ಕರ್ನಾಟಕ

karnataka

ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮಗ ಸಾವು.. ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ ಘೋಷಣೆ

By

Published : Jan 10, 2023, 6:54 PM IST

Updated : Jan 10, 2023, 8:52 PM IST

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗ ಸಾವು- ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಘೋಷಣೆ- ಸಿಎಂ ಬೊಮ್ಮಾಯಿ ಹೇಳಿಕೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು

ಬೆಂಗಳೂರು/ ಧಾರವಾಡ: ಬೆಂಗಳೂರಲ್ಲಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ಎಲ್ಲ ಮಾಹಿತಿ ಪಡೆಯುತ್ತಿದ್ದೇನೆ. ನಾಗವಾರ್‌ ನಲ್ಲಿ ಸ್ಟೀಲ್ ಪಿಲ್ಲರ್ ಕುಸಿದಿದೆ. ಗದಗನ ಹೆಣ್ಣು ಮಗಳು ಹಾದು ಹೋಗುವಾಗ ಕುಸಿದಿದೆ. ತಲೆ ಮೇಲೆ ಬಿದ್ದು ಸಾವಾಗಿದೆ. ಅದು ಅತ್ಯಂತ ದುರದೃಷ್ಟಕರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಏನು ಕಾರಣ, ಯಾರು ಗುತ್ತಿಗೆದಾರ, ಎಲ್ಲವನ್ನೂ ತನಿಖೆ ಮಾಡಲಾಗುವುದು. ಸಂಬಂಧಿಸಿದವರ ಮೇಲೆ ಕೇಸ್ ಹಾಕಲು ಹೇಳಿದ್ದೇನೆ. ಮೃತಪಟ್ಟವರಿಗೆ ಮೆಟ್ರೋ ಸಂಸ್ಥೆಯಿಂದ ಪರಿಹಾರ ಕೊಡಲಾಗುವುದು. ಸಿಎಂ ಪರಿಹಾರ ನಿಧಿನಿಂದಲೂ ತಲಾ 10 ಲಕ್ಷ ರೂ. ಕೊಡಲಾಗುವುದು ಎಂದರು.

40 ಪರ್ಸೆಂಟ್ ಕಮೀಷನ್‌ದಿಂದಲೇ ಅಪಘಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡಿದ್ರೆ ಹೀಗೆ. ಅವರ ಕಾಲದಲ್ಲಿ ಏನೆಲ್ಲ ಅವಘಡ ಆಗಿದೆ. ಅದಕ್ಕೆಲ್ಲ ಹಂಡ್ರೆಡ್ ಪರ್ಸೆಂಟ್ ಅಂತಾ ಹೇಳೋಕೆ ಆಗುತ್ತಾ ಎಂದು ಉತ್ತರಿಸಿದರು. ಧಾರವಾಡದಲ್ಲಿ ಯುವಜನೋತ್ಸವ ಹಿನ್ನೆಲೆ ಇವತ್ತು ಸಭೆ ಮಾಡಿದ್ದೇನೆ. 28 ರಾಜ್ಯಗಳಿಂದ ಯುವ ಪ್ರತಿನಿಧಿಗಳು ಬರುತ್ತಾರೆ. ಬೇರೆ ಬೇರೆ ಚಟುವಟಿಕೆಗಳು ನಡೆಯಲಿವೆ. ಅದಕ್ಕಾಗಿ ಕೇಂದ್ರ, ರಾಜ್ಯ ಕ್ರೀಡಾ ಇಲಾಖೆ ತಯಾರಿ ಮಾಡಿಕೊಂಡಿವೆ ಎಂದರು.

ಮೃತರ ಸಂಬಂಧಿ ಮಾತನಾಡಿದರು

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ನಿರ್ಮಾಣ ಹಂತದ ನಮ್ಮ ಮೆಟ್ರೊ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣದಿಂದ ಕುಟುಂಬ ವರ್ಗದಲ್ಲಿ ಸೂತಕದ ಛಾಯೆ ಮೂಡಿದೆ. ಅಲ್ಲದೆ ಬಿಎಂಆರ್​ಸಿಎಲ್‌ ನಿರ್ಲಕ್ಷ್ಯಕ್ಕೆ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಹೊರಮಾವು ನಿವಾಸಿಯಾಗಿರುವ ಲೋಹಿತ್ ತಮ್ಮ ಬೈಕಿನಲ್ಲಿ ನಾಗವಾರದ ಹೆಚ್​ಬಿಆರ್ ಲೇಔಟ್ ಬಳಿ ಬರುವಾಗ ಏಕಾಏಕಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿದಿತ್ತು.‌ ಕಬ್ಬಿಣದ ಸರಳು ಬಿದ್ದಿದ್ದರಿಂದ ಲೋಹಿತ್ ತೇಜಸ್ವಿನಿ ಹಾಗೂ ವಿಹಾನ್ ಇಬ್ಬರು ಸಾವನ್ನಪ್ಪಿದ್ದರು. ಘಟ‌‌ನೆಯಲ್ಲಿ ಲೋಹಿತ್ ಹಾಗೂ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿತ್ತು. ಸೊಸೆ ಹಾಗೂ ಮೊಮ್ಮಗನ ಸಾವು ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು

