ಬೇತುಲ್(ಮಧ್ಯಪ್ರದೇಶ):ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಾಲಾ ಶಿಕ್ಷಕ, ಶಿಕ್ಷಕಿಯರ ಪಾತ್ರ ತುಂಬಾ ಮಹತ್ವದಾಗಿರುತ್ತದೆ. ಅದಕ್ಕೋಸ್ಕರ ಕೆಲ ಟೀಚರ್ಸ್ ತಮ್ಮ ಜೀವನ ಮುಡಿಪಾಗಿಡುತ್ತಾರೆ. ಈಗಾಗಲೇ ಅಂತಹ ಅನೇಕ ಪ್ರಕರಣ ನಮ್ಮ ಕಣ್ಮುಂದೆ ಇವೆ. ಸದ್ಯ ಮಧ್ಯಪ್ರದೇಶದ ಬೇತುಲ್ದಲ್ಲಿ ಶಿಕ್ಷಕಿಯೋರ್ವರು ಅದೇ ರೀತಿಯ ಕೆಲಸ ಮಾಡ್ತಿದ್ದಾರೆ.
ಬೈಂದೆಹಿ ಎಂಬಲ್ಲಿ ಶಿಕ್ಷಕಿಯೋರ್ವರು ಶಾಲಾ ಮಕ್ಕಳ ಪಾಲಿಗೆ ಆಪತ್ಭಾಂದವರಾಗಿ ಕೆಲಸ ಮಾಡ್ತಿದ್ದಾರೆ. ಪ್ರತಿ ದಿನ ಹತ್ತಾರು ಮಕ್ಕಳನ್ನ ಶಾಲೆಗೆ ತಮ್ಮ ಸ್ಕೂಟಿ ಮೇಲೆ ಕರೆದುಕೊಂಡು ಬರುತ್ತಾರೆ. ಜೊತೆಗೆ ಹೋಗುವಾಗ ಅವರನ್ನ ಮನೆಗೆ ಬಿಟ್ಟು ಹೋಗುತ್ತಾರೆ. ಕಳೆದ ಏಳು ವರ್ಷಗಳಿಂದಲೂ ಅರುಣಾ ಮಹಾಲೆ ಎಂಬ ಶಿಕ್ಷಕಿ ಈ ಸೇವೆ ಮಾಡ್ತಿದ್ದಾರೆ.
ಮಧ್ಯಪ್ರದೇಶದ ಬೇತುಲ್ನ ಬುಡಕಟ್ಟು ಪ್ರದೇಶ ಭೈಂದೆಹಿ ಎಂಬಲ್ಲಿ ಸರ್ಕಾರಿ ಶಾಲೆವೊಂದಿದೆ. ಇಲ್ಲಿಗೆ ಹೋಗಲು ಮಕ್ಕಳು ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಳ್ಳಬೇಕು. ಹೀಗಾಗಿ, ವರ್ಷದಿಂದ ವರ್ಷಕ್ಕೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗ್ತಿದ್ದು, ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿತ್ತು. ಈ ವೇಳೆ ಮಹತ್ವದ ನಿರ್ಧಾರ ಕೈಗೊಂಡ ಶಿಕ್ಷಕಿ ಅರುಣಾ, ಸ್ಕೂಟಿ ಖರೀದಿಸಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಮಾಡಲು ಶುರು ಮಾಡ್ತಾರೆ. ಪ್ರತಿನಿತ್ಯ ಮಕ್ಕಳ ಮನೆಗೆ ಹೋಗಿ ಅವರನ್ನು ಕರೆತರುವುದು ಹಾಗೂ ಮರಳಿ ಮನೆಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.