ಕರ್ನಾಟಕ

karnataka

ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್ ಊಟ ತಿನ್ನುವ ಆಸೆ:  ಕೊಡಿಸದ ಗಂಡ, 2 ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ

By

Published : Jan 6, 2022, 9:04 AM IST

ದೊಡ್ಡಬಳ್ಳಾಪುರ ತಾಲೂಕಿನ  ಎಸ್ ಎಂ  ಗೊಲ್ಲಹಳ್ಳಿ
ದೊಡ್ಡಬಳ್ಳಾಪುರ

ಹೆಂಡತಿ ಆಸೆ ಈಡೇರಿಸದ ಹಳ್ಳಿ ಗಂಡನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಎರಡು ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಬೆಳೆದಿದ್ದ ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್​ನಲ್ಲಿ ಊಟ ಮಾಡುವ ಆಸೆ. ಹಳ್ಳಿಯವನಾದ ಗಂಡ, ಹೆಂಡತಿಯ ಆಸೆಗೆ ತಣ್ಣೀರು ಎರೆಚಿದ್ದ. ಹೀಗಾಗಿ ಪತಿಯ ವರ್ತನೆಯಿಂದ ಜುಗುಪ್ಸೆಗೊಂಡ ಮಹಿಳೆ, ಎರಡು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಳ್ಳಿ ಗಂಡನ ವರ್ತನೆಗೆ ಬೇಸತ್ತ ಹೆಂಡತಿ ತನ್ನ ಎರಡು ಮಕ್ಕಳ ಜೊತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂಧ್ಯಾ (24 ) ಆತ್ಮಹತ್ಯೆಗೆ ಶರಣಾದ ತಾಯಿ. ಕುಸುಮಾ (4 ) ಮತ್ತು ರೋಹಿತ್ (2) ಮೃತ ಮಕ್ಕಳು.

ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿ

ಯಲಹಂಕದ ಮಾರುತಿ ನಗರದ ಸಂಧ್ಯಾ, ಪಟ್ಟಣದಲ್ಲಿ ಬೆಳೆದ ಹುಡುಗಿ. ಕಳೆದ 5 ವರ್ಷದ ಹಿಂದೆ ಎಸ್ ಎಂ ಗೊಲ್ಲಹಳ್ಳಿಯ ಶ್ರೀಕಾಂತ್ ಎಂಬುವರಿಗೆ ಸಂಧ್ಯಾಳನ್ನು ಮದುವೆ ಮಾಡಿ ಕೊಡಲಾಗಿತ್ತು. ಇಬ್ಬರ ದಾಂಪತ್ಯಕ್ಕೆ ಎರಡು ಮುದ್ದಾದ ಮಕ್ಕಳಿದ್ದಾರೆ. ಶ್ರೀಕಾಂತನ ಅಪ್ಪ- ಅಮ್ಮ ಸಹ ಇವರ ಜೊತೆಯಲ್ಲೇ ವಾಸವಾಗಿದ್ದರು. ಪಟ್ಟಣದಲ್ಲಿ ಬೆಳೆದಿದ್ದ ಸಂಧ್ಯಾಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹೊರಗಡೆ ಹೋಗಿ ಹೋಟೆಲ್​ನಲ್ಲಿ ಊಟ ಮಾಡುವ ಅಭ್ಯಾಸ.

ಮದುವೆಯಾದ ನಂತರ ತನ್ನ ಗಂಡನಿಗೆ ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗುವಂತೆ ನಿತ್ಯ ಹೇಳುತ್ತಿದ್ದಳು. ಆದರೆ ಹಳ್ಳಿಯವನಾದ ಶ್ರೀಕಾಂತ್, ಹೋಟೆಲ್​ಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಈ ಬಗ್ಗೆ ಸಂಧ್ಯಾ ತನ್ನ ಹೆತ್ತವರಿಗೂ ಹೇಳಿದ್ದಳು. ಗಂಡನ ವರ್ತನೆಯಿಂದ ಬೇಸತ್ತ ಸಂಧ್ಯಾ, ಮನೆಯಲ್ಲಿ ಗಂಡ, ಅತ್ತೆ, ಮಾವ ಇಲ್ಲದ ಸಮಯದಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಮಕ್ಕಳಿಗೂ ಕೂಡ ಬೆಂಕಿ ತಗುಲಿ ಗಂಭೀರವಾಗಿ ಗಾಯಾಗೊಂಡಿದ್ದರು.

ಸಂಧ್ಯಾಳ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲನ್ನು ತೆಗೆದು ಒಳ ಹೋದಾಗ ಮಕ್ಕಳು ಸೇರಿದಂತೆ ತಾಯಿ ಅರ್ಧ ಬೆಂದು ಹೋಗಿದ್ದರು. ಕೂಡಲೇ ಸಂಧ್ಯಾ ಮತ್ತು ಆಕೆಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details