ಕರ್ನಾಟಕ

karnataka

ಬಿಜೆಪಿ ರಥಯಾತ್ರೆಗೆ ಸಂಚಾಲಕರ ನೇಮಕ: ವಿಜಯೇಂದ್ರಗೆ ಮೋರ್ಚಾಗಳ ಹೊಣೆ

By

Published : Feb 8, 2023, 10:49 AM IST

ಬಿಜೆಪಿಯ ನಾಲ್ಕು ಯಾತ್ರೆಗಳ ಸಂಚಾಲಕರ ನೇಮಕ - ಸಚಿವ ಸಿ ಸಿ ಪಾಟೀಲ್​ಗೆ ಯಾತ್ರೆಗಳ ಸಂಚಾಲಕ ಜವಾಬ್ದಾರಿ - ಮೋರ್ಚಾಗಳ ಹೊಣೆ ಬಿ ವೈ ವಿಜಯೇಂದ್ರ ಹೆಗಲಿಗೆ

Etv Bharat
Etv Bharat

ಬೆಂಗಳೂರು : ಅಧಿವೇಶನದ ನಂತರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಆರಂಭಿಸಲಿರುವ ನಾಲ್ಕು ಯಾತ್ರೆಗಳ ಸಂಚಾಲಕರನ್ನಾಗಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಅವರನ್ನು ನೇಮಕ ಮಾಡಲಾಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಮತ್ತು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ಚುನಾವಣಾ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಬಸ್ ಯಾತ್ರೆ, ಜೆಡಿಎಸ್​ ಪಂಚರತ್ನ ಯಾತ್ರೆಗೆ ಟಕ್ಕರ್ ಕೊಡಲು ನಾಲ್ಕು ದಿಕ್ಕಿನಿಂದ ಏಕಕಾಲಕ್ಕೆ ರಥಯಾತ್ರೆ ಆರಂಭಕ್ಕೆ ಬಿಜೆಪಿ ಮುಂದಾಗಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾದಂತೆ ರಥಯಾತ್ರೆಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರ ನಂಬಿಕಸ್ತರಾಗಿರುವ ಸಚಿವ ಸಿ ಸಿ ಪಾಟೀಲ್ ಅವರಿಗೆ ಎಲ್ಲಾ ಯಾತ್ರೆಗಳ ಸಂಚಾಲಕ ಜವಾಬ್ದಾರಿ ನೀಡಲಾಗಿದೆ. ಮೋರ್ಚಾಗಳ ಜವಾಬ್ದಾರಿಯನ್ನು ಬಿಎಸ್​​ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ವಹಿಸಲಾಗಿದೆ.

ಫಲಾನುಭವಿಗಳ ಸಮ್ಮೇಳನ

ಬಿಜೆಪಿಯಿಂದ ನಾಲ್ಕು ರಥಯಾತ್ರೆಗಳು : ಮೊದಲ ರಥಯಾತ್ರೆಯ ಸಂಚಾಲಕರನ್ನಾಗಿ ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಶಿವಮೊಗ್ಗದ ಮಾಜಿ ಜಿಲ್ಲಾಧ್ಯಕ್ಷ ಎಸ್ ದತ್ತಾತಿ, ಉಡುಪಿ ಮಾಜಿ ಉಪಾಧ್ಯಕ್ಷ ಕಿಶೋರ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಎರಡನೇ ರಥಯಾತ್ರೆಗೆ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರನ್ನು ಸಂಚಾಲಕರನ್ನಾಗಿ, ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮೂರ್ತಿ ಮತ್ತು ಪರಿಷತ್ ಸದಸ್ಯ ಆ. ದೇವೇಗೌಡ ಅವರನ್ನು ಸಹ ಸಂಚಾಲಕರನ್ನಾಗಿ ಮಾಡಲಾಗಿದೆ.

ರಥಯಾತ್ರೆಗೆ ಸಂಚಾಲಕರ ನೇಮಕ

ಮೂರನೇ ರಥಯಾತ್ರೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಅವರನ್ನು ಸಂಚಾಲಕರನ್ನಾಗಿ, ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಅವರಿಗೆ ಸಹ ಸಂಚಾಲಕ ಜವಾಬ್ದಾರಿ ನೀಡಲಾಗಿದೆ. ನಾಲ್ಕನೇ ರಥಯಾತ್ರೆಗೆ ಮಾಜಿ ಸಭಾಪತಿ ರಘುನಾಥ್‌ ರಾವ್‌ ಮಲ್ಕಾಪುರೆ ಅವರನ್ನು ಸಂಚಾಲಕರನ್ನಾಗಿ, ಜಿಲ್ಲಾ ಪ್ರಭಾರಿ ಅಮರನಾಥ್ ಪಾಟೀಲ್‌ ಮತ್ತು ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್ ಅವರನ್ನು ಸಹ ಸಂಚಾಲಕರಾಗಿ ನೇಮಿಸಲಾಗಿದೆ.

