ಕರ್ನಾಟಕ

karnataka

ದೊಡ್ಡ ಬಳ್ಳಾಪುರದಲ್ಲಿ ತೆಂಗಿನ ಗರಿ ಗ್ಯಾಂಗ್ ಬಂಧನ: ನಿಟ್ಟುಸಿರು ಬಿಟ್ಟ ರೈತರು

By

Published : Sep 11, 2021, 5:43 PM IST

ದೊಡ್ಡಬಳ್ಳಾಪುರದಲ್ಲಿ ತೆಂಗಿನ ಗರಿ ಗ್ಯಾಂಗ್ ಬಂಧನ

ದೊಡ್ಡಬಳ್ಳಾಪುರ ಸುತ್ತಮುತ್ತಲಿನ ತೆಂಗಿನ ತೋಟಕ್ಕೆ ರಾತ್ರೋರಾತ್ರಿ ನುಗ್ಗುತ್ತಿದ್ದ ಈ ಗ್ಯಾಂಗ್​ ತೆಂಗಿನ ಗರಿಗಳನ್ನ ಕಳ್ಳತನ ಮಾಡುತ್ತಿದ್ದರು. ತೆಂಗಿನ ಗಿಡ ಮಾಲೀಕರು ಮೊದ ಮೊದಲು ತೆಂಗಿನ ಗರಿ ಕಳವು ಸಾಮಾನ್ಯ ಎಂದು ತಿಳಿದು ಸುಮ್ಮನಾಗಿದ್ದರು.

ದೊಡ್ಡಬಳ್ಳಾಪುರ: ಹಬ್ಬ ಹರಿದಿನಗಳ ಸಮಯದಲ್ಲಿ ಅಲಂಕಾರಕ್ಕೆ ಬಳಸಲಾಗುವ ತೆಂಗಿನ ಗರಿ ಕದ್ದು ಮಾರುವ ಗ್ಯಾಂಗ್ ಅನ್ನು ದೊಡ್ಡಬಳ್ಳಾಪುರ ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ಸುತ್ತಮುತ್ತಲಿನ ತೆಂಗಿನ ತೋಟಕ್ಕೆ ರಾತ್ರೋರಾತ್ರಿ ನುಗ್ಗುತ್ತಿದ್ದ ಈ ಗ್ಯಾಂಗ್​ ತೆಂಗಿನ ಗರಿಗಳನ್ನ ಕಳ್ಳತನ ಮಾಡುತ್ತಿದ್ದರು. ತೆಂಗಿನ ಗಿಡ ಮಾಲೀಕರು ಮೊದ ಮೊದಲು ತೆಂಗಿನ ಗರಿ ಕಳವು ಸಾಮಾನ್ಯ ಎಂದು ತಿಳಿದು ಸುಮ್ಮನಾಗಿದ್ದರು. ಆದರೆ, ದಿನೇ ದಿನೆ ತೆಂಗಿನ ಗರಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ರೈತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.

ತೆಂಗಿನ ಗರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ, ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ರಂಗಪ್ಪ ಮಾರ್ಗದರ್ಶನದಲ್ಲಿ ಇನ್ಸ್​​​ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸ್ ತಂಡ ತೆಂಗಿನ ಗರಿ ಗ್ಯಾಂಗ್ ಪತ್ತೆ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನವನ್ನ ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಅಲಂಕಾರಕ್ಕಾಗಿ ಬಳಕೆಯಾಗುತ್ತಿದ್ದ ತೆಂಗಿನ ಗರಿಗಳಿಗೆ ಬೆಂಗಳೂರಿನಲ್ಲಿ ಫುಲ್ ಡಿಮ್ಯಾಂಡ್ :

ಹಬ್ಬ ಹರಿದಿನಗಳ ಹೂವಿನ ಅಲಂಕಾರದೊಂದಿಗೆ ತೆಂಗಿನ ಗರಿ ಬಳಕೆ ಮಾಡಲಾಗುತ್ತಿತ್ತು. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ತೆಂಗಿನ ಗರಿಗಳಿಗೆ ಸಾಕಷ್ಟು ಬೇಡಿಕೆ ಇತ್ತು. ತೆಂಗಿನ ಗರಿಗಳ ಬೇಡಿಕೆಯ ಬಗ್ಗೆ ಅರಿತ ದೇವನಹಳ್ಳಿ ಕೊಯಿರಾ ಮೂಲದ ಎಳೆನೀರು ವ್ಯಾಪಾರಿಗಳು ತೆಂಗಿನ ಗರಿಗಳ ಕಳ್ಳತನಕ್ಕೆ ಇಳಿದಿದ್ದರು.

ರಾತ್ರೋರಾತ್ರಿ ರೈತರ ತೆಂಗಿನ ತೋಟಕ್ಕೆ ನುಗ್ಗುತ್ತಿದ್ದ ಈ ಗ್ಯಾಂಗ್​, ತೆಂಗಿನ ಗರಿಗಳನ್ನ ಕಡಿದು ಬೊಲೆರೋ ವಾಹನದಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದರು. ತೆಂಗಿನ ಮರದ ಸಂಪೂರ್ಣ ಗರಿಗಳನ್ನ ಕಡಿದು ಬೋಡು ಮಾಡುತ್ತಿದ್ದರು. ತೆಂಗಿನ ಗರಿ ಕಳ್ಳರ ಗ್ಯಾಂಗ್ ನಿಂದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಈಗ ಆರೋಪಿಗಳ ಬಂಧನವಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ : ಹೊಸಪೇಟೆ: ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಬೈಕ್​​ಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ABOUT THE AUTHOR

...view details