ ಆಯ್ತು? ಎಲ್ಲಿಂದ ಬಂತು ದಾಖಲೆ ಬಿಡುಗಡೆ ಮಾಡಲಿ. ಈ ಕುರಿತು ತನಿಖೆ ಮಾಡಿಸುತ್ತೇವೆ. ಹಾಗೆಯೇ ಅವರ ಕಾಲದಲ್ಲಿ ಆಗಿದ್ದೂ ತನಿಖೆ ಮಾಡಿಸುತ್ತೇವೆ. ಯಾಕಂದ್ರೆ ವೆಂಟಿಲೇಟರ್ಸ್ ಇವರು ಹೇಗೆ ಖರೀದಿ ಮಾಡಿದ್ರು ಅನ್ನೋದು ಈಗಾಗಲೇ ಬಯಲಾಗಿದೆ ಎಂದರು.

ಸಿ.ಎ.ಜಿ ಸ್ಥಾಪಿತವಾಗಿರುವಂಥ ಸಂಸ್ಥೆ. ಸಿ.ಎ.ಜಿ ವರದಿಯಲ್ಲಿರೋದನ್ನೇ ಸುಧಾಕರ್ ಹೇಳಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಅವರೂ ಇದನ್ನೇ ಹೇಳಿದ್ರು. ಈಗ ಮತ್ತೆ ಅದೇ ವಾಪಸ್ ಬರ್ತಾ ಇದೆ. ಕಾಂಗ್ರೆಸ್​ನವರ ಕಾಲದಲ್ಲಿ ಏನು ಆಗಿತ್ತೋ ಅದನ್ನೇ ಸುಧಾಕರ್ ಹೇಳಿದ್ದಾರೆ. ಸಿ.ಎ.ಜಿ ವರದಿ ವಿಶ್ಲೇಷಣೆ ಮಾಡಿದ್ದಾರೆ. ಒಬ್ಬ ಸುಧಾಕರ್ ಅವರ ಒಂದು ಚಾಲೆಂಜ್​ನಿಂದ ಇಡೀ ಕಾಂಗ್ರೆಸ್ ಪಕ್ಷ ನಲುಗಿ ಹೋಗಿದೆ. ಹೀಗಾಗಿ ಸಿದ್ಧರಾಮಯ್ಯನವರು ಹಾಗೂ ಡಿಕೆ ಶಿವಕುಮಾರ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸುವ ಪರಿಸ್ಥಿತಿ ಬಂದಿದೆ ಎಂದು ತಿರುಗೇಟು ನೀಡಿದರು.

ಜನರ ಬಹಳ ದಿನಗಳ ಬೇಡಿಕೆಯಂತೆ, ಹಿಂದೆ ಯಡಿಯೂರಪ್ಪನವರು ಅನುಮೋದನೆ ಮಾಡಿದ ನೀರಾವರಿ ಯೋಜನೆಗಳನ್ನು ಪೂರ್ತಿ ಮಾಡಿದ್ದೇವೆ. ಹಾವೇರಿ, ಬ್ಯಾಡಗಿ ಎಲ್ಲಾ ಕಡೆ ನೀರಾವರಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಇಂದು ಜನ ಸಂಕಲ್ಪ ಯಾತ್ರೆ ಹಿರೇಕೇರೂರು ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಮ್ಮದು ಎ ಟೀಂ ಎಂದು ಅವರೇ ಒಪ್ಪಿಕೊಂಡಿದ್ದಾರೆ: ಜೆಡಿಎಸ್​ನವರು ಕಾಂಗ್ರೆಸ್​ ಪಕ್ಷ ಬಿಜೆಪಿಯ ಬಿ ಟೀಂ ಅಂತಾರೆ. ಕಾಂಗ್ರೆಸ್​ನವರು ಜೆಡಿಎಸ್​ ಬಿಜೆಪಿಯ ಬಿ ಟೀಂ ಅಂತಾರೆ. ಒಟ್ಟಿನಲ್ಲಿ ಅವರೇ ಬಿಜೆಪಿ ಎ ಟೀಂ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮದು ಮಾತ್ರ ಜನರ ಟೀಂ ಎಂದು ಬೊಮ್ಮಾಯಿ ಬಿಜೆಪಿ ಹಾಗೂ ಕಾಂಗ್ರೆಸ್​ನ ಬಿ ಟೀಂ ವಾಗ್ದಾಳಿಗೆ ತಿರುಗುಬಾಣ ಬಿಟ್ಟಿದ್ದಾರೆ.