ನೋವಿನಲ್ಲಿಯೇ ಮಾಧ್ಯಮಗಳಿಗೆ‌ ಪ್ರತಿಕ್ರಿಯಿಸಿದ ಅಜ್ಜಿ.. ಅಜ್ಜಿ ಅಂತಿಂತು ಮೊಮ್ಮಗು. ಹೋಗ್ಬಿಟ್ತಲ್ಲಪ್ಪಾ.. ಈಗ ಯಾರು ನನ್ನ ಅಜ್ಜಿ ಅಂತಾ ಅಂತಾರೆ. ಮೊಮ್ಮಗ ಅಂತಾ ಯಾರಿಗೆ ನಾನು ಕರೆಯಲಿ. ಸ್ಕೂಲ್ ಗೆ ಹೋಗುತ್ತಿದ್ದ. ಆದರೆ ಇವಾಗ ಯಾರನ್ನು ಸ್ಕೂಲ್ ಗೆ ಕರೆದೊಯ್ಯಬೇಕು. ನನ್ನ ಕರೆದುಕೊಂಡುಬಿಡಿ ಜೀವನ ಮುಗಿಯಿತು ಎಂದು ಬಿಕ್ಕಿ ಬಿಕ್ಕಿ ಅಳುತ್ತಲೇ ಮೃತ ಮಗುವಿನ ಅಜ್ಜಿ ನೋವು ತೋಡಿಕೊಂಡರು. ದುರಂತದ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತ ತೇಜಸ್ವಿನಿ ಪತಿ ಲೋಹಿತ್ ಬಳಿ ದೂರು ಪಡೆದು ನಿರ್ಲಕ್ಷ್ಯ ಆರೋಪದಡಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ IPC ಸೆಕ್ಷನ್ 337, 338, 304a, 427 RW 34 ಸೆಕ್ಷನ್ ಅಡಿ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಹೋರಾಟ ಮಾಡ್ತೇವೆ..ಘಟನೆ ಹಿನ್ನೆಲೆ ಮೃತರ ಸಂಬಂಧಿಕರಾದ ವಿಜಯಕುಮಾರ್ ಎಂಬುವರು ಪ್ರತಿಕ್ರಿಯಿಸಿದ್ದು, ಮೆಟ್ರೋ ಕಾಮಗಾರಿ ನಡೆಸುವಾಗ ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ. ಈಗ ನನ್ನ ಸೊಸೆ ಹಾಗು ಮಗುವನ್ನು ಕಳೆದುಕೊಂಡಿದ್ದೇನೆ ಎಂದು ಬೇಸರ ಹೊರಹಾಕಿದ ವಿಜಯ್, ಮುಂಜಾಗ್ರತ ಕ್ರಮವಾಗಿ ಕಾಮಗಾರಿ ಕೈಗೊಳ್ಳದವರ ಬಿಎಂಆರ್ ಸಿಎಲ್‌ ಅಧಿಕಾರಿಗಳ ವಿರುದ್ಧ ನಾವು ದೂರನ್ನ ಕೊಡುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಘಟನೆ ಸಿಸಿಟಿವಿಯಲ್ಲಿ ಸೆರೆ.. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡುಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಮೆಟ್ರೀ ಪಿಲ್ಲರ್ ಸ್ಟೀಲ್ ರಾಡ್ ಸೆಂಟ್ರಿಂಗ್ ಕುಸಿದಿದೆ‌. ಆಗ ಟೂ ವ್ಹೀಲರ್‌ನಲ್ಲಿದ್ದ ಕುಟುಂಬದ ಮೇಲೆ ಬಿದ್ದಿದೆ‌. ತಾಯಿ ಮಗು ಗಂಭೀರವಾಗಿ ಗಾಯಗೊಂಡಿದ್ದರಿಂದ ಕೂಡಲೇ ಆಲ್ಟಿಯಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮುಂದಿನ ಪ್ರಕ್ರಿಯೆಗೆ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಳ ಗಂಡ ಲೋಹಿತ್ ದೂರು ನೀಡಿದ ಮೇರೆಗೆ ತನಿಖೆ ನಡೆಸಲಾಗುವುದು. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬಂದು ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮೆಟ್ರೋ ಪಿಲ್ಲರ್ ಕುಸಿದಿದ್ದು, ಈ ಸಂಬಂಧ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಓದಿ:ವೃದ್ದೆಯ ಕೈಕಾಲು ಕಟ್ಟಿ ದರೋಡೆ: ಅಪ್ಪ - ಮಗನ ಸಹಿತ ಆರು ಜನರ ಬಂಧನ

Last Updated :Jan 10, 2023, 8:52 PM IST

ABOUT THE AUTHOR

...view details