ETV Bharat / state

ರಾಜ್ಯದ ಭೂಭಾಗವನ್ನು ಬೇರೆ ರಾಜ್ಯಕ್ಕೆ ಕೊಡುವ ವಿಷಯವೂ ಗ್ಯಾರಂಟಿ ಪ್ರಣಾಳಿಕೆಯಲ್ಲಿ ಸೇರಿದೆಯಾ: ಕಾಂಗ್ರೆಸ್​ಗೆ ಸುನೀಲ್ ಕುಮಾರ್ ಪ್ರಶ್ನೆ - Sunil Kumar statement

author img

By ETV Bharat Karnataka Team

Published : Apr 17, 2024, 4:28 PM IST

ಕಾಂಗ್ರೆಸ್​ಗೆ ಸುನೀಲ್ ಕುಮಾರ್ ಪ್ರಶ್ನೆ
ಕಾಂಗ್ರೆಸ್​ಗೆ ಸುನೀಲ್ ಕುಮಾರ್ ಪ್ರಶ್ನೆ

ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕ ಸುನೀಲ್ ಕುಮಾರ್ ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕರ್ನಾಟಕದ ಕೆಲ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಬೇಕು. ರಾಜ್ಯದ ಭೂಭಾಗವನ್ನು ಬೇರೆ ರಾಜ್ಯಕ್ಕೆ ಕೊಡುವ ಹಿಡನ್ ಅಜೆಂಡಾ ನಿಮ್ಮ ಗ್ಯಾರಂಟಿ ಪ್ರಣಾಳಿಕೆಯಲ್ಲಿಯೇ ಇದೆಯಾ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್​ನ ಉತ್ತರಕನ್ನಡ ಅಭ್ಯರ್ಥಿ ಮಾತನಾಡುವಾಗ ರಾಜ್ಯದ ಕೆಲವು ಭಾಗಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಖಂಡನೀಯ, ಕಾಂಗ್ರೆಸ್ ಅಭ್ಯರ್ಥಿಯ ನಿಲುವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು ಎಂದರು.

ರಾಜ್ಯದ ಭಾಗಗಳನ್ನು ಬೇರೆ ರಾಜ್ಯಕ್ಕೆ ಸೇರ್ಪಡೆಗೊಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆಯಾ? ನಿಮ್ಮ ಅಜೆಂಡಾದಲ್ಲಿ ಇದು ಇದೆಯಾ?, ನೀವು ಹೇಳಬೇಕಾಗಿದ್ದನ್ನು ನಿಮ್ಮ ಉತ್ತರಕನ್ನಡ ಅಭ್ಯರ್ಥಿ ಮೂಲಕ ಹೇಳುತ್ತಿದ್ದೀರಾ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಈ ಹಿಂದೆಯೂ ಪಾಕ್​ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದಾಗ ಸಿಎಂ ಮೌನವಾಗಿದ್ದರು. ಮೇಕೆದಾಟು ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಕಾಂಗ್ರೆಸ್​ನ ಮಿತ್ರಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಹೇಳಿದಾಗಲೂ ಸಿಎಂ ಸೇರಿದಂತೆ ಕಾಂಗ್ರೆಸ್ ಪಕ್ಷ ಸಹ ಮೌನವಾಗಿತ್ತು ಎಂದು ಆರೋಪಿಸಿದರು.

