ಕರ್ನಾಟಕ

karnataka

Gallantry awards: 4 ಕೀರ್ತಿ ಚಕ್ರ, 11 ಶೌರ್ಯ ಚಕ್ರ ಸೇರಿದಂತೆ 76 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ಅನುಮೋದನೆ

By

Published : Aug 15, 2023, 6:57 AM IST

Independence Day: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 76 ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 76 ಶೌರ್ಯ ಪ್ರಶಸ್ತಿಗಳನ್ನು ನೀಡಲು ಸೋಮವಾರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಶೌರ್ಯ ಪ್ರಶಸ್ತಿಗಳಲ್ಲಿ ನಾಲ್ಕು ಕೀರ್ತಿ ಚಕ್ರ (ಮರಣೋತ್ತರ), 11 ಶೌರ್ಯ ಚಕ್ರಗಳು (ಐದು ಮರಣೋತ್ತರ ಸೇರಿದಂತೆ) ಎರಡು ಸೇನಾ ಪದಕಗಳು (ಶೌರ್ಯ), 52 ಸೇನಾ ಪದಕಗಳು (ಶೌರ್ಯ), ಮೂರು ನವ ಸೇನಾ ಪದಕ (ಶೌರ್ಯ) ಮತ್ತು ನಾಲ್ಕು ವಾಯು ಸೇನಾ ಪದಕಗಳು (ಶೌರ್ಯ) ಸೇರಿವೆ.

ಸೇನಾ ಶ್ವಾನ ಮಧು (ಮರಣೋತ್ತರ) ಸೇರಿದಂತೆ ಸೇನೆಗೆ 30 ಮೆನ್ಷನ್-ಡೆಸ್ಪ್ಯಾಚ್‌ಗಳನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಕೊಡುಗೆ ಮತ್ತು ಸಾಧನೆಗಾಗಿ ವಾಯುಪಡೆ ಸಿಬ್ಬಂದಿಗೂ ಶೌರ್ಯ ಪದಕ ಘೋಷಣೆಯಾಗಿದೆ. ಕಾರ್ಯಾಚರಣೆಗಳಲ್ಲಿ ಆಪರೇಷನ್ ರಕ್ಷಕ್, ಆಪರೇಷನ್ ಸ್ನೋ ಲೆಪರ್ಡ್, ಆಪರೇಷನ್ ಕ್ಯಾಶುವಾಲಿಟಿ ಇವ್ಯಾಕ್ಯುಯೇಶನ್, ಆಪರೇಷನ್ ಮೌಂಟ್ ಚೋಮೊ, ಆಪರೇಷನ್ ಪಾಂಗ್ಸೌ ಪಾಸ್, ಆಪರೇಷನ್ ಮೇಘದೂತ್, ಆಪರೇಷನ್ ಆರ್ಕಿಡ್, ಆಪರೇಷನ್ ಕಲಿಶಮ್ ವ್ಯಾಲಿ, ಪಾರುಗಾಣಿಕಾ ಕಾರ್ಯಾಚರಣೆ ಮತ್ತು ಕಾರ್ಯಾಚರಣೆ ಇವಾಕ್ಯುಯೇಶನ್ ಸೇರಿವೆ.

ಕೀರ್ತಿ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ವೀಕರಿಸಿದವರು ದಿಲೀಪ್ ಕುಮಾರ್ ದಾಸ್, ರಾಜ್ ಕುಮಾರ್ ಯಾದವ, ಬಬ್ಲು ರಾಭಾ ಮತ್ತು ಸಂಭಾ ರಾಯ್. ಇವರೆಲ್ಲರೂ ಕೇಂದ್ರ ಮೀಸಲು ಪೊಲೀಸ್ ಪಡೆಯವರು. ಮೇಜರ್ ವಿಕಾಸ್ ಭಂಭು ಮತ್ತು ಆರ್ಮಿ ಏವಿಯೇಷನ್ ಸ್ಕ್ವಾಡ್ರನ್‌ನ ಮೇಜರ್ ಮುಸ್ತಫಾ ಬೋಹರಾ, ರಜಪೂತಾನ ರೈಫಲ್ಸ್‌ನ ಹವ್ ವಿವೇಕ್ ಸಿಂಗ್ ತೋಮರ್, ರಾಷ್ಟ್ರೀಯ ರೈಫಲ್ಸ್‌ನ ರೈಫಲ್‌ಮ್ಯಾನ್ ಕುಲಭೂಷಣ್ ಮಾಂತಾ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಎಸ್‌ಜಿ ಕಾನ್‌ಸ್ಟೆಬಲ್ ಸೈಫುಲ್ಲಾ ಖಾದ್ರಿ ಈ ಐವರು ಸಿಬ್ಬಂದಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ನೀಡಲಾಗುತ್ತಿದೆ.

