ಕರ್ನಾಟಕ

karnataka

ನಿಗದಿತ ಉದ್ಯೋಗಕ್ಕೆ ಅರ್ಹ ವ್ಯಕ್ತಿಯನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ: ಹೈಕೋರ್ಟ್

By ETV Bharat Karnataka Team

Published : Nov 13, 2023, 8:41 PM IST

karnataka-high-court-order-on-kmf-job-recruitment-issue
ನಿಗದಿತ ಉದ್ಯೋಗಕ್ಕೆ ಅರ್ಹ ವ್ಯಕ್ತಿಯನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ: ಹೈಕೋರ್ಟ್

High Court Order to KMF: ಕೆಎಂಎಫ್​ ಹುದ್ದೆಯೊಂದರ ನೇಮಕಾತಿಯಲ್ಲಿ ಜಾತಿ ಪ್ರಮಾಣಪತ್ರದ ಅಸ್ಪಷ್ಟತೆ ಹಿನ್ನೆಲೆ ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿದ್ದ ಅಭ್ಯರ್ಥಿಗೆ ಸೂಪರ್ ನ್ಯೂಮರರಿ ಹುದ್ದೆ ನೀಡುವಂತೆ ಹೈಕೋರ್ಟ್​ ತಿಳಿಸಿದೆ.

ಬೆಂಗಳೂರು :ಸರ್ಕಾರದ ಅಧೀನದ ಸಂಸ್ಥೆಯಲ್ಲಿ ನಿಗದಿತ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಾತಿ ಪ್ರಮಾಣಪತ್ರವನ್ನು ಸ್ಪಷ್ಟವಾಗಿ ಸಲ್ಲಿಸದ ಅಭ್ಯರ್ಥಿಗೆ ಸೂಪರ್ ನ್ಯೂಮರರಿ ಹುದ್ದೆ ನೀಡುವಂತೆ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್)ಗೆ ನಿರ್ದೇಶನ ನೀಡಿದೆ.

ಜಾತಿ ಪ್ರಮಾಣಪತ್ರ ಅಸ್ಪಷ್ಟವಾಗಿದೆ ಎಂಬ ಕಾರಣ ನೀಡಿ ತನ್ನನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿದ್ದ ಕೆಎಂಎಫ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಪಿ.ಆರ್. ದೇವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರ ಸಲ್ಲಿಸಬೇಕಾದ ಮೂಲ ಜಾತಿ ಪ್ರಮಾಣಪತ್ರ ಸ್ವೀಕರಿಸಿ, ಸೂಪರ್ ನ್ಯೂಮರರಿ ಹುದ್ದೆಗೆ ಮೀಸಲಾತಿ ಅಡಿ ಲೆಕ್ಕ ಸಹಾಯಕ ಗ್ರೇಡ್ 1ಗೆ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಜೊತೆಗೆ, ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ತಳ್ಳಿರುವ ಮೂಲಕ ಕರ್ನಾಟಕ ಹಾಲು ಮಹಾ ಮಂಡಳಿ ತಪ್ಪು ಮಾಡಿದೆ. ಸಣ್ಣ ಸೂಚನೆಯಲ್ಲಿ ಸರಿಪಡಿಸಿ ನೈಸರ್ಗಿಕ ನ್ಯಾಯ ಒದಗಿಸಬಹುದಾಗಿತ್ತು. ಆ ಕ್ರಮಕ್ಕೆ ಮುಂದಾಗದಿರುವುದಕ್ಕೆ ಸಕಾರಣ ನೀಡಿಲ್ಲ. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರ ವಾದಿಸಿರುವಂತೆ ಅನ್ಯಾಯದ ಪರಮಾವಧಿಯಾಗಿದೆ ಎಂದು ಪೀಠ ತಿಳಿಸಿದೆ. ಅಲ್ಲದೇ, ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಕೆಎಂಎಫ್ ವಾದಿಸುತ್ತಿಲ್ಲ. ಆದರೆ, ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿಲ್ಲ ಎಂಬುದಾಗಿದೆ. ಮೇಲ್ಮನವಿದಾರರಿಗೆ ಸ್ಪಷ್ಟವಾದ ಜಾತಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದ್ದರೆ ಆಕಾಶವೇನು ಕೆಳಗೆ ಬೀಳುತ್ತಿರಲಿಲ್ಲ ಎಂದಿದೆ.

