ಕರ್ನಾಟಕ

karnataka

ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ: ಸಚಿವ ಪ್ರಿಯಾಂಕ್ ಖರ್ಗೆ

By ETV Bharat Karnataka Team

Published : Sep 1, 2023, 10:41 PM IST

ಬಿಜೆಪಿ ರಚನಾತ್ಮಕ ಪ್ರತಿಪಕ್ಷವಾಗುವ ಯಾವುದೇ ಯೋಗ್ಯತೆ ಉಳಿಸಿಕೊಂಡಿಲ್ಲ‌ ಎಂದು ಸಚಿವ ದಿನೇಶ್​ ಗುಂಡೂರಾವ್​ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿ.ಎಲ್.ಸಂತೋಷ್ ಅವರಿಗೆ ಒಂದು ಸವಾಲು. ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಸರಣಿ ಟ್ವೀಟ್ ಮಾಡಿರುವ ಅವರು, ಇದೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು. ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ? ಎಂದು ಟೀಕಿಸಿದ್ದಾರೆ.

ಬಿ.ಎಲ್.ಸಂತೋಷ್ ಹೇಳಿಕೆ ಸಂಬಂಧ ಸಚಿವ ದಿನೇಶ್ ಗಂಡೂರಾವ್ ಟ್ವೀಟ್ ಮಾಡಿ, ರಾಜ್ಯ ಬಿಜೆಪಿ ಈಗ ಒಡೆದ ಮನೆ. ಒಂದು ಕಡೆ ಬಣ ಜಗಳ, ಗುಂಪುಗಾರಿಕೆ. ಮತ್ತೊಂದು ಕಡೆ ವರಿಷ್ಠರ ಕೆಟ್ಟ ದೃಷ್ಟಿಯಿಂದ ಹೈರಾಣಾಗಿರುವ ಬಿಜೆಪಿ ರಚನಾತ್ಮಕ ಪ್ರತಿಪಕ್ಷವಾಗುವ ಯಾವುದೇ ಯೋಗ್ಯತೆಯನ್ನೂ ಉಳಿಸಿಕೊಂಡಿಲ್ಲ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಇಂತಹ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾತಾಡುವುದು ವರ್ತಮಾನದ ಅತಿ ದೊಡ್ಡ ಕುಚೋದ್ಯ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಮಾತನಾಡುತ್ತಿದ್ದರು. ದುರಂತವೆಂದರೆ, ಕೇಡು ಬಗೆದವರಿಗೆ ಕೇಡೇ ಉಂಟಾಗಲಿದೆ ಎಂಬಂತೆ ಕಾಂಗ್ರೆಸ್ ಮುಕ್ತ ಕನಸು ಕಂಡಿದ್ದ ಬಿಜೆಪಿಯೇ ಇಂದು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ ಎಂದು ಟೀಕಿಸಿದರು. ಬಿಜೆಪಿಯ ಅವಸಾನದ ಪರ್ವ ಕರ್ನಾಟಕದಿಂದಲೇ ಆರಂಭವಾಗಿದೆ, ಮುಂದೆ ದೇಶವ್ಯಾಪಿಯಾಗುವುದು ಖಡಾಖಂಡಿತ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100ದಿನ ಕಳೆದರೂ ಬಿಜೆಪಿಯವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ರಾಜಕೀಯ ವಲಯದಲ್ಲಿ ವಿದೂಷಕ ಎಂದೇ ಅಪಹಾಸ್ಯಕ್ಕೀಡಾಗಿರುವ ಕಟೀಲ್‌ರಂತಹ ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಇಂತಹವರು ಯಾವ ಮುಖ ಇಟ್ಟುಕೊಂಡು ನಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಮಾತಾಡುತ್ತಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಿನ್ನೆ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಾ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಆಪರೇಷನ್ ಹಸ್ತದ ಸನ್ನಿವೇಶವಿಲ್ಲ. ಯಾರೂ ಕೂಡ ಬಿಜೆಪಿ ತೊರೆಯಲ್ಲ, ಆದರೆ ಕಾಂಗ್ರೆಸ್​​ನ 40-45 ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ:ಚರ್ಚೆ ಬಿಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ: ಪಕ್ಷದ ಮುಖಂಡರಿಗೆ ಬಿ ಎಲ್ ಸಂತೋಷ್ ಸೂಚನೆ

ABOUT THE AUTHOR

...view details