ಕರ್ನಾಟಕ

karnataka

ಬೆಂಗಳೂರಿಗೆ ಸುರ್ಜೆವಾಲಾ... ಕಾಂಗ್ರೆಸ್​ ವಿರುದ್ಧ ಸಿಟಿ ರವಿ ವಾಗ್ದಾಳಿ

By ETV Bharat Karnataka Team

Published : Nov 28, 2023, 7:40 PM IST

ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಸಿಟಿ ರವಿ, ಇವತ್ತೇ ಹಣ ಹೋಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ, ಐಟಿ, ಇಡಿ ಸುರ್ಜೇವಾಲ ಅವರ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಆಗ್ರಹಿಸಿದರು.

CT Ravi Slams Congress Govt
CT Ravi Slams Congress Govt

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್​ ಸಿಂಗ್​ ಸುರ್ಜೇವಾಲ ಅವರು ಇವತ್ತು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು, 2ನೇ ಕಂತು ಬಂತು. 3ನೇ ಕಂತು ಬೇಕು. 3ನೇ ಕಂತಿನಲ್ಲಿ ಚೌಕಾಸಿ ಆಗಬಾರದು ಎಂದು ಆ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕೊನೆಯ 3 ದಿನಗಳಲ್ಲಿ. ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿಗೇ ನೀಡಿದ್ದಾರೆ. ಹಾಗಾಗಿ 3ನೇ ಕಂತಿಗಾಗಿ ಬಂದಂತಿದೆ ಎಂದು ಟೀಕಿಸಿದರು.

ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ? ಎಂದು ಕೇಳಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಗೆಲ್ಲಿಸಬೇಡಿ ಎಂದು ಜನರಿಗೆ ಮನವಿ ಮಾಡಿದ್ದೆವು. ಆದರೆ, ಅದನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ. ಗ್ಯಾರಂಟಿ ಆಸೆಗೋ, ಇನ್ಯಾವುದೋ ಕಾರಣಕ್ಕೋ ಕಾಂಗ್ರೆಸ್​​ ಗೆಲ್ಲಿಸಿದ್ದಾರೆ ಎಂದರು.

ಈಗ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಇಲ್ಲಿ ಸಿಕ್ಕಿದ್ದ 102 ಕೋಟಿಯೂ ಕಾಂಗ್ರೆಸ್ಸಿಗಾಗಿ ಸಂಗ್ರಹಿಸಿದ ಹಣ. ಇವತ್ತೇ ಹಣ ಹೋಗುವ ಸಾಧ್ಯತೆ ಇದೆ. ಚುನಾವಣೆ ಆಯೋಗ, ಐಟಿ, ಇ.ಡಿ ಗಳು ಸುರ್ಜೇವಾಲ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

ನಾನು ಕೆಂಪಣ್ಣ ಅವರ ಹೇಳಿಕೆಯನ್ನು ಗಮನಿಸಿಲ್ಲ. ಗುತ್ತಿಗೆದಾರ ಅಂಬಿಕಾಪತಿ ಅವರ ಸಾವು ದುರದೃಷ್ಟಕರ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಹೆಸರು ಮುಚ್ಚಿಡುವ ಒತ್ತಡ ಬಂತೋ? ಯಾವ ಒತ್ತಡದಲ್ಲಿ ಅವರಿಗೆ ಹೃದಯಾಘಾತ ಆಗಿದೆ ಎಂದು ಗೊತ್ತಿಲ್ಲ. ಇವರಿಗೆ ಸತ್ಯ ಹೇಳುವಂತಿಲ್ಲ; ಅವರ ಸಾವು ದುರದೃಷ್ಟಕರ ಎಂದು ಹೇಳಿದರು.

ಸುದೀರ್ಘ ಅವಧಿಯ ಕಾಲ ಆಡಳಿತ ನಡೆಸಿದ ಪಕ್ಷ ತನ್ನ ಸಾಧನೆ, ದೂರದೃಷ್ಟಿಯ ಯೋಜನೆಗಳನ್ನು ಜನರ ಮುಂದಿಡುತ್ತದೆ. ಕಾಂಗ್ರೆಸ್ ಬಳಿ ಮಾಡಿದ ಸಾಧನೆ, ದೂರದೃಷ್ಟಿಯ ಯೋಜನೆಗಳಿಲ್ಲ. ಉದ್ಯೋಗ ಸೃಷ್ಟಿಯ ಯೋಜನೆಗಳಿಲ್ಲ. ತಾತ್ಕಾಲಿಕ ಆಸೆ ತೋರಿಸುವ ರಾಜಕಾರಣ ಅವರದು ಎಂದು ಸಿಟಿ ರವಿ ಟೀಕಿಸಿದರು.

