ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಇಂದು ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ 51,63,15,994 ರೂ.ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.
ಚರಾಸ್ತಿ: ನಗದು 90 ಸಾವಿರ ರೂ., ಬ್ಯಾಂಕ್ಗಳಲ್ಲಿ ಹೂಡಿಕೆ, ಹಂಪಿ ಹೆರಿಟೇಜ್ ವೈನ್ ಯಾರ್ಡ್ಗೆ 1,11,80,805 ರೂ, ಜಿಗಜಿಣಗಿ ಜಗತಾಪ ಪ್ರೈ.ಲಿ.ಗೆ 8,47,08,654 ರೂ. ಹಾಗೂ 10,50,16,960 ರೂ. ಹೂಡಿಕೆ, ಶೇರ್ ಮಾರುಕಟ್ಟೆ ಇತರೆ ಸಂಸ್ಥೆಗಳಲ್ಲಿ ಹೂಡಿಕೆ ಹಾಗೂ 13 ಲಕ್ಷ ರೂ.ಮೌಲ್ಯದ 1 ಕಾರು, 6 ಲಕ್ಷ ರೂ.ಮೌಲ್ಯದ 10 ತೊಲ ಬಂಗಾರ, 1,16,200 ರೂ.ಬೆಲೆಯ 3 ಕೆಜಿ ಬೆಳ್ಳಿ ಸೇರಿದಂತೆ 24,58,13,690 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಸ್ಥಿರಾಸ್ತಿ: ಬೆಂಗಳೂರಿನಲ್ಲಿ ಕೃಷಿ ಭೂಮಿ, ತವರು ಜಿಲ್ಲೆಯಲ್ಲಿ ಕೃಷಿ ಭೂಮಿ, ಭೂತನಾಳದಲ್ಲಿ ಕೃಷಿಯೇತರ ಭೂಮಿ, ಅಭಿವೃದ್ಧಿ ನಿರ್ಮಾಣಕ್ಕೆ ವಿನಿಯೋಗ, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್, ವಸತಿ ಕಟ್ಟಡ ಸೇರಿದಂತೆ 27,05,02,304 ರೂ.ಮೌಲ್ಯದ ಸ್ತಿರಾಸ್ತಿ ಹೊಂದಿದ್ದಾರೆ. ಹಾಗೆಯೇ 6,81,16,765 ರೂ. ಸಾಲ ಹೊಂದಿದ್ದಾರೆ. ಕುಟುಂಬ ಸದಸ್ಯರ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ.
ನಾಮಪತ್ರ ಸಲ್ಲಿಕೆಗೂ ಮುನ್ನ ಜಿಗಜಿಣಗಿ ಶ್ರೀ ಸಿದ್ದೇಶ್ವರ ದೇವಸ್ಥಾನ ಮತ್ತು ಶ್ರೀ ಮಧುಲಾ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಮುಖಂಡರಾದ ಸಿ.ಟಿ.ರವಿ, ಉಮೇಶ ಜಾಧವ್, ಹಾಲಪ್ಪ ಆಚಾರ್, ನಾರಯಣಸಾ ಭಾಂಡಗೆ, ಎ.ಎಸ್.ಪಾಟೀಲ್ನಡಹಳ್ಳಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ಕೂಚಬಾಳ ಅಲ್ಲದೇ ಇನ್ನಿತರ ಮುಖಂಡರುಗಳು ಮತ್ತು ಜೆಡಿಎಸ್ಮೈತ್ರಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಮುಖಂಡರುಗಳು, ಶಾಸಕ ರಾಜೂಗೌಡ ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರುಗಳು ಸಾಥ್ ನೀಡಿದರು.
ನಂತರ ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಬಿಜೆಪಿ ಚುನಾವಣಾ ಕಚೇರಿಯಿಂದ ಗಾಂಧಿವೃತ್ತದ ಮೂಲಕ ಬೃಹತ್ ಮೆರವಣಿಗೆಯನ್ನು ಬಿಜೆಪಿ ಆಯೋಜಿಸಿತ್ತು. ತೆರೆದ ವಾಹನದಲ್ಲಿ ಮುಖಂಡರುಗಳು ಸಾಗಿದರೆ, ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ರಮೇಶ ಜಿಗಜಿಣಗಿ ಹಿತೈಷಿಗಳು ಸಾಗಿದರಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ದರ್ಬಾರ್ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು. ಈ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರದ ಭಾಷಣ ಮಾಡಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರನ್ನು ಗೆಲ್ಲಿಸಲು ಕರೆ ನೀಡಿದರು.
ಪ್ರಣಾಳಿಕೆ ಬಿಡುಗಡೆ: ಈ ಸಂದರ್ಭದಲ್ಲಿ ಸಿ.ಟಿ.ರವಿ ಬಿಜೆಪಿ ಪಕ್ಷದ ಸಂಕಲ್ಪ ಪತ್ರ ಪ್ರಣಾಳಿಕೆಯನ್ನು ಇನ್ನಿತರ ಹಾಜರಿದ್ದ ಮುಖಂಡರೊಂದಿಗೆ ಬಿಡುಗಡೆ ಮಾಡಿದರು. ತದನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳನ್ನು, ಪಕ್ಷದ ನೀತಿಯನ್ನು ಮತ್ತು ವಿಕಸಿತ ಭಾರತಕ್ಕೆ ಮತ್ತೊಮ್ಮೆ ಮೋದಿ ಎನ್ನುವ ಮೂಲಕ, ದೇಶಕ್ಕೆ ಮೋದಿ ವಿಜಯಪುರಕ್ಕೆ ಜಿಗಜಿಣಗಿ ಗೆಲ್ಲಿಸುವಂತೆ ಕರೆ ನೀಡಿದರು.
ಇದನ್ನೂ ಓದಿ: ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಾಳೆ ಬಿಜೆಪಿ ಸೇರ್ಪಡೆ - Akhanda Srinivasa Murthy