ಕರ್ನಾಟಕ

karnataka

ಮಂಗಳೂರು: ಮೂಡಾ ಆಯುಕ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು

By ETV Bharat Karnataka Team

Published : Jan 7, 2024, 10:31 PM IST

ಮಂಗಳೂರು
ಮಂಗಳೂರು

ಮಂಗಳೂರು ನಗರಾಭಿವೃದ್ಧಿ ಕಚೇರಿಯ ಆಯುಕ್ತರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಕಚೇರಿ (ಮೂಡಾ)ಯ ಆಯುಕ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ಅವರು ಈ ಆರೋಪ ಎದುರಿಸುತ್ತಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಈ ಬಗ್ಗೆ ಆರೋಪ ಮಾಡಿದ್ದಾರೆ. ಮಹಿಳೆ ತಾವು ಕೆಲಸ ಮಾಡುತ್ತಿರುವ ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ಅವರು ಲೈಂಗಿಕ, ಮಾನಸಿಕ, ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸ್ ಆಯುಕ್ತರಿಗೆ ಜನವರಿ 5 ರಂದು ದೂರು ನೀಡಿದ್ದರು. ಜನವರಿ 6 ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 4/2024, ಕಲಂ 354, 354A, ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್ : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಯಾದ ಆರೋಪಿಯನ್ನು ಉಳ್ಳಾಲ ಪೊಲೀಸರು ಅರೆಸ್ಟ್ (ಜನವರಿ- 2-24) ಮಾಡಿದ್ದರು. ಆರೋಪಿ ಸುಮಾರು ನಾಲ್ಕು ತಿಂಗಳ ಹಿಂದೆ ಆಣಜೂರಿನ ಗ್ರಾಮದಿಂದ ಬಾಲಕಿಯನ್ನು ಮಂಗಳೂರಿನ ಪಂಪ್​ವೆಲ್​ಗೆ ಬಸ್‌ನಲ್ಲಿ ಕರೆಸಿಕೊಂಡಿದ್ದ. ಬಳಿಕ ಆತನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ. ಮದುವೆಯಾಗುವುದಾಗಿ ಹೇಳಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇತ್ತೀಚಿನ ಪ್ರಕರಣಗಳು- ಚಾಕು ತೋರಿಸಿ ಅತ್ಯಾಚಾರ :ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ, ಅಪ್ರಾಪ್ತೆಯ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಕಳೆದ ತಿಂಗಳು ನಡೆದಿತ್ತು. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮತ್ತೊಂದು ಪ್ರಕರಣದಲ್ಲಿ, 76 ವರ್ಷದ ವೃದ್ಧನೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿತ್ತು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.

ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ: ಇತ್ತೀಚೆಗೆ ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಆರೋಪ ಸಾಬೀತಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ದಾವಣಗೆರೆ ಜಿಲ್ಲಾ ಮತ್ತು ಸತ್ರ (ಎಫ್.ಟಿ.ಎಸ್.ಸಿ-1) ನ್ಯಾಯಾಲಯ 17 ಸಾವಿರ ರೂಪಾಯಿ ದಂಡಸಹಿತ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಹರಿಹರ ತಾಲೂಕಿನ ವ್ಯಕ್ತಿ, ಬಾಲಕಿಯನ್ನು ಪುಸಲಾಯಿಸಿ ಬಸ್‌ನಲ್ಲಿ ಬಲವಂತವಾಗಿ ನೆರೆ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದು ದುಷ್ಕೃತ್ಯ ಎಸಗಿದ್ದ. ಹರಿಹರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

ABOUT THE AUTHOR

...view details