ETV Bharat / state

ಪ್ರಲ್ಹಾದ್ ಜೋಶಿ ವಿರುದ್ಧದ ಭ್ರಷ್ಟಾಚಾರ ಆರೋಪ ಜನರ ದಾರಿ ತಪ್ಪಿಸುವ ಚುನಾವಣಾ ಸ್ಟಂಟ್: ಛಲವಾದಿ ನಾರಾಯಣಸ್ವಾಮಿ

author img

By

Published : Feb 8, 2023, 7:13 AM IST

ಪ್ರಹ್ಲಾದ್​ ಜೋಶಿ ವಿರುದ್ಧ ಭ್ರಷ್ಟಾಚಾರ ಆರೋಪ-ಜನರ ದಾರಿ ತಪ್ಪಿಸುವ ಸ್ಟಂಟ್- ಬಿಜೆಪಿ ಎಸ್​ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟಾಂಗ್​

chalavadi narayanaswamy
ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಜೆಡಿಎಸ್‍ನ ಭೋಜೇಗೌಡರ ಹೇಳಿಕೆ ಕೇವಲ ಚುನಾವಣಾ ಸ್ಟಂಟ್ ಎಂದು ರಾಜ್ಯ ಬಿಜೆಪಿ ಎಸ್‍ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯನ್ನು ನವಗ್ರಹ ಯಾತ್ರೆ ಎಂದು ಟೀಕಿಸಿದ್ದರು. ಇದರಿಂದ ಕುಪಿತರಾದ ಜೆಡಿಎಸ್‍ನ ಎಲ್ಲ ನಾಯಕರು ಬ್ರಾಹ್ಮಣರಾದ ಜೋಶಿಯವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಲ್ಲದೆ 8 ಜನ ಉಪ ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬ್ರಾಹ್ಮಣರ ಕುರಿತ ಹೇಳಿಕೆಗೆ ತೀವ್ರ ವಿರೋಧ ಗಮನಿಸಿ ಇದೀಗ ಜೋಶಿಯವರು ನೇಮಕಾತಿಗೆ ಸಂಬಂಧಿಸಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇವೆಲ್ಲವೂ ಅವರು ಜನರನ್ನು ದಾರಿ ತಪ್ಪಿಸುವ ಚುನಾವಣಾ ಸ್ಟಂಟ್' ಎಂದು ದೂರಿದರು.

ಸೂಟ್‍ಕೇಸ್ ಕೊಟ್ಟರೆ ಜೆಡಿಎಸ್ ಪಕ್ಷದಲ್ಲಿ ಗೌರವ: ಭೋಜೇಗೌಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆ ಕುಮಾರಸ್ವಾಮಿಯವರು ಸಭೆಯಲ್ಲಿ ಮಾತನಾಡಿ, ಈ ಬಾರಿ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಒಂದೇ ತಿಂಗಳಲ್ಲಿ ಹೇಳಿಕೆ ಬದಲಿಸಿ ದಲಿತರನ್ನು ಸಿಎಂ ಮಾಡುವುದಾಗಿ ತಿಳಿಸಿದರು. ಈಗ ತಾವೇ ಸಿಎಂ ಆಗುವುದಾಗಿ ಹೇಳುತ್ತಿದ್ದಾರೆ. ಜೆಡಿಎಸ್ ಮತ್ತು ಕುಮಾರಸ್ವಾಮಿಯವರಿಗೆ ಇದು ಕೊನೆಯ ಚುನಾವಣೆ. ಸೂಟ್‍ಕೇಸ್ ಕೊಟ್ಟರೆ ಜೆಡಿಎಸ್ ಪಕ್ಷದಲ್ಲಿ ಗೌರವ. ಕುಮಾರಸ್ವಾಮಿ ಅವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರು ಹೆಚ್‍ಡಿಕೆ ವಿರುದ್ಧ ಆಪಾದನೆ ಮಾಡಿದ್ದರು. ನಮ್ಮ ಪಕ್ಷದಲ್ಲಿ ಕುಮಾರಸ್ವಾಮಿಯವರು ಸೂಟ್‍ಕೇಸ್ ನೋಡಿದರೆ ಮಾತ್ರ ಗೌರವ ಕೊಡುತ್ತಾರೆ. ಸೂಟ್‍ಕೇಸ್ ಕೊಟ್ಟವರಿಗೆ ಮಾತ್ರ ನಮ್ಮ ಪಕ್ಷದಲ್ಲಿ ಬೆಲೆ ಎಂದು ಪ್ರಜ್ವಲ್ ಹೇಳಿದ್ದರು ಎಂದು ಟೀಕಿಸಿದ್ದಾರೆ.

