ಕರ್ನಾಟಕ

karnataka

ಒಡಿಶಾ ಐಟಿ ದಾಳಿ ಪ್ರಕರಣ: ಮತ್ತೆ 20 ಬ್ಯಾಗ್​ ವಶಕ್ಕೆ, ಜಪ್ತಿ ಹಣ ₹ 290 ಕೋಟಿಗೆ ತಲುಪುವ ಸಾಧ್ಯತೆ

By ETV Bharat Karnataka Team

Published : Dec 9, 2023, 9:49 PM IST

IT raids against Odisha Distillery Group linked to Congress MP Intensify: ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರೊಂದಿಗೆ ನಂಟು ಹೊಂದಿದೆ ಎನ್ನಲಾದ ಒಡಿಶಾದ ಮದ್ಯ ತಯಾರಿಕಾ ಕಂಪನಿ ಮೇಲಿನ ಐಟಿ ದಾಳಿ ಬಗ್ಗೆ ತಿಳಿಯಲೇಬೇಕಾದ ಪ್ರಮುಖಾಂಶಗಳು ಇಲ್ಲಿವೆ.

IT raids against Odisha distillery group linked to Congress MP intensify; 20 more bagloads of cash recovered
ಒಡಿಶಾದಲ್ಲಿ ಐಟಿ ದಾಳಿ ತೀವ್ರ, ಜಪ್ತಿ ಹಣ ₹ 290 ಕೋಟಿಗೆ ತಲುಪುವ ಸಾಧ್ಯತೆ: ತಿಳಿಯಲೇಬೇಕಾದ ಅಂಶಗಳು ಇವು

ಭುವನೇಶ್ವರ (ಒಡಿಶಾ): ಒಡಿಶಾದ ಮದ್ಯ ತಯಾರಿಕಾ ಕಂಪನಿ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಗ್ರೂಪ್​ನ ತಯಾರಕರ ನಿವಾಸದಿಂದ ನಗದು ತುಂಬಿದ್ದ ಮತ್ತೆ 20 ಬ್ಯಾಗ್‌ಗಳನ್ನು ಐಟಿ ವಶಪಡಿಸಿಕೊಂಡಿದೆ. ''ಸಾರ್ವಜನಿಕರಿಂದ ಲೂಟಿ ಮಾಡಿದ ಹಣವನ್ನು ಮರಳಿಸಲಾಗುವುದು'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದು ದಿನದ ನಂತರ ಐಟಿ ದಾಳಿಗಳು ಮುಂದುವರೆದಿವೆ.

ಒಡಿಶಾದ ಸಂಬಲ್‌ಪುರ, ರೂರ್ಕೆಲಾ, ಬಲಂಗೀರ್, ಸುಂದರ್‌ಗಢ್ ಮತ್ತು ಭುವನೇಶ್ವರದಲ್ಲಿ ಐಟಿ ದಾಳಿ ನಡೆಸಲಾಗಿದೆ. ಈ ಕುರಿತು ವರದಿಯನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದ ತಮ್ಮ 'ಎಕ್ಸ್‌' ಖಾತೆಯಲ್ಲಿ ಹಂಚಿಕೊಂಡು, ''ದೇಶವಾಸಿಗಳು ಈ ಕರೆನ್ಸಿ ನೋಟುಗಳ ರಾಶಿ ನೋಡಬೇಕು. ನಂತರ ಅದರ (ಕಾಂಗ್ರೆಸ್) ನಾಯಕರ ಪ್ರಾಮಾಣಿಕತೆಯ ಭಾಷಣಗಳನ್ನು ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯೂ ವಾಪಸ್​ ಬರಲಿದೆ. ಮೋದಿ ಗ್ಯಾರಂಟಿ'' ಎಂದು ಪೋಸ್ಟ್​ ಮಾಡಿದ್ದರು.

