ಮಂಗಳೂರು: ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಆರಂಭಿಕ ಮಳೆಗೆ ಜೀವವೊಂದು ಬಲಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡಿನಲ್ಲಿ ನೀರು ತುಂಬಿ ಹರಿದಿದೆ. ರಸ್ತೆಯ ಮೇಲೂ ನೀರು ಹರಿಯುತ್ತಿತ್ತು. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ. ತೋಡಿನಲ್ಲಿ ಭರ್ತಿ ನೀರು ಹರಿಯುತ್ತಿದ್ದು ಆಟೋ ಚಾಲಕ, ಸ್ಥಳೀಯ ನಿವಾಸಿ ದೀಪಕ್ (40) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಅನಾಹುತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮ.ನ.ಪಾ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯ, ಸಾವಿನಲ್ಲೂ ಒಂದಾದ ದಂಪತಿ