ನಟಿ ರಶ್ಮಿಕಾ ಮಂದಣ್ಣ ಸಿನಿಮಾ, ಅಭಿನಯ ಚೆನ್ನಾಗಿದ್ದರೂ ಟ್ರೋಲ್ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಏನಾದರೊಂದು ಹೇಳಲು ಹೋಗಿ ಅದಿನ್ನೇನೋ ಆಗಿ ಟ್ರೋಲಿಗರ ಕೈಯಲ್ಲಿ ಸಿಕ್ಕಿಹಾಕಿಕೊಂಡು ನಗೆಪಾಟಲಿಗೆ ಗುರಿಯಾಗುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ, ಟ್ರೋಲಿಗರ ವಿರುದ್ಧ ಖಡಕ್ ಆಗಿ ಮಾತನಾಡಿದ್ದಾರೆ. "ನಾನೇನು ಮಾಡಿದರೂ ನಿಮಗೆ ತಪ್ಪಾಗಿಯೇ ಕಾಣಿಸುತ್ತದೆ. ನಿಮಗೆ ನನ್ನಿಂದಾಗುತ್ತಿರುವ ಸಮಸ್ಯೆಯಾದರೂ ಏನು? ಅದನ್ನಾದರೂ ಸ್ಪಷ್ಟವಾಗಿ ಹೇಳಿ" ಎಂದು ಟ್ರೋಲಿಗರನ್ನು ಪ್ರಶ್ನಿಸಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನ್ಯಾಷನಲ್ ಕ್ರಶ್ ಎಂದು ಶೈನ್ ಆದ ನಟಿ ರಶ್ಮಿಕಾ ಮಂದಣ್ಣ. ಇತ್ತೀಚಿನ ದಿನಗಳಲ್ಲಿ ಕೊಡಗಿನ ಕುವರಿ ರಶ್ಮಿಕಾ ಸದಾ ಟ್ರೋಲಿಗರ ಟೀಕೆಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದರಿಂದ ರೋಸಿ ಹೋಗಿರುವ ಮಂದಣ್ಣ ಸಂದರ್ಶನವೊಂದರಲ್ಲಿ ಟ್ರೋಲಿಗರ ವಿರುದ್ಧ ಹರಿಹಾಯ್ದರು. ತನ್ನ ಜೀವನದಲ್ಲಿ ತಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸದಾ ಸಮಸ್ಯೆಯನ್ನೇ ಹುಡುಕುತ್ತಿರುವ ಟ್ರೋಲಿಗರ ವಿರುದ್ಧ ಕೋಪಗೊಂಡರು. "ಎಲ್ಲಾ ರೀತಿಯಲ್ಲೂ ನನ್ನನ್ನು ನಿಂದಿಸಬೇಡಿ. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರುತ್ತಿದೆ' ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, "ಯಶಸ್ಸು ಮತ್ತು ಖ್ಯಾತಿಯ ಹೊರತಾಗಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಕೆಲವೊಮ್ಮೆ ಇದೆಲ್ಲವೂ ನನ್ನ ಆಲೋಚನೆಯನ್ನೇ ಮೀರಿದೆ. ಜನರು ನನ್ನ ದೇಹದ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ನಾನು ವರ್ಕೌಟ್ ಮಾಡಿದ್ರೆ ಹುಡುಗನ ಹಾಗೆ ಕಾಣಿಸ್ತೀನಿ ಅಂತಾರೆ. ಅದೇ ಮಾಡದೇ ಹೋದ್ರೆ ದಪ್ಪ ಆಗಿದ್ದೀನಿ ಅಂತಾರೆ. ಜಾಸ್ತಿ ಮಾತಾಡಿದ್ರೆ ಭಾರಿ ಮಾತಾಡ್ತಾಳೆ ಅನ್ನುತ್ತಾರೆ. ಮಾತನಾಡದೇ ಇದ್ರೆ ರಶ್ಮಿಕಾಗೆ ಎಷ್ಟು ಕೊಬ್ಬು ಅಂತಾರೆ. ಇದು ಹೇಗಾಗಿದೆ ಅಂದ್ರೆ ಜನರಿಗೆ ನಾನು ಉಸಿರಾಡಿದ್ರೂ ತಪ್ಪು. ಉಸಿರಾಡದೇ ಇದ್ರೂ ತಪ್ಪು. ಎಲ್ಲದರಲ್ಲೂ ಸಮಸ್ಯೆಯನ್ನು ಎತ್ತಿ ತೋರಿಸುತ್ತಾರೆ. ಹಾಗಾದರೆ ನಾನೇನು ಮಾಡಬೇಕೆಂದು ನೀವು ಬಯಸುತ್ತೀರಿ? ನಿಮಗೆ ನನ್ನಿಂದಾಗುತ್ತಿರುವ ಸಮಸ್ಯೆಗಳಾದರೂ ಏನು? ಇದಕ್ಕೆ ನೀವು ಮೊದಲು ಸ್ಪಷ್ಟನೆ ನೀಡಿ" ಎಂದು ಹೇಳಿದರು.
