ಕರ್ನಾಟಕ

karnataka

ಬೆಂಗಳೂರಲ್ಲಿ ಭಾರಿ ಮಳೆ: ಹಲವೆಡೆ ಮರಗಳು ಧರಾಶಾಹಿ, ಸಂಚಾರ ಅಸ್ತವ್ಯಸ್ತ

By

Published : Aug 27, 2021, 10:44 PM IST

heavy-rain-in-bengaluru
ಬೆಂಗಳೂರಲ್ಲಿ ಭಾರಿ ಮಳೆ: ಹಲವೆಡೆ ಮರಗಳು ಧರಾಶಾಹಿ, ಸಂಚಾರ ಅಸ್ತವ್ಯಸ್ತ

ಬೆಂಗಳೂರಿನ ಆರ್.ಆರ್. ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು ಸೇರಿ ಹಲವಡೆ ಭಾರಿ ಮಳೆಯಾಗಿದೆ.

ಬೆಂಗಳೂರು:ನಗರದ ಹಲವು ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಮರಗಳು ನೆಲಕ್ಕುರುಳಿವೆ. ನಗರದ ಹಲವೆಡೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಮಧ್ಯಾಹ್ನ 3.30ರ ಬಳಿಕ ಭಾರಿ ಮಳೆ ಪ್ರಾರಂಭವಾಗಿ ರಾತ್ರಿಯವರೆಗೆ ಸುರಿದಿದೆ. ಮಳೆಯಿಂದ ಮಲ್ಲೇಶ್ವರದ 8ನೇ ಕ್ರಾಸ್‌ ಸಂಪಿಗೆ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಮೇಲೆ ಮರ ಬಿದ್ದಿದೆ. ಜೋರು ಮಳೆ ಕಾರಣ ಸಾರ್ವಜನಿಕರು ಯಾರೂ ಪಾದಚಾರಿ ಮಾರ್ಗದಲ್ಲಿ ಸಂಚರಿಸುತ್ತಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಆಗಮಿಸಿ ಸಂಚಾರ ಪೊಲೀಸರು ಹಾಗೂ ಪಾಲಿಕೆ ಅರಣ್ಯ ಸಿಬ್ಬಂದಿ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಹಲವೆಡೆ ಮಳೆ:

ನಗರದ ಆರ್.ಆರ್. ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್​ ಗುಟ್ಟಹಳ್ಳಿ, ಮಲ್ಲೇಶ್ವರ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ ಸೇರಿದಂತೆ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.

ಬೆಂಗಳೂರಲ್ಲಿ ಭಾರಿ ಮಳೆ

ಪ್ರಮುಖ ರಸ್ತೆಗಳಲ್ಲಿ ನೀರು:

ಭಾರಿ ಮಳೆಗೆ ಮಲ್ಲೇಶ್ವರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೇಸ್​ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿತ್ತು. ಸ್ಮಾರ್ಟ್ ಸಿಟಿ ಯೋಜನೆಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡು ಬಂದಿತು.

ಇದನ್ನೂ ಓದಿ:ತಂದೆಯೇ ಮಗನನ್ನು ಕೊಂದ ಘಟನೆಗೆ ಸಾಕ್ಷಿಯಾದ 'ಮಣ್ಣಿಂದ ಎದ್ದು ಬಂದ ಕಾಲು'.. ರೋಚಕ ಘಟನೆ..!

ABOUT THE AUTHOR

...view details