ಬಿ ವೈ ವಿಜಯೇಂದ್ರಗೆ ಮೋರ್ಚಾಗಳ ಜವಾಬ್ದಾರಿ : ವಿವಿಧ ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಸಂಚಾಲಕರನ್ನಾಗಿ ಮಾಡಲಾಗಿದೆ. ಸಹ ಸಂಚಾಲಕರಾಗಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಇರಲಿದ್ದಾರೆ. ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಎನ್ ಎಲ್ ನರೇಂದ್ರಬಾಬು, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾ‌ರ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ ಸಂದೀಪ್ ಕುಮಾರ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಸಯ್ಯದ್ ಸಲಾಂ ಅವರು ಸದಸ್ಯರಾಗಿ ಇರಲಿದ್ದಾರೆ.

ಬಿಜೆಪಿ ಫಲಾನುಭವಿಗಳ ಸಮಾವೇಶ:ಫಲಾನುಭವಿಗಳ ಸಮಾವೇಶಗಳ ಆಯೋಜನೆಗೆ ಸಚಿವ ಹಾಲಪ್ಪ ಆಚಾರ್ ಅವರು ಸಂಚಾಲರಾಗಿ, ಸಚಿವ ಎಸ್ ಟಿ ಸೋಮಶೇಖರ್, ಶಾಸಕ ಪಿ ರಾಜೀವ್ ಅವರನ್ನು ಸಹ ಸಂಚಾಲಕರಾಗಿ, ವಿಧಾನ ಪರಿಷತ್ ಸದಸ್ಯರಾದ ವೈವಿ ನಾರಾಯಣಸ್ವಾಮಿ, ಪಿ ಮುನಿರಾಜುಗೌಡ, ಹೇಮಲತಾ ನಾಯಕ್ ಮತ್ತು ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಜಯತೀರ್ಥ ಕಟ್ಟಿ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎಲ್ಇಡಿ ವ್ಯಾನ್ ಸಮಿತಿ ಸಂಚಾಲಕರನ್ನಾಗಿ ಮಾಜಿ ಮೋರ್ಚಾಗಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್ ವಿ ರಾಘವೇಂದ್ರ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಪಂಚಾಯತ್ ರಾಜ್ ನಗರ ಪ್ರಕೋಷ್ಠ ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತಿ ಮುಗ್ದುಂ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಬಳ್ಳೆಕೇರಿ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕಗೊಂಡಿದ್ದಾರೆ.

ಪ್ರಣಾಳಿಕೆ ತಯಾರಿ ಅಭಿಯಾನದ ಸಂಚಾಲಕರಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರನ್ನು ನೇಮಕ ಮಾಡಲಾಗಿದೆ. ಸಚಿವ ಬಿ ಸಿ ನಾಗೇಶ್, ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾ‌ರ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಎಸ್ ಸುರೇಶ್‌ ಕುಮಾರ್, ಶಾಸಕರಾದ ಅಭಯ್ ಪಾಟೀಲ್ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎನ್ ಮಹೇಶ್, ಪಿ ರಾಜೀವ್‌ ಹಾಗು ಮುಖಂಡರಾದ ಸಮೀರ್ ಕಾಗಲ್ಕ‌ರ್, ಕೆಎಸ್ ನವೀನ್, ಡಾ ಪ್ರಕಾಶ್, ರವೀಂದ್ರ ಪೈ, ವಿಶ್ವನಾಥ್ ಭಟ್, ಮಾಳವಿಕಾ ಅವಿನಾಶ್ ಅವರು ಸಹ ಸಂಚಾಲಕರಾಗಿದ್ದಾರೆ.

ಇದನ್ನೂ ಓದಿ:ಪ್ರಲ್ಹಾದ್ ಜೋಶಿ ವಿರುದ್ಧದ ಭ್ರಷ್ಟಾಚಾರ ಆರೋಪ ಜನರ ದಾರಿ ತಪ್ಪಿಸುವ ಚುನಾವಣಾ ಸ್ಟಂಟ್: ಛಲವಾದಿ ನಾರಾಯಣಸ್ವಾಮಿ

ABOUT THE AUTHOR

...view details