ಕರ್ನಾಟಕ

karnataka

ಈ ವಾರ ಚಂದನವನದಲ್ಲಿ ಎಂಟು ಸಿನಿಮಾಗಳು ತೆರೆಗೆ.. ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲೋದ್ಯಾರು?

By

Published : Jul 14, 2022, 7:04 PM IST

ಈ ವಾರ ಸಿನಿ ಪ್ರಿಯರಿಗೆ ಹಬ್ಬದೂಟ- ಚಂದನವನದಲ್ಲಿ ಎಂಟು ಸಿನಿಮಾಗಳು ತೆರೆಗೆ - ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲೋದ್ಯಾರು?

Chase movie poster
ಚೇಜ್​ ಸಿನಿಮಾದ ಪೋಸ್ಟರ್​

ಸ್ಯಾಂಡಲ್​ವುಡ್​ನಲ್ಲಿ ಪ್ರತಿವಾರ ಬಿಡುಗಡೆ ಆಗುತ್ತಿರುವ, ಸಿನಿಮಾಗಳ ಸಂಖ್ಯೆ ನೋಡ್ತಾ ಇದ್ರೆ, ಹನುಮಂತನ ಬಾಲದಂತಿದೆ. ಇದರ ಜೊತೆಗೆ ಪರಭಾಷೆ ಚಿತ್ರಗಳ ಹಾವಳಿಯಿಂದ ಥಿಯೇಟರ್ ಸಮಸ್ಯೆ‌ ಆಗುತ್ತಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಈ ವಾರ ಕೂಡ ಡಬ್ಬಿಂಗ್ ಸಿನಿಮಾ ಸೇರಿದಂತೆ ಒಟ್ಟು 8 ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ.

ಆ ಸಾಲಿನಲ್ಲಿ ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್, ಅನೀಶ್ ತೇಜೇಶ್ವರ್ ಅಭಿನಯದ ಬೆಂಕಿ, ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ಓ ಮೈ ಲವ್, ಅವಿನಾಶ್ ನರಸಿಂಹರಾಜ್ ನಟನೆಯ ಚೇಜ್, ಹೊಸಬರ ಕರ್ಮಣ್ಯೇ ವಾಧಿಕಾರಸ್ತೆ, ಪದ್ಮಾವತಿ ಸೇರಿ ಆರು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಾ ಇವೆ.

ಫೆಟ್ರೋಮ್ಯಾಕ್ಸ್​ ಸಿನಿಮಾದ ಪೋಸ್ಟರ್​

ಈ ಆರು ಚಿತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಪೆಟ್ರೋಮ್ಯಾಕ್ಸ್. ಸತೀಶ್ ನೀನಾಸಂ ಹಾಗು ಹರಿಪ್ರಿಯಾ ಅಭಿನಯದ ಈ ಚಿತ್ರಕ್ಕೆ ಸಿದ್ಲಿಂಗು, ನೀರ್​ದೋಸೆ ಚಿತ್ರಗಳ‌ ನಿರ್ದೇಶಕ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಡಬಲ್​ ಮೀನಿಂಗ್​ ಡೈಲಾಗ್​ ಜೊತೆಗೆ ಸೀರಿಯಸ್ ಕಥೆ ಒಳಗೊಂಡಿರುವ ಪೆಟ್ರೋಮ್ಯಾಕ್ಸ್​ ಚಿತ್ರಕ್ಕೆ ಪ್ರೇಕ್ಷಕರು ಎಷ್ಟು ಮಾರ್ಕ್ಸ್ ಕೊಡ್ತಾರೆ ಅನ್ನೋದು ನಾಳೆ ಗೊತ್ತಾಗಲಿದೆ.

ಬೆಂಕಿ ಸಿನಿಮಾದ ಪೋಸ್ಟರ್​

ರಾಮಾರ್ಜುನ ಸಿನಿಮಾ ಬಳಿಕ ಅನೀಶ್ ತೇಜೇಶ್ವರ್ ಅಭಿನಯದ ಮಾಸ್ ಸಿನಿಮಾ ಬೆಂಕಿ ತೆರೆಗೆ ಬರುತ್ತಿದೆ. ನಟನೆಯ ಜೊತೆ ನಿರ್ಮಾಣಕ್ಕೂ ಕೈ ಹಾಕಿರುವ ಅನೀಶ್​​ ತೇಜ್ವೇಶ್ವರ್​ಗೆ, ಈ ಸಿನಿಮಾ ತುಂಬಾನೇ ಇಂಪಾರ್ಟೆಂಟ್. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌. ಬಾಬು ಪುತ್ರ ಶಾನ್‌ ಬೆಂಕಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅನೀಶ್​​ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದಾರೆ. ಅಣ್ಣ-ತಂಗಿ ಸೆಂಟಿಮೆಂಟ್‌ ಕಥೆಯ ಜೊತೆಗೆ, ಹಳ್ಳಿ ಸೊಗಡಿನ ಕಂಪು ಚೆಲ್ಲುವ ಈ ಚಿತ್ರ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.

