ನವ ದೆಹಲಿ:ಸಂಸತ್ತಿನ ಚಳಿಗಾಲ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ಎಲ್ಲ ವಿರೋಧ ಪಕ್ಷಗಳ ನಾಯಕರು ಲೋಕಸಭೆ ಕಲಾಪ ಬಹಿಷ್ಕರಿಸಿ ಹೊರನಡೆದರು. ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಚಾರಗಳ ಮಂಡನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸೇರಿದಂತೆ ಪ್ರತಿಪಕ್ಷಗಳ ಇನ್ನೂ ಕೆಲ ಪ್ರಸ್ತಾವನೆಗಳನ್ನು ಸ್ವೀಕರಿಸಲು ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ್ದಾರೆ. ತಮಿಳುನಾಡು ರಾಜ್ಯಪಾಲರ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮಾಣಿಕ್ಕಾ ಟ್ಯಾಗೋರ್ ಅವರು ಮುಂಜಾನೆ ನಿಲುವಳಿ ಸೂಚನೆ ಮಂಡಿಸಿದ್ದರು.
ತಮಿಳುನಾಡು ರಾಜ್ಯಪಾಲರು ರಾಜ್ಯ ಸರ್ಕಾರ ಪಾಸು ಮಾಡಿದ 22 ಮಸೂದೆಗಳನ್ನು ಸ್ಥಗಿತವಾಗಿಟ್ಟುಕೊಂಡಿದ್ದಾರೆ ಮತ್ತು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳ ಬಳಿಗೆ ಕಳುಹಿಸುತ್ತಿಲ್ಲ. ನೀಟ್ ವಿನಾಯಿತಿ ಮಸೂದೆ, ತಮಿಳುನಾಡು ಗ್ಯಾಂಬ್ಲಿಂಗ್ ಮತ್ತು ರೆಗ್ಯುಲೇಷನ್ ಆಫ್ ಆನ್ಲೈನ್ ಗೇಮಿಂಗ್ ಆ್ಯಕ್ಟ್, 2022 ಹೀಗೆ ಅನೇಕ ಮಸೂದೆಗಳಿಗೆ ರಾಜ್ಯಪಾಲರು ಅನುಮೋದನೆ ನೀಡುತ್ತಿಲ್ಲ ಹಾಗೂ ಅವುಗಳನ್ನು ರಾಷ್ಟ್ರಪತಿಗಳ ಬಳಿಗೆ ಕಳುಹಿಸುತ್ತಿಲ್ಲ. ರಾಜ್ಯಪಾಲರು ಹೀಗೆ ಮಾಡುವ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮಾಣಿಕ್ಕಾ ಟ್ಯಾಗೋರ್ ಲೋಕಸಭೆಯ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.