ಕರ್ನಾಟಕ

karnataka

'ರಾಜ್ಯದ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್‌ ಡೋಸ್‌ ಗುರಿ: 470ಕ್ಕೂ ಅಧಿಕ 'ನಮ್ಮ ಕ್ಲಿನಿಕ್‌' ಆರಂಭ'

By

Published : Jul 16, 2022, 4:57 PM IST

ರಾಜ್ಯದಲ್ಲಿ ಮುಂದಿನ 75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್ ಮತ್ತು 470ಕ್ಕೂ ಅಧಿಕ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

vaccination-program-at-victoria-hospital-by-health-department-in-bangalore
ರಾಜ್ಯದ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್‌ ಡೋಸ್‌ ಗುರಿ: 470 ಕ್ಕೂ ಅಧಿಕ ʼನಮ್ಮ ಕ್ಲಿನಿಕ್‌ʼ ಆರಂಭ : ಡಾ.ಕೆ.‌ ಸುಧಾಕರ್

ಬೆಂಗಳೂರು: ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಮುಂದಿನ 75 ದಿನಗಳಲ್ಲಿ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಉಚಿತ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಆಯೋಜಿಸಿದ್ದ ಲಸಿಕಾಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಶೇ.100 ಕ್ಕೂ ಅಧಿಕ ಪ್ರಮಾಣದಲ್ಲಿ ಎರಡೂ ಡೋಸ್‌ ಲಸಿಕೆ ನೀಡಿದೆ. 3ನೇ ಡೋಸ್‌ ಅನ್ನು ಕೂಡ ಮುಂದಿನ 75 ದಿನಗಳಲ್ಲಿ ರಾಜ್ಯದ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಕೊಡಬೇಕು ಎನ್ನುವ ಗುರಿ ಇದೆ. ಈ ಗುರಿ ತಲುಪಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ರಾಜ್ಯದ ವಿವಿಧೆಡೆ ಏಳೂವರೆ ಸಾವಿರ ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರು ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದು ಹೇಳಿದರು.

ಕೊರೊನಾ ಬೂಸ್ಟರ್ ಡೋಸ್​​ಗೆ ಚಾಲನೆ:ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡೀ ದೇಶಕ್ಕೆ ಕೊರೊನಾ ಲಸಿಕೆಯ 2 ಡೋಸ್‌ಗಳನ್ನು ಉಚಿತವಾಗಿ ನೀಡಿದ್ದರು. ಶುಕ್ರವಾರದಿಂದ ಬೂಸ್ಟರ್‌ ಡೋಸ್‌ ಕೂಡ ಉಚಿತವಾಗಿ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಈ ರೀತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದ 75 ವಿವಿಧ ಕ್ಷೇತ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಏಕ ಕಾಲಕ್ಕೆ ಆರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚೆಗೆ ಅನೇಕರಿಗೆ ಕೋವಿಡ್‌ ಬಂದರೆ ಏನಾಗುತ್ತದೆ ಎನ್ನುವ ಉದಾಸೀನತೆ ಇದೆ. 2 ಡೋಸ್‌ ಲಸಿಕೆ ತೆಗೆದುಕೊಂಡು 6 ತಿಂಗಳುಗಳ ಮೇಲಾಗಿದೆ. ಇನ್ನೂ ಕೆಲವರು 2ನೇ ಡೋಸ್‌ ತೆಗೆದುಕೊಂಡು 1 ವರ್ಷದ ಮೇಲಾಗಿದೆ. ಇಂತಹವರಿಗೆ ಅಪಾಯ ಇರುತ್ತದೆ. ಹೀಗಾಗಿ ಲಸಿಕಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಇಲ್ಲಿಯ ತನಕ ಕೋವಿಡ್‌ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಲು ಲಸಿಕಾಕರಣದ ವೇಗವೇ ಕಾರಣವಾಗಿದೆ. ಹೀಗಾಗಿ ಎಲ್ಲರೂ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

3 ತಿಂಗಳಲ್ಲಿ ರಾಜ್ಯದಲ್ಲಿ 470 ಕ್ಕೂ ಹೆಚ್ಚು ಕಡೆ 'ನಮ್ಮ ಕ್ಲಿನಿಕ್‌' ಆರಂಭ :ಮುಖ್ಯಮಂತ್ರಿಗಳು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಶೀಘ್ರದಲ್ಲಿ ರಾಜ್ಯದ 470 ಕಡೆಗಳಲ್ಲಿ ʼನಮ್ಮ ಕ್ಲಿನಿಕ್‌ʼ ಆರಂಭವಾಗಲಿದೆ. ಮುಂದಿನ ಮೂರು ತಿಂಗಳ ಒಳಗೆ ಈ ಕ್ಲಿನಿಕ್‌ಗಳು ಆರಂಭವಾಗಲಿವೆ. ರಾಜಧಾನಿ ಬೆಂಗಳೂರಿನಲ್ಲಿಯೇ ಒಟ್ಟು 243 ನಮ್ಮ ಕ್ಲಿನಿಕ್‌ ಆರಂಭವಾಗಲಿವೆ. ಜುಲೈ 28 ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮೊದಲ ಕ್ಲಿನಿಕ್‌ ಆರಂಭಿಸಲಾಗುವುದು ಎಂದು ಹೇಳಿದರು.

ಯಾವ ದೇಶದಲ್ಲೂ ಕೊರೊನಾ ಉಚಿತ ಲಸಿಕೆ ನೀಡಿಲ್ಲ. ವಿದೇಶದಲ್ಲಿ ಕೊರೊನಾ ಪರೀಕ್ಷೆ ಮಾಡಲು ಕೂಡ 10,000 ರೂ. ಕೊಡಬೇಕು. ಆದರೆ 133 ಕೋಟಿ ಜನರಿರುವ ದೇಶದಲ್ಲಿ ಕೊರೊನಾ ಟೆಸ್ಟ್‌, ಲಸಿಕೆ ಎಲ್ಲವೂ ಉಚಿತ. ಕೊರೊನಾ ನಿಯಂತ್ರಣ ಮಾಡುವಲ್ಲಿ ಪ್ರಧಾನಿಯವರ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ದೊಡ್ಡದು. ಇಂತಹ ಸಮರ್ಥ ನಾಯಕತ್ವವನ್ನು ಜನರು ಮರೆಯುವ ಹಾಗಿಲ್ಲ ಎಂದರು. ಜೊತೆಗೆ ಕೊರೊನಾ ನಿರ್ವಹಣೆ ಮಾಡಲು ಶ್ರಮಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಕರಿಗೆ ಸಚಿವರು ಧನ್ಯವಾದ ಅರ್ಪಿಸಿದರು.

ಓದಿ :ಕೆಜಿಎಫ್​: ಅಂಬೇಡ್ಕರ್ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ

TAGGED:

ABOUT THE AUTHOR

...view details