ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಸಿದ್ಧ 'ತೂಟೆದಾರ' ಸೇವೆ: ವಿಡಿಯೋ ನೋಡಿ - Kateel Thootedhara Seva
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Apr 21, 2024, 1:31 PM IST
![ETV Thumbnail thumbnail](https://etvbharatimages.akamaized.net/etvbharat/prod-images/21-04-2024/640-480-21276827-thumbnail-16x9-am.jpg)
ದಕ್ಷಿಣ ಕನ್ನಡ: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ಆಯೋಜಿಸುವ ಪ್ರಸಿದ್ಧ ತೂಟೆದಾರ ಸೇವೆ ಕಳೆದ ರಾತ್ರಿ ನಡೆಯಿತು. ದೇವಾಲಯದಲ್ಲಿ ನಡೆಯುವ ಉತ್ಸವದ ಮುಖ್ಯ ಆಕರ್ಷಣೆಯೇ ಈ ತೂಟೆದಾರ ಸೇವೆ. ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಗಳ ಜನರ ನಡುವೆ ನಡೆಯುವ ಬೆಂಕಿಯ ಆಟವಾದ ತೂಟೆದಾರ ಸೇವೆ ಸಾವಿರಾರು ಜನರನ್ನು ಅಚ್ಚರಿಗೊಳಿಸುತ್ತದೆ.
ಕಟೀಲು ದೇಗುಲದಲ್ಲಿ ಕಳೆದ ನೂರಾರು ವರ್ಷಗಳಿಂದ ಬೆಂಕಿಯ ಆಟ ನಡೆದುಕೊಂಡು ಬರುತ್ತಿದೆ. ಹೀಗಿದ್ದರೂ ಇದುವರೆಗೂ ಯಾವುದೇ ಬೆಂಕಿ ಅನಾಹುತ, ಭಕ್ತಾಧಿಗಳು ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರ ಪುಣ್ಯಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣಕಾಲದಿಂದಲೂ ಮಹತ್ವ ಹೊಂದಿದೆ. ಪ್ರತಿ ವರ್ಷ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವ ಅಂಗವಾಗಿ ಅದ್ಧೂರಿ ರಥೋತ್ಸವದಲ್ಲಿ ಭಾಗಿಯಾಗಲು ಊರ ಪರವೂರ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕದ ಉತ್ಸವ, ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರ ತೂಟೆದಾರ (ತೆಂಗಿನ ಗರಿಗಳನ್ನು ಒಟ್ಟಗೂಡಿಸಿ ಕಟ್ಟಿ ಬೆಂಕಿ ಉರಿಸಿ ಪರಸ್ಪರ ಎಸೆಯುವ ಹರಕೆ ಸೇವೆ) ಆರಂಭವಾದ ನಂತರ ರಥಬೀದಿಯಲ್ಲಿ ತೂಟೆದಾರ ನಡೆಯುತ್ತದೆ. ಅದಾದ ಬಳಿಕ ಓಕುಳಿ ಸ್ನಾನ ಹಾಗು ಪ್ರಸಾದ ವಿತರಣೆ ನಡೆಯುತ್ತದೆ. ('ತೂಟೆದಾರ' ಎಂಬುವುದು ತುಳು ಪದ)
ಝಳಕದ ಬಲಿ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ, ಚಿನ್ನದ ರಥೋತ್ಸವ, ಧ್ವಜಾವರೋಹಣ, ಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.
ಇದನ್ನೂ ಓದಿ: ಬೆಂಗಳೂರು: ಸಂಪಂಗಿ ಕೆರೆಯಂಗಳದಲ್ಲಿ ಇಂದು ರಾತ್ರಿ ಹಸಿ ಕರಗ ಮಹೋತ್ಸವ - Bengaluru Karaga