ನೇಮಕಾತಿ ಅಧಿಸೂಚನೆಯಲ್ಲಿ ಸಂವಿಧಾನದ 15ನೇ ವಿಧಿಯ ಭಾಗವಾಗಿ ನೈಸರ್ಗಿಕ ನ್ಯಾಯತತ್ವಗಳನ್ನು ಹೊರತುಪಡಿಸಿ ಅರ್ಥೈಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಶಾಸನಬದ್ಧವಾಗಿ ರಚನೆಯಾಗಿರುವ ಸಂಸ್ಥೆಗಳಲ್ಲಿಯೂ ನೈಸರ್ಗಿಕ ನ್ಯಾಯದ ತತ್ವಗಳಡಿಯಲ್ಲಿ ಅರ್ಥೈಸುವಂತೆ ಕಾರ್ಯವಿಧಾನವನ್ನು ನಡೆಸಬೇಕು. ನೇಮಕಾತಿ ವಿಭಾಗವೂ ಪರಿಚ್ಛೇದ 12ರ ಅಡಿಯಲ್ಲಿ ಸ್ಥಾಪನೆಯಾಗಿರುವ ಸರ್ಕಾರದ ಸಂಸ್ಥೆಯಾಗಿದೆ. ಇದರಿಂದ ಸಮಸ್ಯೆಗೆ ಎದುರಾದವರು ಸಂವಿಧಾನದ ಪರಿಚ್ಛೇದ 16ರ ಅಡಿ ಹೋರಾಟ ನಡೆಸುವುದು ಮೂಲಭೂತ ಹಕ್ಕಾಗಿದೆ ಎಂದು ಪೀಠ ತಿಳಿಸಿದೆ.

ಇಂತಹ ಸಂಸ್ಥೆಗಳು ತಪ್ಪೆಸಗಿದಲ್ಲಿ ದೋಷವನ್ನು ಸರಳವಾಗಿ ಸರಿಪಡಿಸಬಹುದಾಗಿದೆ. ಬದಲಿಗೆ ಸರಿಪಡಿಸುವಲ್ಲಿ ಆಗುವ ತೊಂದರೆಯನ್ನು ಮುಂದಿಟ್ಟು ವಾದ ಮಂಡಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೈಕೋರ್ಟ್​ ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:2022ರ ಅಕ್ಟೋಬರ್ 20ರಂದು ಲೆಕ್ಕ ಸಹಾಯಕರ ನೇಮಕಕ್ಕೆ ಕೆಎಂಎಫ್ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರು ದಾಖಲೆಗಳನ್ನು ಆನ್​ಲೈನ್ ಮೂಲಕ ಅಪ್ಲೋಡ್ ಮಾಡಿದ ಬಳಿಕ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಅವರು ಅಪ್ಲೋಡ್ ಮಾಡಿದ ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿತ್ತು. ಪರಿಣಾಮ ಅರ್ಜಿದಾರರನ್ನು ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಈ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ಹಾಲು ಮಹಾ ಮಂಡಳಿ ಕ್ರಮವು ಅನ್ಯಾಯದಿಂದ ಕೂಡಿದೆ. ಅಲ್ಲದೇ, ಜಾತಿ ಪ್ರಮಾಣ ಪತ್ರವನ್ನು ಸ್ಪಷ್ಟವಾದ ರೀತಿಯಲ್ಲಿ ಅಪ್ಲೋಡ್ ಮಾಡುವುದಕ್ಕೆ ಅವಕಾಶ ನೀಡಿ, ದೋಷವನ್ನು ಸರಿಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಕರ್ನಾಟಕ ಹಾಲು ಮಹಾ ಮಂಡಳಿ ಪರ ವಾದ ಮಂಡಿಸಿದ ವಕೀಲರು, ನೇಮಕಾತಿ ಅಧಿಸೂಚನೆಯಲ್ಲಿನ ಷರತ್ತುಗಳಲ್ಲಿ ಅಸ್ಪಷ್ಟ ದಾಖಲೆಗಳನ್ನು ಸಲ್ಲಿಸುವವರನ್ನು ತಿರಸ್ಕರಿಸಲಾಗುವುದು ಎಂದು ಸ್ಟಷ್ಟವಾಗಿ ತಿಳಿಸಲಾಗಿದೆ. ಸಾವಿರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿರುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಗೆ ಸಮಸ್ಯೆಯಾಗಿದೆ ಎಂಬ ಕಾರಣದಿಂದ ಅದನ್ನು ಸರಿಪಡಿಸಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ:600 ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹಿಸಿ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು: ಹೈಕೋರ್ಟ್

ABOUT THE AUTHOR

...view details