ಕರ್ನಾಟಕ

karnataka

ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

By

Published : Jan 23, 2023, 1:30 PM IST

High Court
ಹೈಕೋರ್ಟ್

ಕರ್ನಾಟಕ ಪೌರಸಭೆಗಳ ಕಾಯ್ದೆ-1964ರ ಸೆಕ್ಷನ್​ 04 ರ ಅಡಿ ಇನ್ಮುಂದೆ ಯಾವುದೇ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅದರ ಬಳಕೆಗಾಗಿ ಇರುವ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್​ ಆದೇಶ ನೀಡಿದೆ.

ಬೆಂಗಳೂರು :ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಉಪಹಾರ ಗೃಹಗಳು, ಬ್ಯಾಂಕ್‌ಗಳು ಮತ್ತು ಸಿಬ್ಬಂದಿಯ ವಸತಿ ಗೃಹದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ ಎಂದು ಹೈ ಕೋರ್ಟ್ ಆದೇಶಿಸಿದೆ. ರಾಯಚೂರು ನಗರಸಭೆ ಆಯುಕ್ತರು ಇಲ್ಲಿಯ ನವೋದಯ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಾಲೇಜು ಕ್ಯಾಂಪಸ್‌ನಲ್ಲಿರುವ ಉಪಹಾರ ಗೃಹ, ಬ್ಯಾಂಕ್, ಸಿಬ್ಬಂದಿ ವಸತಿ ಗೃಹ ಮತ್ತು ಪೆಟ್ರೋಲ್ ಬಂಕ್ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಸುವಂತೆ ನಿರ್ದೇಶಿಸಿ 2012ರ ಆ.17ರಂದು ಡಿಮ್ಯಾಂಡ್ ನೋಟಿಸ್ ನೀಡಿದ್ದರು.

ಇದನ್ನು ಪ್ರಶ್ನಿಸಿ ನವೋದಯ ಶಿಕ್ಷಣ ಟ್ರಸ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಜನವರಿ 15 ರಂದು ಈ ಆದೇಶ ನೀಡಿದೆ. ಅಲ್ಲದೇ, ಕರ್ನಾಟಕ ಪೌರಸಭೆಗಳ ಕಾಯ್ದೆ -1964ರ ಸೆಕ್ಷನ್​ 04 ಪ್ರಕಾರ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುತ್ತಿರುವ ಯಾವುದೇ ಜಾಗ ಅಥವಾ ಆಸ್ತಿಯು ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿರುತ್ತದೆ. ಯಾವುದೇ ಜಾಗ ಮತ್ತು ಕಟ್ಟಡವನ್ನು ಶೈಕ್ಷಣಿಕ ಸಂಸ್ಥೆ ಶೈಕ್ಷಣಿಕ ಸೌಲಭ್ಯಕ್ಕಾಗಿ ಬಳಸುತ್ತಿದ್ದರೆ, ಅದಕ್ಕೆ ಆಸ್ತಿ ತೆರಿಗೆ ಸೇರಿ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಿದೆ.

ಶಿಕ್ಷಣ ಸಂಸ್ಥೆಗಳಿಗೆ ತನ್ನ ಆವರಣದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಅಗತ್ಯ ಮೂಲ ಸೌಕರ್ಯಗಳು ಅಗತ್ಯವಿದೆ. ಆದ್ದರಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ -1964ರ ಸೆಕ್ಷನ್​ 04 ರಂತೆ ಈ ಪ್ರಯೋಜನವನ್ನು ಶೈಕ್ಷಣಿಕ ಮೂಲ ಸೌಕರ್ಯಗಳಿಗೆ ವಿಸ್ತರಿಸದೇ ಹೋದಲ್ಲಿ ಕಾನೂನು ರೂಪಿಸಿದ ಉದ್ದೇಶ ಈಡೇರದಂತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ಶಿಕ್ಷಣ ಸೇವೆ ಕಲ್ಪಿಸುವುದಲ್ಲದೇ 3 ನೇ ವ್ಯಕ್ತಿಯು ಶೈಕ್ಷಣಿಕ ಸಂಸ್ಥೆ ಕಟ್ಟಿ ಜಾಗವನ್ನು ಶೈಕ್ಷಣಿಕ ಸಂಸ್ಥೆಗೆ ಗುತ್ತಿಗೆ ನೀಡಿದ್ದರೆ, ಆ ಜಾಗವು ಮುಖ್ಯವಾಗಿ ಶೈಕ್ಷಣಿಕ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ, ಅದು ಆಸ್ತಿ ತೆರಿಗೆ ಪಾವತಿ ವಿನಾಯ್ತಿ ವ್ಯಾಪ್ತಿಗೆ ಬರಲಿದೆ. ಯಾವುದೇ ಜಾಗ ಮತ್ತು ಕಟ್ಟಡವನ್ನು ಯಾವ ಉದ್ದೇಶಕ್ಕೆ ಇರಿಸಲಾಗಿದೆ ಎಂಬುದನ್ನು ಪರಿಗಣಿಸಬೇಕೇ ಹೊರತು ಮಾಲೀಕರು ಯಾರು ಎಂದಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾದ ವಕೀಲರುವಾದ ಮಂಡಿಸಿ, ರಾಯಚೂರು ನಗರದ ಹೊರವಲಯದ 46 ಎಕರೆ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳು, ಸಿಬ್ಬಂದಿಗೆ ನೆರವಾಗುವುದಕ್ಕಾಗಿ ಉಪಹಾರಗೃಹ, ಬ್ಯಾಂಕ್, ಪೆಟ್ರೋಲ್ ಬಂಕ್ ಮತ್ತು ಸಿಬ್ಬಂದಿಗಾಗಿ ವಸತಿ ಸಮುಚ್ಚಯವನ್ನು ನಿರ್ಮಿಲಾಗಿದೆ. ಇದರಿಂದ ಬರುವ ಆದಾಯದಲ್ಲಿ ಶಿಕ್ಷಣ ಸಂಸ್ಥೆಯ ಮೂಲಸೌಲಭ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಆದ್ದರಿಂದ ಈ ಇದು ಕರ್ನಾಟಕ ನಗರಸಭೆ ಕಾಯಿದೆ 1964ರ ಸೆಕ್ಷನ್ 04 ರ ಪ್ರಕಾರ ಕಾನೂನು ವಿರುದ್ಧವಲ್ಲ. ಆದರೂ ನಗರ ಸಭೆ ಆಯುಕ್ತರು ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ನೋಟಿಸ್ ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ನೋಟಿಸ್‌ನ್ನು ರದ್ದು ಪಡಿಸಿ ಆದೇಶಿಸಿದೆ.

ಇದನ್ನೂ ಓದಿ:ಕೆಲಸವಿಲ್ಲದೆ ವಿನಾಕಾರಣ ಕೋರ್ಟ್​ಗೆ ಬಂದರೆ ಜೈಲಿಗೆ ಕಳುಹಿಸಲಾಗುವುದು : ಹೈಕೋರ್ಟ್ ಎಚ್ಚರಿಕೆ

ABOUT THE AUTHOR

...view details