ಕರ್ನಾಟಕ

karnataka

ಹೊಸ ವರ್ಷಾಚರಣೆಗೆ ಸಿದ್ಧತೆ: ಮಾದಕ ದಂಧೆಕೋರರ ಮೇಲೆ ಪೊಲೀಸರ ಹದ್ದಿನ ಕಣ್ಣು

By ETV Bharat Karnataka Team

Published : Dec 17, 2023, 10:46 AM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ಸರಬರಾಜು ದಂಧೆಯಲ್ಲಿ ತೊಡಗಿರುವವರ ಮೇಲೆ ನಿಗಾ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.

B. Dayanand
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು :ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. 2024 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನರು ಕಾಯುತ್ತಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬಹಳ ವಿಶೇಷವಾಗಿದ್ದು, ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವವರ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಹೌದು,ಹೊಸ ವರ್ಷದ ಸಂಭ್ರಮಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚನೆ ನೀಡಿದ್ದಾರೆ. ಪಾರ್ಟಿ ಪ್ರಿಯರ ನೆಚ್ಚಿನ ಸ್ಥಳಗಳಿಗೆ ಮಾದಕ ಪದಾರ್ಥಗಳು ಹೆಚ್ಚಾಗಿ ಸರಬರಾಜು ಆಗುವುದರಿಂದ ಆ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾಗಿರುವ ಮಾದಕ ದಂಧೆಕೋರರ ಮೇಲೆ ಕಣ್ಣಿಡಲು ಸೂಚಿಸಲಾಗಿದೆ.

ಇದನ್ನೂ ಓದಿ :ಮಾನವ ಕಳ್ಳಸಾಗಣೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ : 14 ಜನರ ಬಂಧನ, 20 ಮಹಿಳೆಯರ ರಕ್ಷಣೆ

ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸುಮಾರು 180 ಜನ ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಿದ್ದಾರೆ. ಆ ಪೈಕಿ ವಿದೇಶಿ ಮೂಲದ ಆರೋಪಿಗಳೇ ಹೆಚ್ಚಾಗಿದ್ದಾರೆ. ಅನೇಕರು ಪುನಃ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವ ಮಾಹಿತಿಯಿದ್ದು, ಆಯಾ ವಿಭಾಗದ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡು, ಕಠಿಣ ಎಚ್ಚರಿಕೆ ನೀಡುವಂತೆ ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ವಿದೇಶಿ ಪ್ರಜೆಗಳು ಹೆಚ್ಚು ವಾಸಿಸುವ ಸ್ಥಳದಲ್ಲಿ ಮಫ್ತಿ ಕಾರ್ಯಾಚರಣೆ, ರೆಸಾರ್ಟ್, ರೇವ್ ಪಾರ್ಟಿ ನಡೆಯುವಂತಹ ಸ್ಥಳ, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್, ಪಬ್ ಬಾರ್​ಗಳ ಮಾಲೀಕರನ್ನು ಕರೆಯಿಸಿ ಎಚ್ಚರಿಸಲು ಆಯುಕ್ತರು ಸೂಚಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರು ಇನ್ನು ಸೇಫ್ ಸಿಟಿ : ಅತ್ಯಾಧುನಿಕ ಪೊಲೀಸ್ ಕಮಾಂಡ್ ಸೆಂಟರ್ ಲೋಕಾರ್ಪಣೆಗೊಳಿಸಿದ ಸಿಎಂ

ABOUT THE AUTHOR

...view details