ಪದ್ಮಾವತಿ ಸಿನಿಮಾದ ಪೋಸ್ಟರ್​

ಬಹಳ ವರ್ಷಗಳ ಬಳಿಕ ಅವಿನಾಶ್ ನರಸಿಂಹರಾಜು ಅಭಿನಯಿಸಿದ್ದು, ರಂಗಿತರಂಗ ಚಿತ್ರದ ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಚೇಜ್ ಸಿನಿಮಾ ಕೂಡ ನಾಳೆ ತೆರೆಗೆ ಬರ್ತಾ ಇದೆ. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಜಾನರ್ ಕಥೆ ಇರುವ ಚೇಜ್ ಚಿತ್ರವನ್ನು ವಿಲೋಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

ಓ ಮೈ ಲವ್​ ಸಿನಿಮಾದ ಪೋಸ್ಟರ್​

ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಹೀರೋ ಆಗಿರುವ ಓ ಮೈ ಲವ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ರೊಮ್ಯಾಂಟಿಕ್ ಲವ್ ಸ್ಟೋರಿಯುಳ್ಳ ಈ ಸಿನಿಮಾದಲ್ಲಿ ಅಕ್ಷಿತ್‌ಗೆ ನಾಯಕಿಯಾಗಿ ಕೀರ್ತಿ ಕಲ್ಕೆರೆ ನಟಿಸಿದ್ದಾರೆ. ಬಳ್ಳಾರಿ ದರ್ಬಾರ್ ಅನ್ನೋ ಸಿನಿಮಾ ಮಾಡಿದ್ದ ಸ್ಮೈಲ್ ಶ್ರೀನು ಓ ಮೈ ಲವ್​ಗೆ ನಿರ್ದೇಶನ ಮಾಡಿದ್ದಾರೆ.

ಕರ್ಮಣ್ಯೇ ವಾಧಿಕಾರಸ್ತೆ ಸಿನಿಮಾದ ಪೋಸ್ಟರ್​

ಹರಿ ಆನಂದ್ ನಿರ್ದೇಶನದ, ಯುವ ನಟ ಪ್ರತೀಕ್ ಸುಬ್ರಮಣಿ ಅಭಿನಯದ ಕರ್ಮಣ್ಯೇ ವಾಧಿಕಾರಸ್ತೆ ಹಾಗು ವಿಕ್ರಂ ಆರ್ಯ, ಸಾಕ್ಷಿ ಮೇಘನ ಅಭಿನಯದ ಮಿಥುನ್‌ ಚಂದ್ರಶೇಖರ್ ನಿರ್ದೇಶನದ ಪದ್ಮಾವತಿ ಚಿತ್ರ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ಈ ಆರು ಕನ್ನಡ ಚಿತ್ರಗಳ ಜೊತೆ ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾಗಳಾದ ಗಾರ್ಗಿ ಹಾಗು ಹುಡುಗಿ ಸಿನಿಮಾ ಸೇರಿದಂತೆ, ನಾಳೆ ಒಂದೇ ದಿನ 8 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಪೈಪೋಟಿಯಲ್ಲಿ ಗೆಲ್ಲುವ ಸಂಖ್ಯೆಗಿಂತ ಬೀಳುವ ಸಂಖ್ಯೆಯೇ ಹೆಚ್ಚಾಗಿದ್ದು, ನಿರ್ಮಾಪಕರು ಕೈ ಸುಟ್ಟುಕೊಳ್ಳುತ್ತಿರುವುದು ಅಷ್ಟೇ ಸತ್ಯ. ಆದರೆ ಸಿನಿಮಾ ನಿರ್ಮಾಪಕರು ಜಿದ್ದಿಗೆ ಬಿದ್ದವರಂತೆ ಸಿನಿಮಾ ಬಿಡುಗಡೆ ಮಾಡ್ತಾ ಇರೋದು ವಿಪರ್ಯಾಸ.

ಇದನ್ನೂ ಓದಿ :ನಟಿ ಜಾನ್ವಿ ಕಪೂರ್​​ ಅಭಿನಯದ 'Good Luck Jerry' ಟ್ರೈಲರ್ ಬಿಡುಗಡೆ

ABOUT THE AUTHOR

...view details