ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಬೇಟೆ ನಡೆಸುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಭೆ, ಸಮಾರಂಭ, ರ್ಯಾಲಿಗಳ ಮೂಲಕ ಮತಯಾಚಿಸುತ್ತಿದ್ದಾರೆ. ಆದರೆ, ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಜನರಿಂದ ಪ್ರತಿಭಟನೆಯ ಬಿಸಿ ತಟ್ಟಿತು.
ವನಹಳ್ಳಿ ಗ್ರಾಮದಲ್ಲಿ ಬಹಿರಂಗವಾಗಿ ಭಾಷಣ ಮಾಡುತ್ತಿದ್ದಾಗ ಕೆಲ ಯುವಕರು ಭಾಷಣಕ್ಕೆ ಅಡ್ಡಿ ಉಂಟುಮಾಡಿದರು. ಸುದೀರ್ಘ ಕಾಲ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿ ನಮ್ಮ ಗ್ರಾಮಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರಹ್ಲಾದ್ ಜೋಶಿ ಉತ್ತರಿಸಿ, ''ಜಲಜೀವನ್ ಮಿಷನ್ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದೇವೆ'' ಎಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಯುವಕರು, ನಿಮ್ಮ ಅನುದಾನ ಎಲ್ಲಿ ಬಂದಿದೆ? ಯಾರ ಅಭಿವೃದ್ಧಿ ಮಾಡಿದ್ದೀರಿ? ಎಂದು ಹೇಳಿ ಕೇಂದ್ರ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರ ಸಚಿವರು ತಮ್ಮ ಭಾಷಣ ಮುಂದುವರೆಸಿದರು. ಆದಾಗ್ಯೂ ಪ್ರಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದವರನ್ನು ಬಿಜೆಪಿ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಎಳೆದುಕೊಂಡು ಸಮಾಧಾನಪಡಿಸಲು ಮುಂದಾದರು. ಇದರಿಂದ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪ್ರಲ್ಹಾದ್ ಜೋಶಿ ಪ್ರತಿಭಟನಾಕಾರರಿಗೆ ಉತ್ತರ ನೀಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 'ರಾಜ್ಯಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ, ನಾವು ಭಿಕ್ಷೆ ಕೇಳುತ್ತಿಲ್ಲ': ಸಿಎಂ ಸಿದ್ದರಾಮಯ್ಯ - Congress Protest