ಕರ್ನಾಟಕ

karnataka

ಅಲಿಬಾಬಾ ಹಾಗೂ 40 ಕಳ್ಳರ ತಂಡದಲ್ಲಿ ಸುಧಾಕರ್ ಒಬ್ಬ ಸದಸ್ಯ: ಸಿದ್ದರಾಮಯ್ಯ ವಾಗ್ದಾಳಿ

By

Published : Jan 25, 2023, 1:53 PM IST

Updated : Jan 25, 2023, 2:37 PM IST

Siddaramayya Pressmeet
ಸಿದ್ದರಾಮಯ್ಯ ಸುದ್ದಿಗೋಷ್ಠಿ

ಅಧಿಕಾರ, ಹಣದ ಆಸೆಗೆ ಕಾಂಗ್ರೆಸ್​ ತೊರೆದು ಈಗ ಬಿಜೆಪಿ ಸೇರಿರುವ ಡಾ ಸುಧಾಕರ್​ ಈಗ ಕಾಂಗ್ರೆಸ್​ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗುಬಾಣ ಬಿಟ್ಟಿದ್ದಾರೆ.

ಸಿದ್ದರಾಮಯ್ಯ ಸುದ್ದಿಗೋಷ್ಠಿ

ಬೆಂಗಳೂರು:ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಟೆಂಡರ್ ಶ್ಯೂರ್ ಅಡಿ 35,000 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ಆಗಿದೆ ಎಂದು ಡಾಕ್ಟರ್ ಕೆ ಸುಧಾಕರ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ. ಕೆ ಸುಧಾಕರ್ ಹಣದ ಆಸೆ ಹಾಗೂ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದಾರೆ. ಭ್ರಷ್ಟಾಚಾರ ಮಾಡುವ ಅಲಿಬಾಬಾ 40 ಕಳ್ಳರ ಗುಂಪಲ್ಲಿ ಇವನೂ ಒಬ್ಬ ಸದಸ್ಯ. ಇವರು ಏನೆಲ್ಲಾ ಮಾಡಿದ್ದಾರೆ ಅನ್ನೋದರ ಸಂಬಂಧ ಎಚ್.ಕೆ. ಪಾಟೀಲ್ ನೇತೃತ್ವದ ಪಬ್ಲಿಕ್ ಅಪೇರ್ಸ್ ಕಮಿಟಿ ವರದಿ ನೀಡಿದೆ.

ಕೋವಿಡ್ ಸಂದರ್ಭದಲ್ಲಿ 3 ಸಾವಿರ ಕೋಟಿ ಅಕ್ರಮ ಆಗಿದೆ ಎಂದಿದ್ದಾರೆ. ಇದರ ತನಿಖೆ ಆಗಿಲ್ಲ. ಸ್ಪೀಕರ್ ಕಾಗೇರಿ ತಾವಿನ್ನೂ ಆರ್​ಎಸ್​ಎಸ್​ನವರು ಅಂತಲೇ ಅಂದುಕೊಂಡಿದ್ದಾರೆ. ಮರುಪರಿಶೀಲನೆ ನಡೆಸುವಂತೆ ತಿಳಿಸಿದರೂ ನಿರ್ಲಕ್ಷ್ಯ ಮಾಡಲಾಗಿದೆ. ಇಲ್ಲಿ ಲಂಚ, ಅವ್ಯವಹಾರ ನಡೆದಿಲ್ಲ ಅಂದರೆ ವಿಶೇಷ ಆಡಿಟ್ ನಡೆಸಬಹುದಿತ್ತು. ಯಾಕೆ ಬಿಜೆಪಿ ಹಿಂದೇಟು ಹಾಕಿದೆ. ಲೆಕ್ಕ ಪರಿಶೀಲನೆಗೆ ಸರ್ಕಾರ ಯಾಕೆ ಒಪ್ಪಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಸುಳ್ಳಿನ ಕಾರ್ಖಾನೆ: ಇವರು ಎಂಎಲ್​ಎಸಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಂಬುವರನ್ನು ಸುಳ್ಳು ಹೇಳುವುದಕ್ಕೇ ಇರಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ತಾಳೆ ಆಗದ ಲೆಕ್ಕದ ವಿವರವನ್ನು ನೀಡುತ್ತಿದ್ದೇನೆ. ಸುಳ್ಳು ಹೇಳಿ ಜನರಿಗೆ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುವುದು ಉದ್ದೇಶ. ನನ್ನನ್ನು ಕಂಡರೆ ಹೆದರಿಕೆ. ಬಸವರಾಜ ಬೊಮ್ಮಾಯಿ ಆರ್​ಎಸ್​ಎಸ್​ನ ಕೈಗೊಂಬೆ.

