ಬಳ್ಳಾರಿ:ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷಕ್ಕೆ ಅದರದೆ ಆದ ಹಿನ್ನೆಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ರೆಡ್ಡಿ ಹೊಸ ಪಕ್ಷ ಕಟ್ಟಿರುವುದರಿಂದ ಅವರ ಹಾದಿ ಅವರಿಗೆ, ನಮ್ಮ ಹಾದಿ ನಮಗೆ. ಅವರ ನಮ್ಮ ಸ್ನೇಹಕ್ಕೆ ಧಕ್ಕೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಪಕ್ಷ ಅವರಿಗೆ ಶಕ್ತಿಯಾಗಿ ನಿಂತಿದೆ:ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಬಗ್ಗೆ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದರು. ರೆಡ್ಡಿ ಬುದ್ಧಿವಂತರು, ತಿಳಿದವರು, ಅನುಭವ ಇದ್ದ ವ್ಯಕ್ತಿ ಇದ್ದಾರೆ. ನನ್ನ ಪ್ರಾಣ ಸ್ನೇಹಿತನಾಗಿರುವ ರೆಡ್ಡಿ ಅವರು ಬಿಜೆಪಿ ಶಕ್ತಿಯಾಗಿದ್ದರು. ಪಕ್ಷವೂ ಅವರಿಗೆ ಶಕ್ತಿಯಾಗಿ ನಿಂತಿದೆ. ನನ್ನ ಬೆಳವಣಿಗೆಗೆ ಹೇಗೆ ಜನಾರ್ದನ ರೆಡ್ಡಿ ಅವರು ಸಹಕಾರಿ ಆಗಿದ್ದರೋ, ಹಾಗೆಯೇ ನಾನು ಅವರಿಗೆ ಬಂಡೆಯಾಗಿನಿಂತಿದ್ದೆ ಎಂದು ಶ್ರೀರಾಮುಲು ಹೇಳಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ: ನಾನಂತೂ ಬಿಜೆಪಿಯಲ್ಲಿ ಇರುತ್ತೇನೆ. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವೆ. ಅವರು ವೈಯಕ್ತಿಕವಾಗಿ ಪಕ್ಷ ಮಾಡಿದ್ದಾರೆ. ಬಿಜೆಪಿ ಅವರನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ಅವರೂ ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದ ಸಚಿವ ಶ್ರೀರಾಮುಲು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.
ನಾನು ಒಳ್ಳೆ ಸ್ನೇಹಿತನಾಗಿ ಇರುತ್ತೇನೆ:ಕರ್ನಾಟಕದಲ್ಲಿ 2023ಕ್ಕೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಜನರ್ದಾನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದ್ದಾರೆ. ಅದರ ಬಗ್ಗೆ ನಾನು ಯಾವುದೇ ಚರ್ಚೆ ಮಾಡುವುದಿಲ್ಲ. ಇಂದಿನ ದಿನದಲ್ಲಿ ರಾಜಕಾರಣ ಬೇರೆ ಮತ್ತು ಸ್ನೇಹವೇ ಬೇರೆ. ನಾನು ಅವರಿಗೆ ಒಳ್ಳೆ ಸ್ನೇಹಿತನಾಗಿ ಇರುತ್ತೇನೆ. ನನ್ನ ಪಕ್ಷದ ಸಿದ್ಧಾಂತ ಬೇರೆ, ಅವರ ಪಕ್ಷದ ಸಿದ್ಧಾಂತ ಬೇರೆ ಎಂದು ಶ್ರಿರಾಮುಲು ಹೇಳಿದರು.