ಕರ್ನಾಟಕ

karnataka

ಸೆಪ್ಟೆಂಬರ್ 12ರಿಂದ ಕೆಐಎಎಲ್​ ಟರ್ಮಿನಲ್​-2 ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ

By ETV Bharat Karnataka Team

Published : Sep 1, 2023, 9:52 AM IST

Updated : Sep 1, 2023, 12:17 PM IST

ಕೆಲ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಟರ್ಮಿನಲ್ -2 ಕಾರ್ಯಾಚರಣೆಯನ್ನು ಸೆಪ್ಟೆಂಬರ್ 12ರಿಂದ ಪ್ರಾರಂಭಿಸಲಾಗುವುದು ಎಂದು ಬಿಐಎಎಲ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟರ್ಮಿನಲ್​ 2
ಟರ್ಮಿನಲ್​ 2

ದೇವನಹಳ್ಳಿ:ವಿವಿಧ ನಿಯಂತ್ರಕ ಇಲಾಖೆ ಮತ್ತು ಸಹಭಾಗಿಗಳೊಂದಿಗೆ ಸಮಾಲೋಚಿಸಿದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌-2 ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಸೆಪ್ಟೆಂಬರ್ 12 ರಂದು ಆರಂಭಿಸಲಾಗುವುದು ಎಂದು ಬಿಐಎಎಲ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ‌ಗಸ್ಟ್ 31ಕ್ಕೆ ನಿಗದಿಯಾಗಿದ್ದ ಟರ್ಮಿನಲ್ -2 ಕಾರ್ಯಾಚರಣೆಯನ್ನು ಕೆಲ ತಾಂತ್ರಿಕ ಕಾರಣಗಳಿಂದ ಮುಂದೂಡಿಕೆ ಮಾಡಲಾಗಿತ್ತು. ಈಗ ಸೆಪ್ಟೆಂಬರ್ 12 ರಂದು ಬೆಳಗ್ಗೆ 10.45 ರಿಂದ ಹೊಸ ಟರ್ಮಿನಲ್ ನಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಲಾಗಿದೆ. ನಿಯಂತ್ರಕರ ಅಂಗೀಕಾರ, ಕಾರ್ಯಾಚರಣೆಯ ದಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವಿಮಾನಯಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಮ್ಮ ಪ್ರಯಾಣಿಕರಿಗೆ ಈ ಬದಲಾವಣೆಯನ್ನು ಸುಗಮವಾಗಿಸಲು ನಾವು ಬದ್ಧರಾಗಿದ್ದೇವೆ. ಹೊಸ ಸೌಲಭ್ಯಕ್ಕೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯ ಅಡಚಣೆರಹಿತ ಸ್ಥಳಾಂತರಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಟರ್ಮಿನಲ್ 2 ವಿಶೇಷತೆ:ಈ ಟರ್ಮಿನಲ್ ಉದ್ಯಾನವನದಂತೆ ಸಿಂಗಾರಗೊಂಡಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಮೈದಳೆದಿದೆ. ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600 - 800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್‌ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣ ಸಿಗುತ್ತದೆ.

ಕರ್ನಾಟಕದ ಶ್ರೀಮಂತ ಪರಂಪರೆಯ ಅನಾವರಣ:ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್‌ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆಯಾಗಿದೆ. ಮೊದಲ ಬಾರಿಗೆ ಇಂಜಿನಿಯರ್ಸ್​ ಬಿದಿರು ಬಳಕೆ ಮಾಡಿದ್ದು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳ್ವಿಕೆ ಬರುತ್ತದೆ.

ಫೋಲಿ ಡಿಸೈನ್‌ ಮತ್ತು ಗುಂಡುರಾಜು ಕಲಾಕೃತಿ: ಟರ್ಮಿನಲ್‌ನಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಅನಾವರಣ ಮಾಡಲಾಗಿದೆ. ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್‌ ಚೋನಾಟ್‌ ಅವರ ಬೋರ್ಡಿಂಗ್‌ ಪಿಯರ್‌ ಕಲಾಕೃತಿ, ಬಿದ್ರಿ ಕ್ರಾಫ್ಟ್‌ ಗಾಥಾ ಮತ್ತು ಎಂ.ಎ.ರೌಫ್‌ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್‌ ಮತ್ತು ಗುಂಡುರಾಜು ಅವರ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ:ಬೆಂಗಳೂರು: ತಾಂತ್ರಿಕ ಕಾರಣಗಳಿಂದ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮುಂದೂಡಿಕೆ

Last Updated :Sep 1, 2023, 12:17 PM IST

ABOUT THE AUTHOR

...view details