ಸರ್ಕಾರದ ಮೇಲೆ ಕಾಂಗ್ರೆಸ್​ನಿಂದ ಭ್ರಷ್ಟಾಚಾರದ ಕೇಸ್ ದಾಖಲು ವಿಚಾರದ ಕುರಿತು ಮಾತನಾಡಿದ ಅವರು, ಇದು ಅತ್ಯಂತ ಹಾಸ್ಯಾಸ್ಪದ ಮತ್ತು ಕೀಳುಮಟ್ಟದ್ದು. ದಿಗ್ವಿಜಯ ಸಿಂಗ್ ಮೊನ್ನೆ ಒಂದು ಸ್ಟೇಟ್​ಮೆಂಟ್ ಕೊಟ್ಟಿದ್ದರು. ಆದರೆ ರಾಹುಲ್ ಗಾಂಧಿ ಆ ಹೇಳಿಕೆ ನಮ್ಮ ಪಕ್ಷದಲ್ಲ ಎಂದು ಹೇಳುತ್ತಾರೆ. ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟೀಕರಣ ಕೊಟ್ಟಿದೆ. ಅವರವರ ವೈಯಕ್ತಿಕ ಹೇಳಿಕೆಗೆ ಅವರವರೇ ಬದ್ಧರು. ಕಾಂಗ್ರೆಸ್​ನವರು ಕೇವಲ ರಾಜಕೀಯ ಕಾರಣಕ್ಕೆ ಮಾತಾಡುತ್ತಿದ್ದಾರೆ. ಯಾಕೆಂದರೆ ಅವರಿಗೆ ಸೋಲೋದು ಗ್ಯಾರಂಟಿ ಅಂತ ಗೊತ್ತಾಗಿದೆ. ಹೀಗಾಗಿ ಹತ್ತು ಪಟ್ಟು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ.

ಕುಕ್ಕರ್​ ಹಂಚಿದ್ದಕ್ಕೆ ಕಾಂಗ್ರೆಸ್​ಗೆ ದಂಡ: ಕಾಂಗ್ರೆಸ್ ಶಾಸಕರೇ ಕುಕ್ಕರ್ ಹಂಚಿ ಸಿಕ್ಕಿಹಾಕಿಕೊಂಡಿದ್ದಾರೆ. ಕಾಂಗ್ರೆಸ್​ನವರು ಕುಕ್ಕರ್​ ಶೇಖರಿಸಿಟ್ಟಿದ್ದ ಗೋದಾಮಿಗೆ ದಾಳಿ ಮಾಡಿದ್ದ ವಾಣಿಜ್ಯ ತೆರಿಗೆ ಇಲಾಖೆಯವರು ಸೀಜ್ ಮಾಡಿ ದಂಡ ಹಾಕಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕಾಂಗ್ರೆಸ್ ಎಂದರೆ ಪ್ರೆಷರ್ ಕುಕ್ಕರ್ ಪಾರ್ಟಿ. ಹೀಗಾಗಿ ಕಾಂಗ್ರೆಸ್​ನವರಿಗೆ ಪ್ರೆಷರ್ ಕುಕ್ಕರ್ ಮೇಲೆ ಬಹಳ ಪ್ರೀತಿ. ಕುಕ್ಕರ್​ನಲ್ಲಿ ಬಾಂಬ್ ಇಟ್ರೂ ಏನೂ ಇಲ್ಲ ಅಂತಾರೆ. ಕುಕ್ಕರ್ ಪಾರ್ಟಿ ದೊಂಬರಾಟದಿಂದ ಅವರಿಗೆ ಏನೂ ಸಹಾಯ ಆಗಲ್ಲ. ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ ಆಗಲಿದೆ ಎಂದು ಹೇಳಿದರು.

ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂಬ ಡಿಕೆಶಿ ಹೇಳಿಕೆಗೆ, ಈ ದೇಶದಲ್ಲಿ ಮೊದಲನೇ ಹಗರಣ ಪ್ರಾರಂಭ ಆಗಿದ್ದೇ ಕಾಂಗ್ರೆಸ್​ನಿಂದ. ಜೀಪ್ ಹಗರಣ ಮಾಡಿ ಅಂದು ಡಿಫೆನ್ಸ್ ಮಿನಿಸ್ಟರ್ ರಾಜೀನಾಮೆ ನೀಡಿದ್ದರು. ಅಲ್ಲಿಂದಲೇ ಈ ದೇಶದಲ್ಲಿ ಭ್ರಷ್ಟಾಚಾರ ಆರಂಭ ಆಯ್ತು. ಭ್ರಷ್ಟಾಚಾರ ಕಾಂಗ್ರೆಸ್​ನ ಅವಿಭಾಜ್ಯ ಅಂಗ. ಇನ್ನು ಡಿಕೆ ಶಿವಕುಮಾರ್ ಬಗ್ಗೆ ನಾನು ಏನು ಹೇಳಲಿ? ಅವನು ಬಹಳ ಸ್ವಚ್ಛಹಸ್ತವಿರುವ ಮನುಷ್ಯ. ಅವನಷ್ಟು ಸ್ವಚ್ಛ ಮನುಷ್ಯ ರಾಜಕಾರಣದಲ್ಲಿ ಯಾರೂ ಇಲ್ಲ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.

ಇದನ್ನೂ ಓದಿ:ಅಲಿಬಾಬಾ ಹಾಗೂ 40 ಕಳ್ಳರ ತಂಡದಲ್ಲಿ ಸುಧಾಕರ್ ಒಬ್ಬ ಸದಸ್ಯ: ಸಿದ್ದರಾಮಯ್ಯ ವಾಗ್ದಾಳಿ

Last Updated :Jan 25, 2023, 5:09 PM IST

ABOUT THE AUTHOR

...view details