ಕರ್ನಾಟಕದಲ್ಲಿ ಅವರು ಮಾಡಿದ್ದು ಕೂಡ ತಾತ್ಕಾಲಿಕ ಆಸೆ ತೋರಿಸುವ ರಾಜಕಾರಣ. ಅದರ ಬಳಿಕವೂ ಅವರು ಹೇಳಿದಂತೆ ನಡೆದುಕೊಂಡಿಲ್ಲ ಎಂದು ಆಕ್ಷೇಪಿಸಿದ ಸಿಟಿ ರವಿ, ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿ ಮಾಡಿದ ಹೊಸ ಯೋಜನೆಗಳೇನು? ಬಾಕಿ ಹಣ ಎಷ್ಟು ಪಾವತಿ ಮಾಡಿದ್ದೀರಿ? ಎಷ್ಟು ಉದ್ಯೋಗಗಳ ಸೃಷ್ಟಿ ಆಗಿದೆ? ಇವರ ಆರು ತಿಂಗಳ ಸಾಧನೆಯನ್ನು ತಿಳಿಸಲಿ. ಇಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೇವೆ, ಇಂತಿಂಥ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಊರಿಗೊಂದು ಬಾರ್ ಮೂಲಕ ಆದಾಯ ಹೆಚ್ಚಿಸುವ ನಿಮ್ಮ ಕಲ್ಯಾಣದ ಕಲ್ಪನೆ “ಊರಿಗೊಂದು ಬಾರ್?” ಎಂಬುದೇ ಎಂದು ಕೇಳಿದರು.

ಕಾಂಗ್ರೆಸ್ ಪಕ್ಷ ಹೇಳಿದ್ದೊಂದು ಮಾಡಿದ್ದೊಂದು:ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ಎಂದರು. ಬಳಿಕ ಈ ವರ್ಷ ಪದವಿ ಮುಗಿಸಿದ ನಿರುದ್ಯೋಗಿಗಳಿಗೆ ಭತ್ಯೆ ಎಂದರು. ಅವರಿಗೂ ಬಂದಿಲ್ಲ. ಎಲ್ಲ ಮಹಿಳೆಯರಿಗೂ 2 ಸಾವಿರ ಎಂದಿದ್ದರು. ‘ಶೋಭಾ ಕರಂದ್ಲಾಜೆ ನಿಮಗೂ ಫ್ರೀ’ ಎಂದಿದ್ದರು. ಅದೂ ಸರಿಯಾಗಿ ಜಾರಿ ಆಗಿಲ್ಲ. 200 ಯೂನಿಟ್ ಎಲ್ಲರಿಗೂ ಫ್ರೀ ಎಂದಿದ್ದರು. ಅಲ್ಲೂ ಕೂಡ ಹೇಳಿದ್ದೊಂದು ಮಾಡಿದ್ದೊಂದು ಎಂದು ಆರೋಪಿಸಿದರು.

ಈ ಮಾದರಿ ಎಷ್ಟು ಕಾಲ ನಡೆದೀತು? ಕಣ್ಣ ಮುಂದೆ ವೆನಿಜುವೆಲಾ ಉದಾಹರಣೆ ಇದೆಯಲ್ಲವೇ? ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಹೆಚ್ಚು ವರ್ಷಗಳ ಕಾಲ ಅಧಿಕಾರ ಅಥವಾ ಅಧಿಕಾರದ ಪ್ರಭಾವಲಯದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾಧನೆ ಏನು? ಎಂದು ಕೇಳಿದರು. ನಾವು ಐಐಎಂ, ಐಐಟಿಗಳನ್ನು ದ್ವಿಗುಣಗೊಳಿಸಿದ್ದೇವೆ. ವಿಮಾನ ನಿಲ್ದಾಣಗಳ ಸಂಖ್ಯೆ ಡಬಲ್ ಮಾಡಿದ್ದೇವೆ. ನೀವೇನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು.

ವಿದ್ಯುತ್ ದರ ಬಹುತೇಕ ಡಬಲ್ ಆಗಿದೆ. ಮದ್ಯದ ಬೆಲೆ 50 ರೂಪಾಯಿಯಿಂದ 100-150ಕ್ಕೆ ಏರಿದೆ. ಜನರನ್ನು ಸ್ವಾವಲಂಬಿ ಮಾಡಿದ್ದೀರಾ? ಉದ್ಯೋಗ ಸೃಷ್ಟಿಗೆ ಇಂಥ ಯೋಜನೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಹಣ ಲೂಟಿ ಮಾಡಿ ತೆಲಂಗಾಣದ ಚುನಾವಣೆಗೆ ಖರ್ಚು ಮಾಡ್ತಿದೆ: ಡಿ ವಿ ಸದಾನಂದಗೌಡ

ABOUT THE AUTHOR

...view details