ತಮಿಳುನಾಡಿಗೆ ನೀರು ಬಿಟ್ಟಾಗಲೂ ಇವರೆಲ್ಲಾ ಮೌನವಾಗಿದ್ದರು, ಇಂದು ರಾಜ್ಯದ ಭೂಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯೇ ಹೇಳಿದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿಲ್ಲ ಎಂದರೆ ಯಾವ ಹಿಡನ್ ಅಜೆಂಡಾ ಇಲ್ಲಿ ಕೆಲಸ ಮಾಡುತ್ತಿದೆ? ನಿಮ್ಮ ಗ್ಯಾರಂಟಿಗಳಲ್ಲಿ ಇದೂ ಇದೆಯಾ? ರಾಜ್ಯದ ಭೂಭಾಗವನ್ನ ಬೇರೆ ರಾಜ್ಯಕ್ಕೆ ಕೊಡುವ ವಿಷಯವೂ ಗ್ಯಾರಂಟಿ ಪ್ರಣಾಳಿಕೆಯಲ್ಲಿ ಸೇರಿದೆಯಾ? ಸಿಎಂ ಕೂಡಲೇ ಈ ಕುರಿತು ವಿವರವಾದ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಜನವಿರೋಧಿಯಾದ ಭಾವನೆ ಕಾಂಗ್ರೆಸ್​ನಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ರೌಡಿಸಂ ಮೂಲಕ ಚುನಾವಣೆ ಎದುರಿಸಲು ಕಾಂಗ್ರೆಸ್ ಹೊರಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರನ್ನು ಬೆದರಿಸುತ್ತಿರುವುದು ಅವರ ಹತಾಶೆಯ ಮನಸ್ಥಿತಿಗೆ ಸಾಕ್ಷಿಯಾಗಿದೆ. ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸು ಹಾಕಿ ಬೆದರಿಸುವ ತಂತ್ರ ಮಾಡುತ್ತಿದೆ. ನಾವು ಯೋಜನೆಗಳ ಮೂಲಕ ಜನರ ಬಳಿ ಹೋದರೆ, ಕಾಂಗ್ರೆಸ್ ಮೊಕದ್ದಮೆ ಮೂಲಕ ಜನರನ್ನು ಎದುರಿಸಲು ಹೋಗುತ್ತಿದೆ ಎಂದು ಸುನಿಲ್​ ಕುಮಾರ್​ ಆರೋಪಿಸಿದರು.

ನಾವು ಜನರ ಬಳಿ ಹೋಗಲು ಪ್ರಚಾರ ಮಾಡುತ್ತಿದ್ದರೆ ಕಾಂಗ್ರೆಸ್ ರೌಡಿಸಂ ಮೂಲಕ ಪ್ರಚಾರಕ್ಕೆ ಹೋಗುತ್ತಿದೆ, ಕಾಂಗ್ರೆಸ್ ನಿಲುವು ಮತ್ತು ಯೋಜನೆಗಳನ್ನು ಜನ ಸ್ವೀಕಾರ ಮಾಡುತ್ತಿಲ್ಲ ಎಂದಾಗ ರೌಡಿಸಂ ಕಡೆ ಕಾಂಗ್ರೆಸ್ ತೆರಳುತ್ತಿದೆ ಎಂದು ಅವರು ದೂರಿದರು. ಕಾಂಗ್ರೆಸ್ ಕರ್ನಾಟಕವನ್ನು ಯಾವ ದಿಕ್ಕಿನತ್ತ ತೆಗೆದುಕೊಂಡು ಹೋಗುತ್ತಿದೆ, ಕಾಂಗ್ರೆಸ್ ಈ ಚುನಾವಣೆಯನ್ನು ರೌಡಿಸಂ ಮೂಲಕ ಮಾಡಲು ಹೊರಟಿದೆ ಹಾಗಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಗಮನಿಸಿ ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡಬೇಕು, ಮುಕ್ತ ಮತದಾನಕ್ಕಾಗಿ ನಿರ್ಭೀತ ವಾತಾವರಣ ಸೃಷ್ಟಿಸಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದರು.

ರೌಡಿಸಂ ವರ್ತನೆ ತೋರುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಪ್ರಭಾವ ಬೀರುವ ಮತ್ತು ಬೇರೆ ಬೇರೆ ರೀತಿಯ ಬೆದರಿಕೆ ಒಡ್ಡುತ್ತಿರುವ ಪ್ರದೇಶಗಳ ವಿವರದೊಂದಿಗೆ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದೇವೆ. ಇಂತಹ ಕ್ಷೇತ್ರಗಳಲ್ಲಿ ಅರೆಸೇನಾಪಡೆ ನಿಯೋಜನೆ ಮತ್ತು ಹೆಚ್ಚುವರಿ ಭದ್ರತೆ ಕಲ್ಪಿಸಲು ಮನವಿ ಸಲ್ಲಿಸಲಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿಯವರಿಗೆ ಗ್ಯಾರಂಟಿ ಮುಟ್ಟಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ - DK Shivakumar Slams BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.