ಲಂಚ ಹೊಡೆಯುವ ಗಿರಾಕಿಗಳಿಗೆ ಸಿಎಜಿ ವರದಿ ಓದಲು‌ ಸಮಯ‌ ಇಲ್ಲ. ರವಿಕುಮಾರ್ ನೀಡಿದ ತಪ್ಪು ಮಾಹಿತಿಯನ್ನು ಜನರಿಗೆ ನೀಡುವ ಕೆಲಸ ಮಾಡಿದ್ದಾನೆ. ಇವರ ಆರ್ಥಿಕ ಅಶಿಸ್ತು ಇದು. ಅವ್ಯವಹಾರ ಅಂತ ಬಿಂಬಿಸಲಾಗಿದೆ. ಜನರಿಗೆ ತಪ್ಪು ಮಾಹಿತಿ ತಲುಪಬಾರದು. 13 ಸಾರಿ ವ್ಯವಸ್ಥಿತ ಆರ್ಥಿಕ ಶಿಸ್ತಿನ ಬಜೆಟ್ ಮಂಡಿಸಿದ್ದು, ಈ ಸಿದ್ದರಾಮಯ್ಯ. ಬಿಜೆಪಿ ಸರ್ಕಾರದಲ್ಲಿ ಇದು ಆಗಿಲ್ಲ. ಭ್ರಷ್ಟ ವ್ಯವಸ್ಥೆ ಮುಂದುವರಿಸಿಕೊಂಡು ಸಾಗಿದ್ದಾರೆ. ಸಾಲ ಮಾಡುವುದು ತಪ್ಪಲ್ಲ. ಒಂದು ಮಿತಿಯಲ್ಲಿ ಎಲ್ಲವೂ ಆಗಬೇಕು ಎಂದರು.

ಸಮಿತಿ ಮಾಡಿ ತನಿಖೆ ನಡೆಸಿ: ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವ ಕಾರ್ಯವನ್ನು ನಾನು ಮಾಡಿಲ್ಲ. ಬಿಜೆಪಿ ಸರ್ಕಾರ ಮಾಡಿದೆ. ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ರೂ. ಮೊತ್ತದ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಹ ಅದೇ ಕೆಲಸ ಮಾಡಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದು, ಆರ್ಥಿಕ ಶಿಸ್ತು ಹಾಳಾಗಿದೆ. ಈಗ ನಮ್ಮ ಅವಧಿಯಲ್ಲಿ ನಡೆದದ್ದು ಅವ್ಯವಹಾರ ಅಲ್ಲ. ಅದನ್ನು ಹಾಗಂತ ಲೋಕಾಯುಕ್ತಕ್ಕೆ ದೂರು ನೀಡಿದ್ದು ತಪ್ಪು.

ನಾವು ಸಾಕಷ್ಟು ಪ್ರಕರಣ ಸಿಬಿಐಗೆ ನೀಡಿದ್ದೆವು. ಆದರೆ, ನಾವು‌ ಮಾಡಿದ ಅವ್ಯವಹಾರ ಆರೋಪದಲ್ಲಿ ಒಂದು ಪ್ರಕರಣವನ್ನೂ ಸಿಬಿಐಗೆ ನೀಡಿಲ್ಲ. ನಾವು 8 ಪ್ರಕರಣ ಸಲ್ಲಿಕೆ ಮಾಡಿದ್ದೆವು. ಈಗ ಸರ್ಕಾರ ನಮ್ಮ ಮೇಲೆ ಅವರು ಮಾಡಿದ ಆರೋಪ, ಇವರ ಮೇಲೆ ನಾವು ಮಾಡಿದ ಆರೋಪದ ನ್ಯಾಯಾಂಗ ತನಿಖೆ ನಡೆಸಿ. ಸುಪ್ರೀಂಕೋರ್ಟ್ ನ್ಯಾಯ ಮೂರ್ತಿ ಮೂಲಕ ಒಂದು ಸಮಿತಿ ಮಾಡಿ ತನಿಖೆ ನಡೆಸಿ ಎಂದರು.

