ಕರ್ನಾಟಕ

karnataka

12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರ ನೇಮಕ

By

Published : Feb 12, 2023, 12:30 PM IST

ದೇಶದ ಹನ್ನೆರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರುಗಳನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.

President Murmu appoints new governors
President Murmu appoints new governors

ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರುಗಳನ್ನು ನೇಮಕ ಮಾಡಿದ್ದಾರೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಲಡಾಖ್‌ ರಾಜ್ಯಪಾಲ ರಾಧಾ ಕೃಷ್ಣನ್ ಮಾಥುರ್ ಅವರ ರಾಜೀನಾಮೆಗಳನ್ನು ಅವರು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನು ನೇಮಿಸಲಾದ ರಾಜ್ಯಗಳ ಪೈಕಿ ಮೇಘಾಲಯ ಮತ್ತು ನಾಗಾಲ್ಯಾಂಡ್​ಗಳಲ್ಲಿ ಹತ್ತಿರದಲ್ಲೇ ಚುನಾವಣೆಗಳು ನಡೆಯಲಿರುವುದು ಗಮನಾರ್ಹ.

ಮುರ್ಮು ಅವರು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ಅವರನ್ನು ಅರುಣಾಚಲ ಪ್ರದೇಶದ ಗವರ್ನರ್ ಆಗಿ, ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂನ ರಾಜ್ಯಪಾಲರಾಗಿ, ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ.ರಾಧಾಕೃಷ್ಣನ್, ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಶಿವ ಪ್ರತಾಪ್ ಶುಕ್ಲಾ, ಅಸ್ಸಾಂನ ರಾಜ್ಯಪಾಲರಾಗಿ ಗುಲಾಬ್ ಚಂದ್ ಕಟಾರಿಯಾ ಮತ್ತು ನ್ಯಾಯಮೂರ್ತಿ (ನಿವೃತ್ತ) ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಿದ್ದಾರೆ.

ನ್ಯಾ.ಅಬ್ದುಲ್ ನಜೀರ್ ಆಂಧ್ರ ಗವರ್ನರ್‌: ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಅಯೋಧ್ಯಾ ವಿವಾದದ ಕುರಿತು ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ಪೀಠದ ಸದಸ್ಯರಲ್ಲೊಬ್ಬರು ಎಂಬುದು ಗಮನಾರ್ಹ. ಅವರು 'ತ್ರಿವಳಿ ತಲಾಖ್' ವಿಚಾರಣೆಯಲ್ಲಿ ಕೂಡ ಐವರು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು. ಆದರೆ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರೊಂದಿಗೆ ಅಲ್ಪಮತದ ತೀರ್ಪು ನೀಡಿದ್ದರು.

ಹೊಸ ನೇಮಕಾತಿಗಳನ್ನು ಮಾಡುವುದರ ಜೊತೆಗೆ ಮುರ್ಮು ಏಳು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದ್ದಾರೆ. ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಛತ್ತೀಸ್‌ಗಢ ರಾಜ್ಯಪಾಲರಾಗಿದ್ದ ಶ್ರೀಮತಿ ಅನುಸೂಯಾ ಉಯಿಕ್ಯೆ ಅವರನ್ನು ಮಣಿಪುರದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ. ಮಣಿಪುರ ರಾಜ್ಯಪಾಲ ಎಲ್​.ಎ.ಗಣೇಶನ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಈಗ ಮೇಘಾಲಯದ ರಾಜ್ಯಪಾಲರಾಗಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಬಿಹಾರದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ, ಜಾರ್ಖಂಡ್ ಗವರ್ನರ್ ರಮೇಶ್ ಬೈಸ್ ಈಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ. ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗೇಡಿಯರ್ ಬಿ ಡಿ ಮಿಶ್ರಾ (ನಿವೃತ್ತ) ಅವರನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.

ಮೇಲಿನ ನೇಮಕಾತಿಗಳು ಅವರು ತಮ್ಮ ತಮ್ಮ ಕಚೇರಿಗಳ ಪ್ರಭಾರವನ್ನು ವಹಿಸಿಕೊಳ್ಳುವ ದಿನಾಂಕಗಳಿಂದ ಜಾರಿಗೆ ಬರುತ್ತವೆ ಎಂದು ರಾಷ್ಟ್ರಪತಿಗಳ ಕಚೇರಿಯ ಪ್ರಕಟಣೆ ಹೇಳಿದೆ. ಮಹಾರಾಷ್ಟ್ರದ ನೂತನ ರಾಜ್ಯಪಾಲರಾದ ಬೈಸ್ ಅವರು 1980 ರಲ್ಲಿ ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು ಮತ್ತು ರಾಯ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಏಳು ಬಾರಿ ಗೆದ್ದು ಪ್ರಭಾವಿ ನಾಯಕ ಎಂದು ಖ್ಯಾತಿ ಗಳಿಸಿದರು. ಅವರು 2019 ರಲ್ಲಿ ತ್ರಿಪುರಾದ ರಾಜ್ಯಪಾಲರಾಗಿ ಆಯ್ಕೆಯಾಗುವ ಮುನ್ನ ಪಕ್ಷದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.

ಬೈಸ್ ಅವರು ಜುಲೈ 2021 ರಲ್ಲಿ ರಾಜ್ಯಪಾಲರಾಗಿ ರಾಂಚಿಯ ರಾಜಭವನಕ್ಕೆ ಪಾದಾರ್ಪಣೆ ಮಾಡಿದರು. ಶಾಸಕರಾಗಿದ್ದ ರಾಜಕೀಯ ಅವಧಿಯಲ್ಲಿ ಅವರು ಸೋಲಿಸಿದ ನಾಯಕರಲ್ಲಿ ಕಾಂಗ್ರೆಸ್​ನ ಪ್ರಭಾವಿ ಮುಖಂಡ ವಿ ಸಿ ಶುಕ್ಲಾ ಮತ್ತು ಪ್ರಸ್ತುತ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದ್ದಾರೆ.

ಇದನ್ನೂ ಓದಿ: ಆಪರೇಷನ್ ದೋಸ್ತ್: ಭಾರತದಿಂದ ಪರಿಹಾರ ಸಾಮಗ್ರಿ ಹೊತ್ತ 7ನೇ ವಿಮಾನ ಟರ್ಕಿಗೆ ರವಾನೆ

ABOUT THE AUTHOR

...view details