2022ರ ಅಕ್ಟೋಬರ್‌ನಲ್ಲಿ ಅರುಣಾಚಲ ಪ್ರದೇಶದ ನಿರ್ಮಿತ ಪ್ರದೇಶ ಮತ್ತು ಯುದ್ಧಸಾಮಗ್ರಿ ಸ್ಥಳದಿಂದ ಅಪಘಾತಕ್ಕೀಡಾದ ಎಎಲ್​ಹೆಚ್​ ಧ್ರುವ ರುದ್ರ ಹೆಲಿಕಾಪ್ಟರ್ ಅನ್ನು ಹಾರಿಸಿ ಅನೇಕ ಅಮೂಲ್ಯ ಜೀವಗಳನ್ನು ಉಳಿಸಿದ್ದಕ್ಕಾಗಿ ಭಾರತೀಯ ಸೇನೆಯ ಮೇಜರ್‌ಗಳಾದ ವಿಕಾಸ್ ಭಂಭು ಮತ್ತು ಮುಸ್ತಫಾ ಬೋಹರಾ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗುತ್ತಿದೆ.

18,300 ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜನೆಯ ಸಮಯದಲ್ಲಿ ಸಹ ಸೈನಿಕರ ಜೀವವನ್ನು ಉಳಿಸಿದ ಮತ್ತು ದೊಡ್ಡ ಅಗ್ನಿ ದುರಂತವನ್ನು ತಡೆಗಟ್ಟಿದ್ದಕ್ಕಾಗಿ ಹವಾಲ್ದಾರ್ ವಿವೇಕ್ ಸಿಂಗ್ ತೋಮರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗುತ್ತಿದೆ. ಅವರು ಈ ವರ್ಷದ ಜನವರಿಯಲ್ಲಿ ಹಿಮದ ಟೆಂಟ್‌ನೊಳಗೆ ಬೆಂಕಿಯನ್ನು ಗಮನಿಸಿ, ಪರಿಸ್ಥಿತಿ ನಿಯಂತ್ರಿಸಲು ವೈಯಕ್ತಿಕ ಸುರಕ್ಷತೆಯನ್ನು ಕಡೆಗಣಿಸಿ ಒಳಗೆ ಪ್ರವೇಶಿಸಿದರು. ಆದರೆ, ಗಾಯಗಳಿಂದಾಗಿ ಘಟನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಅವರ ಶೌರ್ಯ, ಕರ್ತವ್ಯದಲ್ಲಿನ ಅಸಾಧಾರಣ ಶ್ರದ್ಧೆ ಮತ್ತು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳು ಒಂದು 'ರಾಷ್ಟ್ರಪತಿ ತಟರಕ್ಷಕ್' ಪದಕ ಮತ್ತು ಐದು 'ತಟರಕ್ಷಕ್' ಪದಕಗಳನ್ನು ಘೋಷಿಸಿದ್ದಾರೆ. ಈ ಪದಕಗಳನ್ನು 1990ರ ಜನವರಿ 26 ರಿಂದ ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನ ಸಿಬ್ಬಂದಿಗೆ ನೀಡಲಾಗುತ್ತಿದೆ.

ಇದಕ್ಕೂ ಮುನ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ಮಹಿಳಾ ಸಬಲೀಕರಣ, ಭಾರತದ ಜಿ20 ಅಧ್ಯಕ್ಷತೆ ಸೇರಿದಂತೆ ಅನೇಕ ವಿಚಾರಗಳನ್ನು ಮುರ್ಮು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಗೆ ದೇಶದ 1800 ವಿಶೇಷ ಅತಿಥಿಗಳು: ಇಂದು ದೇಶವನ್ನುದ್ದೇಶಿಸಿ ಮುರ್ಮು ಭಾಷಣ

ABOUT THE AUTHOR

...view details