ETV Bharat / state

ಮಾನವ ಕಳ್ಳಸಾಗಣೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ: 14 ಜನರ ಬಂಧನ, 20 ಮಹಿಳೆಯರ ರಕ್ಷಣೆ

author img

By ETV Bharat Karnataka Team

Published : Oct 31, 2023, 1:36 PM IST

Updated : Oct 31, 2023, 2:57 PM IST

ಬೆಂಗಳೂರಿನಲ್ಲಿ ಮಾನವ ಕಳ್ಳಸಾಗಣೆ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, 14 ಜನರ ಬಂಧಿಸಿದ್ದಾರೆ. ನೊಂದ 20 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

CCB police operation against human trafficking
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ಬೆಂಗಳೂರು: ನಗರದಲ್ಲಿ ಮಾನವ ಕಳ್ಳಸಾಗಣಿಕೆ ಹಾಗೂ ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. ನೊಂದ 20 ಮಹಿಳೆಯರನ್ನ ರಕ್ಷಿಸಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಗುಂಟೆ, ವರ್ತೂರು, ಕೆ.ಆರ್. ಪುರಂ, ವಿದ್ಯಾರಣ್ಯಪುರ, ಅಮೃತಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬಾಂಗ್ಲಾದೇಶ ಮೂಲದ ನಾಲ್ವರು, ಪಶ್ಚಿಮ ಬಂಗಾಳದ ಹನ್ನೊಂದು, ಕರ್ನಾಟಕದ ಮೂವರು, ತೆಲಂಗಾಣ ಹಾಗೂ ಉತ್ತರಾಖಂಡ್ ಮೂಲದ ತಲಾ ಓರ್ವ ಮಹಿಳೆಯರನ್ನು ರಕ್ಷಿಸಲಾಗಿದೆ.

ವಿವಿಧ ಪ್ರಕರಣಗಳಲ್ಲಿ ಒಟ್ಟಾರೆ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 4 ದ್ವಿಚಕ್ರ ವಾಹನ, 1 ಕಾರು, 40 ಮೊಬೈಲ್ ಫೋನ್‌ಗಳು, 2 ಲ್ಯಾಪ್‌ಟಾಪ್‌ಗಳು, 3 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಪ್ರಕರಣ- ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ, ಆರೋಪಿಗಳಿಬ್ಬರ ಬಂಧನ(ಬೆಂಗಳೂರು): ಮತ್ತೊಂಡೆದೆ, ಇತ್ತೀಚೆಗೆ ವೇಶ್ಯಾವಾಟಿಕೆ ದಂಧೆ ತೊಡಗಿದ್ದ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದರು. ಖಚಿತ ಮಾಹಿತಿ ಆಧರಿಸಿ, ಬೋಗಾದಿ ಹಾಗೂ ಬಸವೇಶ್ವರ ನಗರದ ಆಶ್ರಯ ಮನೆಯ ಮೇಲೆ ದಾಳಿ ಮಾಡಿದ ವೇಳೆಯಲ್ಲಿ, ಸಿಸಿಬಿ ಪೊಲೀಸರು ಬಂಧಿತರಿಂದ ನಾಲ್ಕು ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದರು. ಆರೋಪಿಗಳು ವೇಶ್ಯಾವಾಟಿಕೆ ನಡೆಸುವುದಲ್ಲದೇ, ಗಿರಾಕಿ ಮತ್ತು ಹುಡುಗಿಯರ ಫೋನ್ ಸಂಪರ್ಕವಿಟ್ಟುಕೊಂಡು, ಅವರುಗಳಿಗೆ ಬೇಕಾದ ಸ್ಥಳಗಳಿಗೆ ಹುಡುಗಿಯರನ್ನು ಫೋನ್ ಸಂಪರ್ಕಿಸುವ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮಾಹಿತಿ ವಿಚಾರಣೆ ವೇಳೆ ತಿಳಿದಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೈಸೂರು ನಗರದ ಸಿಸಿಬಿ ಘಟಕದ ಎಸಿಪಿ ಎಸ್.ಎನ್. ಸಂದೇಶ್‌ಕುಮಾರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಎ. ಮಲ್ಲೇಶ್, ಎಸ್‌ಐ ರಾಜು ಕೋನಕೇರಿ, ಪ್ರತಿಭಾ ಜಂಗವಾಡ, ಎಎಸ್‌ಐ ಟಿ. ಸತೀಶ್, ಸಿಬ್ಬಂದಿ ಪುರುಷೋತ್ತಮ, ಮಂಜುನಾಥ್, ಅರುಣ್‌ಕುಮಾರ್, ರಘು, ಮಮತ ಎನ್. ಜಿ ಮತ್ತು ಕೆ.ಜಿ. ಶ್ರೀನಿವಾಸ ತಂಡ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಶಿವಮೊಗ್ಗ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ; 7 ಯುವತಿಯರ ರಕ್ಷಣೆ

Last Updated : Oct 31, 2023, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.