ಭೋಜೇಗೌಡರು & ಹೆಚ್​ಡಿಕೆ ಆಪಾದನೆ ಹಾಸ್ಯಾಸ್ಪದ: ವಿಜಯಪುರದಲ್ಲಿ ಎಂಎಲ್‍ಸಿ ಮಾಡಲು ಜೆಡಿಎಸ್‍ನವರು ಕೋಟಿಗಟ್ಟಲೆ ಹಣ ಕೇಳಿದ ನಿದರ್ಶನವಿದೆ. ಚುನಾವಣೆ ಮಾಡಲು ನಮಗೆ ಹಣ ಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅದನ್ನು ಒಪ್ಪಿಕೊಂಡಿದ್ದಾರೆ. ಇವರೆಷ್ಟು ಭ್ರಷ್ಟರು ಎಂಬುದು ಇವರಿಗೇ ಗೊತ್ತಿಲ್ಲ. ಹೊರ ರಾಜ್ಯದವರಾದ ರಾಮಸ್ವಾಮಿಯವರನ್ನು ಹಣ ಪಡೆದು ರಾಜ್ಯಸಭಾ ಸದಸ್ಯ ಮಾಡಲು ಆ ಸ್ಥಾನವನ್ನು ಮಾರಾಟ ಮಾಡಿದ್ದರು. ಇದೆಲ್ಲವನ್ನೂ ಭ್ರಷ್ಟಾಚಾರ ಎನ್ನುವುದಿಲ್ಲವೇ?. ಇವರಿಗೆ ಜನಮನ್ನಣೆ ಇಲ್ಲ. ಹತಾಶರಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವರ ಮಾತಿಗೆ ಕವಡೆ ಕಾಸಿನ ಗೌರವವೂ ಸಮಾಜದಲ್ಲಿ ಇಲ್ಲ. ಇದು ರಾಜಕೀಯ ಹತಾಶತನವನ್ನು ಎತ್ತಿ ತೋರಿಸುತ್ತದೆ. ಭೋಜೇಗೌಡರು ಮತ್ತು ಕುಮಾರಸ್ವಾಮಿಯವರ ಆಪಾದನೆ ತೀರಾ ಹಾಸ್ಯಾಸ್ಪದ ಮತ್ತು ಸತ್ಯಕ್ಕೆ ದೂರವಾಗಿದೆ ಎಂದರು.

ಪ್ರಹ್ಲಾದ್​ ಜೋಶಿ ಪ್ರಾಮಾಣಿಕ, ಸರಳ ರಾಜಕಾರಣಿ: ಇವರು ಏನೇ ಸುಳ್ಳು ಹೇಳಿದರೂ ರಾಜಕೀಯ ಭವಿಷ್ಯ ಬರುವುದಿಲ್ಲ. ಇವರ ಹೇಳಿಕೆಗಳನ್ನು ಗಮನಿಸಿದ ಜನರು ನಗುತ್ತಿದ್ದಾರೆ. ಪ್ರಹ್ಲಾದ್​ ಜೋಶಿಯವರು ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರೊಬ್ಬ ಸ್ವಚ್ಛ, ಪ್ರಾಮಾಣಿಕ ಮತ್ತು ಸರಳ ರಾಜಕಾರಣಿ. ಅವರನ್ನು ನೋಡಿ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇವರಿಗೆ ರಾಜಕೀಯ ಪ್ರಬುದ್ಧತೆಯೇ ಇಲ್ಲ. ನಮ್ಮ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬ ಎಬಿಸಿಡಿ ಅವರಿಗೆ ಗೊತ್ತಿಲ್ಲ. ಒಂದು ಬಾರಿ ಸಿ.ಟಿ ರವಿ ಅವರು ಒಂದು ಹೇಳಿಕೆ ಕೊಟ್ಟರೆ ಅವರ ವಿರುದ್ಧ ಕೆಟ್ಟದಾಗಿ ಬಿಂಬಿಸಲು ಮುಂದಾಗುತ್ತಾರೆ. ಯಡಿಯೂರಪ್ಪ ಅವರು ಜೆಡಿಎಸ್ ವಿರುದ್ಧ ಟೀಕಿಸಿದರೆ ಅವರನ್ನು ಕೆಟ್ಟದಾಗಿ ಬೈಯುತ್ತಾರೆ. ಯಾರೇ ಇವರ ವಿರುದ್ಧ ಹೇಳಿಕೆ ಕೊಟ್ಟರೆ ಅವರನ್ನು ಬೈಯುವ ಪರಂಪರೆಯನ್ನು ರೂಢಿಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ: ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಸ್ವೀಕಾರ- ಭೋಜೇಗೌಡ ಆರೋಪ: ಮಾನನಷ್ಟ ಮೊಕದ್ದಮೆ ಹೂಡುವೆ- ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.