ಈ ದೊಡ್ಡ ಐಟಿ ದಾಳಿಯ ಪ್ರಮುಖಾಂಶಗಳು ಇಲ್ಲಿವೆ:

  • ಪಶ್ಚಿಮ ಒಡಿಶಾದ ಅತಿದೊಡ್ಡ ದೇಶೀಯ ಮದ್ಯ ತಯಾರಿಕಾ ಕಂಪನಿಗಳಲ್ಲಿ ಒಂದಾದ ಬಾಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳಿಗೆ ಸಂಬಂಧಿಸಿದ ಉತ್ಪಾದನಾ ಘಟಕಗಳು ಮತ್ತು ಮಧ್ಯಸ್ಥಗಾರರ ಆವರಣಗಳ ಮೇಲೆ ಐಟಿ ದಾಳಿ ಇದಾಗಿದೆ.
  • ಮದ್ಯ ತಯಾರಿಕಾ ಗ್ರೂಪ್ ಮತ್ತು ಅದರ ಸಂಬಂಧಿತ ಘಟಕಗಳ ವಿರುದ್ಧದ ದಾಳಿಯಲ್ಲಿ ಲೆಕ್ಕಕ್ಕೆ ಸಿಗದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದು 290 ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆ ಇದೆ. ಇದು ಒಂದೇ ಕಾರ್ಯಾಚರಣೆಯಲ್ಲಿ ತನಿಖಾ ಸಂಸ್ಥೆಯೊಂದು ಪತ್ತೆ ಹಚ್ಚದ ಅತಿ ಹೆಚ್ಚು' ಕಪ್ಪುಹಣ' ಎಂದೇ ಹೇಳಲಾಗುತ್ತಿದೆ.
  • ಶುಕ್ರವಾರದವರೆಗೆ ಸುಮಾರು 225 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಬಲಂಗೀರ್​ ಜಿಲ್ಲೆಯ ಸುದಾಪಾರ ಪ್ರದೇಶದಲ್ಲಿ ಐಟಿ ಅಧಿಕಾರಿಗಳು ಈ ಸ್ವದೇಶಿ ನಿರ್ಮಿತ ಮದ್ಯ ತಯಾರಕರ ಮನೆಯಿಂದ ಇನ್ನೂ 20 ಬ್ಯಾಗ್​ಗಳ ನಗದನ್ನು ಜಪ್ತಿ ಮಾಡಿದೆ. ಈ ಹಣದ ಮೊತ್ತವನ್ನು ಎಣಿಕೆ ಮಾಡಲಾಗುತ್ತಿದ್ದು, ಇದು ಅಂದಾಜು 50 ಕೋಟಿ ರೂ.ಗಳು ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
  • ಐಟಿ ದಾಳಿಗೆ ಗುರಿಯಾದ ಮದ್ಯ ತಯಾರಿಕ ಕಂಪನಿಯು ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರೊಂದಿಗೆ ಸಂಪರ್ಕ ಹೊಂದಿದೆ ಹಾಗೂ ಅವರ ಕುಟುಂಬ ಸದಸ್ಯರು ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
  • ಶುಕ್ರವಾರದಂದು ಹಣ ತುಂಬಿದ್ದ 156 ಬ್ಯಾಗ್‌ಗಳನ್ನು ಎಣಿಕೆಗಾಗಿ ಬಲಂಗೀರ್​ನಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಗೆ ಐಟಿ ಅಧಿಕಾರಿಗಳು ಸಾಗಿಸಿದ್ದಾರೆ. ಮತ್ತೊಂದೆಡೆ, ಆದಾಯ ತೆರಿಗೆ ಇಲಾಖೆಯ ಡಿಜಿ ಸಂಜಯ್ ಬಹದ್ದೂರ್ ಕಳೆದ ಮೂರು ದಿನಗಳಿಂದ ಭುವನೇಶ್ವರದಲ್ಲೇ ಮೊಕ್ಕಾಂ ಹೂಡಿದ್ದಾರೆ.