ಸುಧಾಕರ್ ಪರ ನಾನು ಮೋಯ್ಲಿ ಜತೆ ಜಗಳ ಆಡಿದ್ದೆ:ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಯಶಸ್ವಿಯಾಗಿ ನಾವು ಜನಧ್ವನಿ ಯಾತ್ರೆ ಯಶಸ್ವಿಯಾದ ಬಳಿಕ ಹೆದರಿ ಸಚಿವ ಡಾ. ಸುಧಾಕರ್ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅಂದು ಮೊದಲ ಬಾರಿಗೆ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಅಂದು ಸಂಸದರಾಗಿದ್ದ ಡಾ.ಎಂ. ವೀರಪ್ಪ ಮೊಯ್ಲಿ ಇವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರು. ಅವನು ಫ್ರಾಡು, ಟಿಕೆಟ್ ಬೇಡ ಎಂದಿದ್ದರು. ಆಂಜಿನಪ್ಪಗೆ ಟಿಕೆಟ್ ನೀಡಲು ತಿಳಿಸಿದ್ದರು.

ಅಂದು ಸುಧಾಕರ್ ಪರ ನಾನು ಮೋಯ್ಲಿ ಜತೆ ಜಗಳ ಆಡಿದ್ದೆ. ಎಲ್ಲ ಮುಗಿದಿದೆ. ಈಗ ಒಳ್ಳೆ ಕ್ಯಾಂಡಿಡೇಟ್ ಹಾಕಿ ಅವನನ್ನು ಸೋಲಿಸ್ತೇವೆ. ಆರ್​ಎಸ್​ಎಸ್​ನವರು ಇವನಿಂದ ಮಾತಾಡಿಸ್ತಿದ್ದಾರೆ. ಮಹಾ ಬುದ್ಧಿವಂತ ಅಂದುಕೊಂಡು ಬಿಟ್ಟಿದ್ದಾನೆ. ಟೆಂಡರ್ ಶ್ಯೂರ್ ಎಲ್ಲಾ 2008 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಆಗಿದ್ದು. ನಮ್ಮ ಸರ್ಕಾರ ಅಕ್ರಮ ಮಾಡಲು ಹೇಗೆ ಸಾಧ್ಯ? ನಮ್ಮ ಸರ್ಕಾರ ಜತೆಗಿದ್ದು, ಈಗ ಬಿಜೆಪಿ ಸೇರಿ ಕಳ್ಳನಾಗಿದ್ದಾನೆ ಎಂದರು.

ರಮೇಶ್ ಜಾರಕಿಹೊಳಿ ಮತಕ್ಕೆ 6 ಸಾವಿರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದು ಆಮಿಷ ಅಲ್ಲವಾ? ನಾವು 200 ಯೂನಿಟ್ ಉಚಿತ ವಿದ್ಯುತ್ ನೀಡಿತ್ತೇವೆ ಎನ್ನುವುದು ಭರವಸೆ. ಅದರ ವ್ಯತ್ಯಾಸ ಗೊತ್ತಾಗಲ್ಲವಾ? ಅವರ ಬಳಿ ಯಾವುದೇ ದಾಖಲೆ ಇಲ್ಲವೇ? ಆಧಾರ ಇದ್ದರೆ ತನಿಖೆ ನಡೆಸಲಿ. ಮನುಷ್ಯತ್ವದ ಪ್ರಕಾರ ನಾವು ಇರುವುದು. ಸುಳ್ಳು ಹೇಳಿಲ್ಲ, ಹೇಳಿದ್ದರೆ ಕ್ಷಮೆ ಕೇಳುತ್ತೇನೆ.

ಭಾಷೆ ಒರಟು, ಸುಳ್ಳು ಹೇಳಿಲ್ಲ. ಇವರ ಮನೆ ಹಾಳಾಗ ಅಂತ ವಾಡಿಕೆಯಂತೆ ಹೇಳಿದ್ದೆ. ಬಸವರಾಜ ಬೊಮ್ಮಾಯಿ ಮನೆ ಹಾಳಾಗಲಿ ಎಂದಿಲ್ಲ. ಆಪರೇಷನ್ ಕಮಲ ಬಿಜೆಪಿಗೆ ಹೊಸದಲ್ಲ. ಮಹದಾಯಿ ವಿಚಾರವಾಗಿ ರಾಜ್ಯ ಸರ್ಕಾರ ಮೂಲಗಳ ವರ್ಷ ಯಾಕೆ ಸುಮ್ಮನಿತ್ತು? ಗೋವಾ ಸರ್ಕಾರ ಮಾಡುವ ಹೋರಾಟ ಮಾಡಲಿ. ತ್ರಿಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ: ಸಿದ್ದರಾಮಯ್ಯ ವಾಗ್ದಾಳಿ

Last Updated :Jan 25, 2023, 2:37 PM IST

ABOUT THE AUTHOR

...view details