ಬೆಂಗಳೂರು: ಹೊರಗಿನ ಅಭ್ಯರ್ಥಿ, ಒಳಗಿನ ಅಭ್ಯರ್ಥಿ ಎನ್ನುವ ವಿಷಯ ನಿನ್ನೆಗೇ ಮುಗಿದು ಹೋಗಿದೆ. ನಾಳೆಯಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕೆಲಸ ಆರಂಭಿಸುತ್ತೇನೆ. ತುಮಕೂರನ್ನು ವಾರಾಣಸಿ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದ್ದಾರೆ.
ತುಮಕೂರು ಟಿಕೆಟ್ ಪ್ರಕಟಗೊಂಡ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯಲ್ಲಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸ ಧವಳಗಿರಿಗೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ, ಸಮಾಲೋಚನೆ ನಡೆಸಿದರು. ರಾಜಕೀಯ ವಿಚಾರದ ಕುರಿತು ಚರ್ಚಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದ ಸೋಮಣ್ಣ, ಇದೀಗ ಲೋಕಸಭಾ ಟಿಕೆಟ್ ಹಿನ್ನೆಲೆಯಲ್ಲಿ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದು ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
![v-somanna](https://etvbharatimages.akamaized.net/etvbharat/prod-images/14-03-2024/kn-tmk-03-somanna-script-ka10037_14032024134639_1403f_1710404199_928.jpg)
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ''ಲೋಕಸಭಾ ಚುನಾವಣೆಯ ಟಿಕೆಟ್ ನಿರೀಕ್ಷೆ ಅಂತಲ್ಲ. ವಿಧಾನಸಭಾ ಚುನಾವಣೆಯಲ್ಲಿ ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಎರಡು ಕಡೆ ಸ್ಪರ್ಧಿಸಿ ಸೋತಿದ್ದೆ. ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸಗಾರ ಮನೆಯಲ್ಲಿ ಕೂರೋದು ಬೇಡ ಅಂತ ಟಿಕೆಟ್ ನೀಡಿದೆ. ತುಮಕೂರು ನನಗೆ ಚಿರಪರಿಚಿತ, ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರ ಶ್ರೀಗಳು ಎಲ್ಲರ ಆಶೀರ್ವಾದ ಇದೆ. ರಾಷ್ಟ್ರದಲ್ಲಿ ಒಂದೇ ವಾರಾಣಸಿ ಇರೋದು. ತುಮಕೂರು ಕೂಡ ಒಂದು ವಾರಾಣಸಿ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರೆಲ್ಲರೂ ನನ್ನನ್ನು ತುಮಕೂರಿಗೆ ಕಳಿಸಿದ್ದಾರೆ. ನಾಳೆಯಿಂದ ಕೆಲಸ ಪ್ರಾರಂಭ ಮಾಡುತ್ತೇನೆ'' ಎಂದರು.
![v-somanna](https://etvbharatimages.akamaized.net/etvbharat/prod-images/14-03-2024/kn-tmk-03-somanna-script-ka10037_14032024134639_1403f_1710404199_83.jpg)
''ಮೋದಿ ಅವರು ಪ್ರಧಾನಿ ಆಗೋದು ಸತ್ಯ. ಮೋದಿ ಕೈ ಬಲಪಡಿಸಲು ನಾವು 28 ಕ್ಷೇತ್ರಗಳನ್ನೂ ಗೆಲ್ಲಬೇಕು. ಹೊರಗೆ, ಒಳಗೆ ಎಂಬುದು ನಿನ್ನೆಗೆ ಆಗೋಯ್ತು. ಎಲ್ಲರೂ ಒಳಗಿನವರೆ. 32 ಜಿಲ್ಲೆಗಳೂ ನಮ್ಮದೇ. ಮಾಧುಸ್ವಾಮಿ ಅವರ ವೈಯಕ್ತಿಕ ಹೇಳಿಕೆ ಸಹಜ. ನಾಳೆ ಅವರನ್ನು ಭೇಟಿ ಮಾಡುತ್ತೇನೆ. ಮಠ, ಗುರುಕುಲ ಎಲ್ಲ ಕಡೆ ಸಂಜೆವರೆಗೂ ಭೇಟಿ ನೀಡುತ್ತೇನೆ. ನಂತರ ಮಾಧುಸ್ವಾಮಿ ಭೇಟಿಯಾಗುತ್ತೇನೆ. ಪ್ರಧಾನಿಯಾಗಿ ಮೋದಿ ಮೂರನೇ ಬಾರಿ ಆಯ್ಕೆಯಾಗಬೇಕು ಎನ್ನುವುದೇ ನನ್ನ ಗುರಿ'' ಎಂದು ತಿಳಿಸಿದರು.
![v-somanna](https://etvbharatimages.akamaized.net/etvbharat/prod-images/14-03-2024/kn-tmk-03-somanna-script-ka10037_14032024134639_1403f_1710404199_430.jpg)
ಸಿದ್ದಗಂಗಾ ಸ್ವಾಮೀಜಿ ಜೊತೆ ಸೋಮಣ್ಣ ಮಾತುಕತೆ: ಬಳಿಕ ಸೋಮಣ್ಣ ತುಮಕೂರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲದೇ, ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಕೂಡ ಇದ್ದರು.
ಇನ್ನೊಂದೆಡೆ ಲೋಕಸಭೆ ಮಾಜಿ ಉಪಸಭಾಪತಿ ದಿ.ಮಲ್ಲಿಕಾರ್ಜುನಯ್ಯ ಅವರು ಶಿವೈಕ್ಯರಾಗಿ ದಶಮಾನದ ಹಿನ್ನೆಲೆಯಲ್ಲಿ ಅವರ ಸ್ವಗೃಹಕ್ಕೆ ತೆರಳಿ ನಮನ ಸಲ್ಲಿಸಿದ ಸೋಮಣ್ಣ, ಮಲ್ಲಿಕಾರ್ಜುನ ಅವರ ಪತ್ನಿ ಜಯಮ್ಮ ಮಲ್ಲಿಕಾರ್ಜುನಯ್ಯನವರ ಆಶೀರ್ವಾದ ಪಡೆದರು.
ಇದನ್ನೂ ಓದಿ: ಜೆಡಿಎಸ್ ಸರಿಯಿಲ್ಲವೆಂದು ದೇವೇಗೌಡರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ: ಸಂಸದ ಡಿ ಕೆ ಸುರೇಶ್