ಕರ್ನಾಟಕ

karnataka

Monsoon Rain: ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ.. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭೂಮಿ ಕುಸಿತ, ಕಾಲುಸಂಕ ಮುಳುಗಡೆ

By

Published : Jul 8, 2023, 9:39 AM IST

Updated : Jul 8, 2023, 1:03 PM IST

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಧರೆ ಕುಸಿತ ಉಂಟಾಗಿದೆ. ಮರಗಳು ಧರೆಗುರುಳಿದ್ದು, ಕಾಲುಸಂಕ ಮುಳುಗಡೆಯಾಗಿದೆ.

heavy rain in chikkamagaluru
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ಮನೆಯೊಂದರ ಸಮೀಪವೇ ಭೂಮಿ ಕುಸಿದಿದ್ದು, ಆರು ಮನೆಗಳಿಗೆ ಆತಂಕ ಎದುರಾಗಿದೆ. ಉತ್ತಮೇಶ್ವರ ರಸ್ತೆ ಕಾಮಗಾರಿ ಇಲಾಖೆಯಿಂದ ಗ್ರಾಮ ಸಡಖ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಇಲ್ಲಿ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆ ಕುಸಿತ ಉಂಟಾಗಿದೆ. ಸ್ಥಳಕ್ಕೆ ಶೃಂಗೇರಿ ತಹಶೀಲ್ದಾರ್ ಗೌರಮ್ಮ ಹಾಗೂ ಅರ್.ಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಲಸಿನ ಮರ ಬಿದ್ದು ನೆಲಕಚ್ಚಿದ ಕೊಟ್ಟಿಗೆ : ಇನ್ನೊಂದೆಡೆ, ಕೊಪ್ಪ ತಾಲೂಕಿನ ಕೂಳೂರು ಸಮೀಪದ ಮಡುವಿನಕೆರೆ ಗ್ರಾಮದಲ್ಲಿ ಮಳೆ, ಗಾಳಿಗೆ ಮನೆಯ ಮೇಲೆ ಬೃಹತ್ ಗಾತ್ರದ ಹಲಸಿನ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ನಾರಾಯಣ ಎಂಬುವರ ಕೊಟ್ಟಿಗೆ ಸಂಪೂರ್ಣ ನೆಲಕಚ್ಚಿದ್ದು, ಮನೆಯ ಅರ್ಧ ಭಾಗಕ್ಕೆ ಹಾನಿಯಾಗಿದೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಲುಸಂಕ ಮುಳುಗಡೆ : ಭದ್ರಾ ನದಿಯ ಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮದ ಕಾಲುಸಂಕ ಸಂಪೂರ್ಣ ಮುಳುಗಡೆಯಾಗಿದೆ. ಪರಿಣಾಮ, ಶಾಲಾ ಮಕ್ಕಳು, ವೃದ್ಧರು, ತೋಟದ ಕಾರ್ಮಿಕರಿಗೆ ತೊಂದರೆಯಾಗಿದೆ. ಕಗ್ಗನಹಳ್ಳದಿಂದ ಹೊಳಲು, ಬಾಳೆಹೊಳೆ ಎಸ್ಟೇಟ್, ಬಿಳುಗೂರು, ಬರ್ಗಲ್, ಹೆಮ್ಮಕ್ಕಿ, ಗಬ್ಗಲ್ ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತವಾಗಿದೆ. ಕಳೆದ ಕೆಲ ವರ್ಷಗಳಿಂದ ಈ ಭಾಗಕ್ಕೆ ಸೇತುವೆ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸುತ್ತಿದ್ದರೂ ಸಹ ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ :ಮಳೆ ಅವಾಂತರಕ್ಕೂ ಮುನ್ನ ಎಚ್ಚೆತ್ತ ಜಿಲ್ಲಾಡಳಿತ.. ಹೊಸಕೋಟೆ, ದೇವನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕು..

ಇನ್ನು, ಕಳೆದ ಎರಡು ದಿನದಿಂದ ಮೇಲ್ಪಾಲ್ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ಮನೆಯ ಮುಂದೆ ನಿಂತಿದ್ದ ವೇಳೆ ಧರೆ ಕುಸಿತ ಉಂಟಾಗಿದ್ದು, ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯೊಬ್ಬರು ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್​ನಲ್ಲಿ ನಡೆದಿದೆ. ಮೇಲ್ಪಾಲ್ ಮೂಲದ ಶಶಿಕುಮಾರ್ ಎಂಬುವರ ಮನೆ ಮುಂದೆ ಭೂಮಿ ಕುಸಿದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ : ತುಂಗಾ ನದಿಯಲ್ಲಿ ಬೃಹದಾಕಾರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬರಲು ಪ್ರಾರಂಭವಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಶಾರಾದಾಂಬೆ ದೇವಾಲಯದ ತುಂಗಾ ನದಿ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಮೈದುಂಬಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಹರಿಯುತ್ತಿದ್ದು, ದಿನದಿಂದ ದಿನಕ್ಕೆ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಮಲೆನಾಡಿನ 34 ಗ್ರಾಮ ಪಂಚಾಯಿತಿಯ 77 ಗ್ರಾಮಗಳು ಅಪಾಯವಿದೆ ಎಂದು ಗುರುತು ಮಾಡಲಾಗಿದೆ.

ಇದನ್ನೂ ಓದಿ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ಭೂಕುಸಿತದಿಂದ ಮಹಿಳೆ ಸಾವು - 80 ಮನೆ ಜಲಾವೃತ!

Last Updated :Jul 8, 2023, 1:03 PM IST

ABOUT THE AUTHOR

...view details