ಕರ್ನಾಟಕ

karnataka

ಚುನಾವಣೆಗೆ ಸಿದ್ಧತೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಪೈಪೋಟಿ ಮಧ್ಯೆ ಮಗನನ್ನು ಅಖಾಡಕ್ಕಿಳಿಸಲು ಸಜ್ಜಾದ ಶಾಸಕ

By

Published : Dec 29, 2022, 9:43 AM IST

MLA V Muniappa

ಚುನಾವಣಾ ಕಣಕ್ಕೆ ಮಗನನ್ನೇ ಇಳಿಸಿದ ಶಾಸಕ ವಿ ಮುನಿಯಪ್ಪ- ಶಿಡ್ಲಘಟ್ಟದಲ್ಲಿಯೂ ಏರಿದೆ ಚುನಾವಣಾ ಕಾವು- ಪೈಪೋಟಿ ಮಧ್ಯೆ ಈಡೇರುವುದೇ ಕನಸು?

ಶಾಸಕ ವಿ ಮುನಿಯಪ್ಪ

ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಬಿರುಸಿನ ತಯಾರಿ ನಡೆಸಿವೆ. ಮತದಾರರನ್ನು ಸೆಳೆಯಲು ಈಗಿನಿಂದಲೇ ಇನ್ನಿಲ್ಲದ ಕಸರತ್ತು ನಡೆಸಿವೆ. ರಾಜ್ಯದ 224 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳು ಯಾರು ಎಂಬುದರ ಕುತೂಹಲ ಸಹ ಮೂಡಿವೆ. ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ಎಂಬಂತೆ ಈಗಾಗಲೇ ಜೆಡಿಎಸ್ 93 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಯಾಗಿದೆ. ಅಲ್ಲದೆ, ರಾಜ್ಯಾದ್ಯಂತ ಪಂರತ್ನ ರಥಯಾತ್ರೆಯನ್ನು ಸಹ ನಡೆಸುತ್ತಿದೆ. ಕಾಂಗ್ರೆಸ್​ ಪಕ್ಷ ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವ ಸಾಧ್ಯತೆಯಿದೆ. ​

ಈ ಮಧ್ಯೆ ಶಿಡ್ಲಘಟ್ಟದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿಯೇ ಇದೆ. ಒಂದು‌ ಕಡೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಂತಿಮ ಆಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು‌ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಂತಿಮ ಎನ್ನಲಾಗ್ತಿದ್ದರೂ ಸಹ ಹೆಸರನ್ನು ಮಾತ್ರ ಬಹಿರಂಗ ಪಡಿಸದ ಹೈಕಮಾಂಡ್​ ಕ್ಷೇತ್ರದಲ್ಲಿ ಶಾಸಕ ಸ್ಥಾನ ಭದ್ರಪಡಿಸಿಕೊಳ್ಳಲು ತಮ್ಮದೇ ಆದ ಶೈಲಿಯಲ್ಲಿ ಸರ್ಕಾರದ ಸಹಕಾರದಿಂದಲೇ ಸಾಕಷ್ಟು ಪ್ರಚಾರ ನಡೆಸುತ್ತಿದೆ.

ಮಗನನ್ನು ಅಖಾಡಕ್ಕಿಳಿಸಲು ಸಿದ್ಧತೆ.. ಆದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಆದ್ರೆ ಸ್ಥಳೀಯ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದನ್ನು ಅಂತಿಮ ಮಾಡಿದಂತಿದೆ. ಹೌದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕನಾಗಿ ಆರು ಬಾರಿ ಚುನಾವಣೆಯಲ್ಲಿ ಗೆದ್ದಂತಹ ಶಾಸಕ ವಿ ಮುನಿಯಪ್ಪ ಮುಂದಿನ ಚುನಾವಣೆಯಲ್ಲಿ ಮಗ ಶಶಿಧರ್ ಅವರನ್ನು ಕಣಕ್ಕೆ ಇಳಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಶಾಸಕ ಮುನಿಯಪ್ಪಗೆ ಕಾಡುತ್ತಿರುವ ಅನಾರೋಗ್ಯ.. ಸದ್ಯ ಆರೋಗ್ಯದ ಏರುಪೇರಿನ ಹಿನ್ನೆಲೆ ಈ ಬಾರಿಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಬದಲಾಗಿ ನನ್ನ ಮಗ ಶಶಿಧರ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ ಅಂತ ಶಾಸಕ ವಿ ಮುನಿಯಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ.

ಪೈಪೋಟಿ ಮಧ್ಯೆ ಸಿಗುತ್ತಾ ಟಕೆಟ್​.. ಇನ್ನು, ಶಿಡ್ಲಘಟ್ಟ ತಾಲೂಕಿನಲ್ಲಿ ಕಾಂಗ್ರೆಸ್ ನಾಯಕರ ಪೈಪೋಟಿ ಹೆಚ್ಚಾಗಿದ್ದರೂ ಸಹ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕ ಮುನಿಯಪ್ಪ ಅವರ ಮಗ ಶಶಿಧರ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್​ ಶಶಿಧರ್​ಗೆ ಸಿಗುತ್ತಾ ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್​ ನಿರ್ಧರಿಸಲಿದೆ.

ಮುನಿಯಪ್ಪರಿಂದಲೇ ಸಿಕ್ತು ಸ್ಪಷ್ಟನೆ.. ಸದ್ಯ ಇದರ ಬಗ್ಗೆ ಸ್ವತಃ ಶಾಸಕ ವಿ ಮುನಿಯಪ್ಪ ಅವರೇ ಸ್ಪಷ್ಟಪಡಿಸಿದ್ದು, ಉತ್ತಮರಿಗೆ ಮತವನ್ನ ನೀಡುವಂತೆ ಇದೇ ವೇಳೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ, ಇನ್ನೂ ಇಬ್ಬರು ಅಭ್ಯರ್ಥಿಗಳು ನಾವೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಅವರೆಕಾಯಿಗೆ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ವ್ಯಾಪಾರಸ್ಥರು ಕಂಗಾಲು!

ABOUT THE AUTHOR

...view details