ಇದನ್ನೂ ಓದಿ:ಸ್ಯಾಂಡಲ್ವುಡ್ ತಾರೆಯರ ಸಂಕ್ರಾಂತಿ ಜೋಶ್: ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ
"ನೀವು ನನ್ನಿಂದ ಏನನ್ನು ಬಯಸುತ್ತೀರಾ ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ಖಂಡಿತವಾಗಿಯೂ ನಾನದನ್ನು ಕೇಳುತ್ತೇನೆ. ನೀವು ನನಗೆ ಯಾವುದೇ ರೀತಿಯ ಸ್ಪಷ್ಟನೆ ನೀಡದೇ ಇದ್ದಲ್ಲಿ ನಾನೇನು ಮಾಡಬೇಕು? ನಿಮಗೆ ನನ್ನಿಂದ ಯಾವ ಸಮಸ್ಯೆ ಆಗುತ್ತಿದೆ ಅದನ್ನಾದರೂ ನನ್ನೊಂದಿಗೆ ಹಂಚಿಕೊಳ್ಳಿ. ಅದರ ಹೊರತಾಗಿ ವಿನಾಕಾರಣ ನಿಂದೆ ಮಾಡಬೇಡಿ. ನೀವು ಬಳಸುತ್ತಿರುವ ಕೆಲವು ಪದಗಳು, ವಾಕ್ಯಗಳು ನನಗೆ ನೋವುಂಟು ಮಾಡುತ್ತಿವೆ" ಎಂದು ನೊಂದು ನುಡಿದಿದ್ದಾರೆ.
'ನಗುವಿನೊಂದಿಗೆ ಬದುಕಲು ಕಲಿತೆ...': ರಶ್ಮಿಕಾ ಎಲ್ಲವನ್ನೂ ನಗುಮುಖದಿಂದಲೇ ಸ್ವೀಕರಿಸುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾಗೆ, "ನೀವು ಸದಾ ನಗುಮುಖದಿಂದಲೇ ಇರುತ್ತೀರಾ. ಅದು ಹೇಗೆ?" ಎಂದು ಕೇಳಿದರು. ಇದಕ್ಕೂ ನಗುತ್ತಲೇ ಉತ್ತರಿಸಿದ ರಶ್ಮಿಕಾ, "ನಾನು ಬಾಲ್ಯದಿಂದಲೇ ನಗುವಿನೊಂದಿಗೆ ಬದುಕಲು ಕಲಿತಿದ್ದೇನೆ. ಮನೆಯಿಂದ ದೂರವಿದ್ದು ಹಾಸ್ಟೇಲಿನಲ್ಲಿ ಬೆಳೆದು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ನನಗೆ ಸರಿಯಾಗಿ ಬೇರೆಯವರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ನನ್ನ ವಯಸ್ಸಿನ ಮಕ್ಕಳೊಂದಿಗೆ ಬೆರೆಯಲು ಆಗುತ್ತಿರಲಿಲ್ಲ. ಹೀಗಾಗಿಯೇ ಅನೇಕರು ನನ್ನನ್ನು ತಪ್ಪಾಗಿ ಗ್ರಹಿಸಿಬಿಟ್ಟಿದ್ದರು. ಇದೆಲ್ಲದರಿಂದ ನೊಂದ ನಾನು ಒಂಟಿಯಾಗಿ ಕೋಣೆಯಲ್ಲಿ ಕುಳಿತು ಗಂಟೆಗಟ್ಟಲೆ ಅಳುತ್ತಿದ್ದೆ" ಎಂದು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡರು.
"ಆದರೆ ನನ್ನ ತಾಯಿ ಸದಾ ನನಗೆ ಬೆಂಬಲವಾಗಿ ನಿಂತಿದ್ದರು. ಅವರೇ ಇಂದಿನ ನನ್ನೆಲ್ಲಾ ಯಶಸ್ಸಿಗೆ ಕಾರಣಕರ್ತರು. ನನ್ನೆಲ್ಲಾ ಸಮಸ್ಯೆಗಳನ್ನು ಅವರೊಂದಿಗೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದೆ. ಎಲ್ಲವನ್ನೂ ಆಲಿಸುತ್ತಿದ್ದರು ಮತ್ತು ಅರ್ಥಮಾಡಿಕೊಳ್ಳುತ್ತಿದ್ದರು" ಎಂದು ಹೇಳಿದರು. ರಶ್ಮಿಕಾ ಇತ್ತೀಚೆಗೆ ತಮಿಳು ಸಿನಿಮಾ 'ವರಿಸು' ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ನಟ ವಿಜಯ್ ಅವರೊಂದಿಗೆ ಜೋಡಿಯಾಗಿದ್ದಾರೆ. ಇದು ಅವರ ಎರಡನೇ ತಮಿಳು ಪ್ರಾಜೆಕ್ಟ್ ಆಗಿದೆ.
ಇದನ್ನೂ ಓದಿ:ಸೌತ್ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