  • ಮದ್ಯ ತಯಾರಿಕಾ ಕಂಪನಿ ಮೇಲಿನ ಕಾರ್ಯಾಚರಣೆಯಲ್ಲಿ ಸುಮಾರು 150 ಅಧಿಕಾರಿಗಳು ಭಾಗವಹಿಸಿದ್ದಾರೆ. ಅಲ್ಲದೇ, ಹೈದರಾಬಾದ್‌ನಿಂದ ಇನ್ನೂ 20 ಅಧಿಕಾರಿಗಳ ತಂಡವನ್ನು ಐಟಿ ಇಲಾಖೆ ಕರೆಸಿಕೊಂಡಿದೆ. ದಾಳಿಯ ಸಮಯದಲ್ಲಿ ವಿವಿಧ ಸ್ಥಳಗಳಿಂದ ವಶಪಡಿಸಿಕೊಂಡ ಡಿಜಿಟಲ್ ದಾಖಲೆಗಳ ಪರಿಶೀಲನೆಯಲ್ಲಿ ಈ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
  • ಸಂಬಲ್‌ಪುರ ಮತ್ತು ಬಲಂಗೀರ್​ನಲ್ಲಿರುವ ಎರಡು ಎಸ್‌ಬಿಐ ಶಾಖೆಗಳಲ್ಲೂ ಹಣವನ್ನು ಎಣಿಕೆ ಮಾಡಲಾಗುತ್ತಿದೆ. ಈ ನಗದು ಹಣದಲ್ಲಿ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳು ಇದ್ದು, ಎಣಿಕೆಯು ಕಠಿಣ ಕಾರ್ಯವಾಗಿದೆ. ಹೆಚ್ಚಿನ ಒತ್ತಡದಿಂದ ಯಂತ್ರಗಳಲ್ಲಿ ದೋಷಗಳು ಕಂಡುಬರುತ್ತಿವೆ. ಈ ಕಾರ್ಯ ಚುರುಕುಗೊಳಿಸಲು ವಿವಿಧ ಬ್ಯಾಂಕ್‌ಗಳಿಂದ ನೋಟು ಎಣಿಕೆ ಯಂತ್ರಗಳನ್ನು ತರಿಸಲಾಗಿದೆ ಎನ್ನುತ್ತವೆ ಮೂಲಗಳು.
  • ಐಟಿ ದಾಳಿಯನ್ನು ಒಡಿಶಾದ ಆಡಳಿತಾರೂಢ ಬಿಜೆಡಿ ಪಕ್ಷ ಸ್ವಾಗತಿಸಿದೆ. ಇದೇ ವೇಳೆ, ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣ ಕಾಂಗ್ರೆಸ್ ನಾಯಕರದ್ದು ಎಂದು ಜಾರ್ಖಂಡ್ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮತ್ತೊಂದೆಡೆ, ಈ ಹಣ ಬಿಜೆಪಿ ನಾಯಕರಿಗೆ ಸೇರಿದ್ದು ಎಂದು ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ.

ಇದನ್ನೂ ಓದಿ:ಒಡಿಶಾ ಮದ್ಯ ತಯಾರಿಕಾ ಕಂಪನಿಯಲ್ಲಿ ಮುಂದುವರೆದ ಐಟಿ ಶೋಧ: 46 ಕೋಟಿ ಮೌಲ್ಯದ ನೋಟು ಎಣಿಕೆ ಪೂರ್ಣ

ಇದನ್ನೂ ಓದಿ:ಮದ್ಯ ತಯಾರಿಕಾ ಕಂಪನಿ ಮೇಲೆ ಐಟಿ ದಾಳಿ: ₹300 ಕೋಟಿಗೂ ಅಧಿಕ ನಗದು ಪತ್ತೆ!

ABOUT THE AUTHOR

...view details