ಕಲಬುರಗಿ:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ತಂದೆ - ಮಗ ಇಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪಿಎಸ್ಐ ಅಭ್ಯರ್ಥಿಯಾದ ಪ್ರಭು ಮತ್ತು ಆತನ ತಂದೆ ಶರಣಪ್ಪ ಎಂಬುವರು ಜಾಮೀನು ಮಂಜೂರಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯ ವಜಾ ಮಾಡಿದೆ. ಇದರಿಂದ ಅಪ್ಪ- ಮಗನಿಗೆ ಜೈಲೇ ಗತಿಯಾಗಿದೆ.
ಏನಿದು ಪ್ರಕರಣ:ಪಿಎಸ್ಐ ಅಭ್ಯರ್ಥಿಯಾಗಿದ್ದ ಪ್ರಭು ನಗರದ ಎಂಎಸ್ ಇರಾನಿ ಕಾಲೇಜ್ನ ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ವೇಳೆ ಪ್ರಭು ಹಾಗೂ ಅಕ್ರಮಕ್ಕೆ ಸಹಕರಿಸಿದ ಆತನ ತಂದೆ ಶರಣಪ್ಪ ಮತ್ತು ಮಧ್ಯವರ್ತಿ ಚಂದ್ರಕಾಂತ್ ಕುಲಕರ್ಣಿ ವಿರುದ್ಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.