ಕರ್ನಾಟಕ

karnataka

ಚಿತ್ರದುರ್ಗ: ಮಹಿಳೆಯರ ರಕ್ಷಣೆಗೆ ರೋಡಿಗಿಳಿದ ನಿರ್ಭಯ ಬೈಕ್​ಗಳು

By

Published : Dec 15, 2020, 5:08 PM IST

bike
ಬೈಕ್

ಮಹಿಳೆಯರಿಗೆ ರಕ್ಷಣೆ ನೀಡಿ, ರಕ್ಷಾ‌ ಕವಚದಂತೆ ಕಾರ್ಯನಿರ್ವಹಿಸಲು ಎಸ್ಪಿ ಜಿ.ರಾಧಿಕಾ ಹಾಗೂ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಪೊಲೀಸ್​ ದ್ವಿಚಕ್ರ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಚಿತ್ರದುರ್ಗ:ಜಿಲ್ಲೆಯಲ್ಲಿನಿತ್ಯ ಒಂದಲ್ಲ ಒಂದು ಸರಗಳ್ಳತನ, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ಹೀಗೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಇವೆಲ್ಲವುಗಳಿಗೆ ಬ್ರೇಕ್​ ಹಾಕಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರಿಗೆ ಬಿಸಿ ಮುಟ್ಟಿಸಲು ಪೊಲೀಸ್​ ಬೈಕ್​ಗಳು ರೋಡಿಗಿಳಿದಿವೆ.

ಮಹಿಳೆಯರ ರಕ್ಷಣೆಗಾಗಿ ರೋಡಿಗಿಳಿದ ಬೈಕ್​ಗಳು

ಹೌದು, ಭಾರತ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳಿಗೆ 23 ಹೀರೋ ಗ್ಲಾಮರ್ ಡಿಸ್ಕ್ ಸೆಲ್ಫ್ ಕಾಸ್ಟ್ ಬಿಎಸ್​ನ 6 ದ್ವಿಚಕ್ರ ವಾಹನಗಳನ್ನು ಗಸ್ತು ತಿರುಗಲು ಎಸ್ಪಿ ಜಿ.ರಾಧಿಕಾ ಸಿಬ್ಬಂದಿಗೆ ವಿತರಿಸಿದರು. ಎಲ್ಲಾ ಠಾಣೆಗಳಿಗೆ ತಲಾ ಒಂದರಂತೆ ಹಾಗೂ ಮಹಿಳಾ ಠಾಣೆಗೆ 2 ಬೈಕ್ ಈಗಾಗಲೇ ಎಸ್ಪಿ ಜಿ.ರಾಧಿಕಾ ನೀಡಿದ್ದು, ಇಂದಿನಿಂದ ಮಾನವ ಕಳ್ಳಸಾಗಾಣಿಕೆ, ಯುವತಿಯರನ್ನು ಚುಡಾಯಿಸುವುದನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಗಳ ಗಸ್ತು ತಿರುಗಲಿದ್ದಾರೆ.

ಖದೀಮರೇ ಎಚ್ಚರ:ಯುವತಿಯರಿಗೆ ಕಿರುಕುಳ, ಸರಗಳ್ಳತನ ಸೇರಿದಂತೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗುವ ಖದೀಮರಿಗೆ ಬಿಸಿ ಮುಟ್ಟಿಸಲು ಈಗಾಗಲೇ ದ್ವಿಚಕ್ರ ವಾಹನಗಳು ರೋಡಿಗಿಳಿದಿವೆ. ಯಾವುದೇ ಕೃತ್ಯಗಳು ನಡೆದ ತಕ್ಷಣವೇ ಮಹಿಳೆಯರ ರಕ್ಷಣೆಗೆ ನಿಲ್ಲಲು ಹಾಗೂ ಖದೀಮರ ಹೆಡೆಮುರಿ ಕಟ್ಟಲು ರಕ್ಷಾ‌ ಕವಚದಂತೆ ಕಾರ್ಯನಿರ್ವಹಿಸಲು ಎಸ್ಪಿ ಜಿ.ರಾಧಿಕಾ ಹಾಗೂ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ದ್ವಿಚಕ್ರ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಬಾಲ್ಯ ವಿವಾಹದ ಮೇಲೆ ನಿಗಾ:ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಸಾಕಷ್ಟು ಬಾಲ್ಯ ವಿವಾಹದ ಪ್ರಕರಣಗಳು ಪೊಲೀಸರ ಗಮನಕ್ಕೆ ಬಂದಿವೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಬೈಕ್​ಗಳ ಮೂಲಕ ಪೊಲೀಸ್ ಸಿಬ್ಬಂದಿ ಬಾಲ್ಯ ವಿವಾಹ ತಡೆಗೆ‌ ಸಾಥ್ ನೀಡಲಿದ್ದಾರೆ. ಮಾನವ ಕಳ್ಳಸಾಗಾಣಿಕೆ ಮಾಡುವ ಖದೀಮರ ಹೆಡೆಮುರಿ ಕಟ್ಟಲು ದ್ವಿಚಕ್ರ ವಾಹನದ ಮೂಲಕ ಖಾಕಿ ಪಡೆ ಟೊಂಕಕಟ್ಟಿ ನಿಂತಿದೆ.

ಸರ್ಕಾರ ನೀಡಿರುವ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ, ಸರಗಳ್ಳತನ ಹಾಗೂ ಯುವತಿಯರಿಗೆ ಕಿರುಕುಳದಂತಹ ಪ್ರಕರಣಗಳನ್ನು ತಡೆಯಲು ದ್ವಿಚಕ್ರ ವಾಹನಗಳು ಸಹಾಯಕವಾಗಿವೆ. ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಪರಾಧ ಕೃತ್ಯಗಳನ್ನು ತೆಡೆಯುತ್ತೇವೆ ಎಂದು ಎಸ್​​ಪಿ ಜಿ.ರಾಧಿಕಾ ಈಟಿವಿ ಭಾರತಕ್ಕೆ ಹೇಳಿದ್ದಾರೆ.

ಸರ್ಕಾರದ ಯೋಜನೆಗೆ ಮಹಿಳೆಯರ ಸಂತಸ:ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಹಿಂದಿನಿಂದ 23 ದ್ವಿಚಕ್ರ ವಾಹನಗಳು ಗಸ್ತು ತಿರುಗಲು ಚಾಲನೆ ಸಿಗುತ್ತಿದ್ದಂತೆ ಜಿಲ್ಲೆಯ ಮಹಿಳೆಯರು ಕೂಡ ಸಂತಸಗೊಂಡಿದ್ದಾರೆ.‌ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರಿಗೆ ಸಹಾಯಕವಾಗುತ್ತದೆ. ಈ ಯೋಜನೆ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸಲಿ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಓದಿ...ಚಿತ್ರದುರ್ಗ: ಮೊದಲ ಹಂತದ ಚುನಾವಣೆಗೆ 5,831 ನಾಮಪತ್ರಗಳು ಸ್ವೀಕೃತ

ABOUT THE AUTHOR

...view details