ಕರ್ನಾಟಕ

karnataka

ಕಂದಾಯ ಇಲಾಖೆ ದಾಖಲೆ ಡಿಜಿಟಲೀಕರಣ ಮಾಡುವಲ್ಲಿ ಬಳ್ಳಾರಿಗೆ ಮೊದಲ ಸ್ಥಾನ: ಡಿಸಿ

By ETV Bharat Karnataka Team

Published : Dec 8, 2023, 12:28 PM IST

ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಒಟ್ಟು 1,46,063 ಕಡತಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

bellary dc
ಪ್ರಶಾಂತ್ ಕುಮಾರ್ ಮಿಶ್ರಾ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ : ರಾಜ್ಯದಲ್ಲಿಯೇ ಕಂದಾಯ ಇಲಾಖೆ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು.

ನಿನ್ನೆ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರ ಇಚ್ಛಾಶಕ್ತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಭಿಲೇಖಾಲಯದಲ್ಲಿ ಹಳೇ ಕಡತಗಳ ಪಟ್ಟಿ ಮತ್ತು ಸೂಚ್ಯಂಕ ಕಾರ್ಯ ಕೈಗೆತ್ತಿಕೊಂಡಿದ್ದು, ಸರ್ಕಾರದ ವೆಬ್‍ಸೈಟ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ ಒಟ್ಟು 1,46,063 ಕಡತಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕಂದಾಯ ಗ್ರಾಮ: ಜಿಲ್ಲೆಯಲ್ಲಿ ಒಟ್ಟು 73 ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿರ್ವತಿಸಲು ಗುರುತಿಸಲಾಗಿದ್ದು, ಈ ಪೈಕಿ 06 ತಿಂಗಳ ಅವಧಿಯಲ್ಲಿ 14 ಪ್ರಾಥಮಿಕ ಅಧಿಸೂಚನೆ ಮತ್ತು 07 ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.

ಬರ ಪರಿಸ್ಥಿತಿ ನಿರ್ವಹಣೆ: ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಿ ಕ್ರಿಯಾ ಯೋಜನೆ ರೂಪಿಸಿಕೊಂಡಿದ್ದು, ಸಮಸ್ಯೆ ನಿವಾರಿಸಲು ಖಾಸಗಿ ಬೋರ್​ವೆಲ್‍ಗಳನ್ನು ಬಾಡಿಗೆಗೆ ಪಡೆಯಲಾಗುವುದು ಹಾಗೂ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಪ್ರಸ್ತುತ ಜಿಲ್ಲಾಧಿಕಾರಿಗಳ ಎಸ್​​ಡಿಆರ್​ಎಫ್​​ಡಿ ಖಾತೆಯಲ್ಲಿ ರೂ.37 ಕೋಟಿ ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇರುವುದಿಲ್ಲ. ತಾಲೂಕು ತಹಶೀಲ್ದಾರರ ಎಸ್​​​​ ಡಿ ಆರ್​​​ ಎಫ್ ಖಾತೆಯಲ್ಲಿ ಒಟ್ಟು 212 ಲಕ್ಷ ರೂ. ಬರ ನಿರ್ವಹಣೆಗೆ ಲಭ್ಯವಿದ್ದು, ತುರ್ತು ಕಾರ್ಯಗಳಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವಿನ ಸಮಸ್ಯೆಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಸ್ತುತ 2,47,132 ಮೆ. ಟನ್ ಮೇವು ಲಭ್ಯವಿದ್ದು, ಮುಂದಿನ 25 ವಾರಗಳಿಗೆ ಸಾಕಾಗುತ್ತದೆ. ಮೇವಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಂತರ್ ರಾಜ್ಯ ಮೇವು ಸಾಗಾಣಿಕೆ ನಿರ್ಬಂಧಿಸಲಾಗಿದ್ದು, ಬಳ್ಳಾರಿ ಮತ್ತು ಸಿರುಗುಪ್ಪದಲ್ಲಿ ಮೇವಿನ ಚೆಕ್‍ಪೋಸ್ಟ್​​​​​ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿದ್ದ ಮೇವನ್ನು ಚೆಕ್‍ಪೋಸ್ಟ್‍ಗಳಲ್ಲಿ ಸೀಜ್ ಮಾಡಲಾಗಿದೆ ಎಂದರು.

ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಿ:ಬರ ಪರಿಸ್ಥಿತಿಯಿಂದ ಹಾನಿಯಾದ ಬೆಳೆ ನಷ್ಟಕ್ಕೆ ಪರಿಹಾರವನ್ನು ಸರ್ಕಾರವು ಫ್ರೂಟ್ಸ್ ತಂತ್ರಾಂಶದ ಮೂಲಕ ನೀಡುತ್ತಿದ್ದು, ನೋಂದಣಿ ಮಾಡಿಸಿಕೊಳ್ಳದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯ ಕಚೇರಿಗೆ ತೆರಳಿ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಿಶ್ರಾ ತಿಳಿಸಿದರು.

ಭೂಮಿ ಯೋಜನೆ : ಜಿಲ್ಲೆಯಲ್ಲಿ ನೋಟಿಸ್ ಇಲ್ಲದೇ ಇರುವ ಪ್ರಕರಣದಲ್ಲಿ 30,350 ಪ್ರಕರಣಗಳನ್ನು ಒಂದು ದಿನದ ಕಾಲಾವಕಾಶಗಳಲ್ಲಿ ವಿಲೀನಗೊಳಿಸಲಾಗಿದೆ. ನೋಂದಾಯಿತ ಖಾತೆ ಬದಲಾವಣೆ ಪ್ರಕರಣಗಳು (ತಿಳಿವಳಿಕೆ ಚೀಟಿ) ನೋಟಿಸ್ ನೀಡಿ ಸರ್ಕಾರ ನಿಗದಿಪಡಿಸಿದ 07 ದಿನ ಕಾಲಮಿತಿ ಒಳಗೆ 7,962 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ನೋಂದಾಯಿತವಲ್ಲದ ಖಾತೆ ಬದಲಾವಣೆ ಪ್ರಕರಣಗಳು ನೋಟಿಸ್​ ನೀಡಿ ಸರ್ಕಾರ ನಿಗದಿಪಡಿಸಿದ 15 ದಿನ ಕಾಲಮಿತಿ ಒಳಗೆ 2,406 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ ಎಂದು ತಿಳಿಸಿದರು.

ಆರ್​ಟಿಸಿಯಲ್ಲಿ 19,000 ಪ್ರಕರಣಗಳಿದ್ದು, ಈ ಪೈಕಿ 7518 ವಿಲೇಗೊಳಿಸಲಾಗಿದೆ. ತಹಶೀಲ್ದಾರ್​ ಹಂತದಲ್ಲಿ ಕಂದಾಯ 1,405 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟ 152 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಸಹಾಯಕ ಆಯುಕ್ತರ ಹಂತದಲ್ಲಿ 341 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟ 04 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ 70 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ. ಒಂದು ವರ್ಷ ಮೇಲ್ಪಟ್ಟ 01 ಪ್ರಕರಣಗಳನ್ನು ವಿಲೇಗೊಳಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಲೋಕ ಅದಾಲತ್ : 2.60 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ: ನ್ಯಾ.ಪಿ.ಎಸ್. ದಿನೇಶ್ ಕುಮಾರ್

ಇನಾಂ :ಕರ್ನಾಟಕ ಇನಾಂ ರದ್ಧತಿ ಕಾಯ್ದೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ರೀ ಗ್ರಾಂಟ್‍ಗಾಗಿ ಒಟ್ಟು 13,102 ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳ ಪೈಕಿ 25 ಅರ್ಜಿಗಳು ತಿರಸ್ಕೃತ ಮಾಡಿ 5,645 ಅರ್ಜಿಗಳು ರೀ-ಗ್ರಾಂಟ್ ಮಾಡಿ ಪಟ್ಟಾ ನೀಡಲಾಗಿದೆ. ಇನ್ನು ವಿಚಾರಣೆಗೆ 7,432 ಬಾಕಿ ಉಳಿದಿರುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2024ರ ಪ್ರಕ್ರಿಯೆ ನಡೆಯುತ್ತಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿ.09 ಕೊನೆಯ ದಿನವಾಗಿದೆ. ಜಿಲ್ಲೆಯ 18 ವರ್ಷ ತುಂಬಿದ ಎಲ್ಲ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ತಿದ್ದುಪಡಿಗಾಗಿ ತಾಲೂಕು ಕಚೇರಿಗೆ ಅಥವಾ ಸಂಬಂಧಪಟ್ಟ ಬಿಎಲ್‍ಓಗಳನ್ನು ಭೇಟಿ ಮಾಡಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಹಾಗೂ ಆಪ್ತ ಸಹಾಯಕರು ಉಪಸ್ಥಿತರಿದ್ದರು.

ABOUT THE AUTHOR

...view details