ETV Bharat / state

ಮುಜರಾಯಿ ದೇವಾಲಯದ ಅರ್ಚಕರು, ನೌಕರರ ಮಕ್ಕಳಿಗೆ ಜೂನ್ ಬಳಿಕ ವಿದ್ಯಾರ್ಥಿವೇತನ ಜಾರಿ: ಸಚಿವ ರಾಮಲಿಂಗಾರೆಡ್ಡಿ

author img

By ETV Bharat Karnataka Team

Published : Feb 19, 2024, 9:46 PM IST

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Eಮುಜರಾಯಿ ವ್ಯಾಪ್ತಿಯ ದೇವಾಲಯದ ಅರ್ಚಕರ ಮಕ್ಕಳಿಗೆ ಜೂನ್ ಬಳಿಕ ವಿದ್ಯಾರ್ಥಿವೇತನ ಜಾರಿ: ಸಚಿವ ರಾಮಲಿಂಗಾರೆಡ್ಡಿ
ಮುಜರಾಯಿ ವ್ಯಾಪ್ತಿಯ ದೇವಾಲಯದ ಅರ್ಚಕರ ಮಕ್ಕಳಿಗೆ ಜೂನ್ ಬಳಿಕ ವಿದ್ಯಾರ್ಥಿವೇತನ ಜಾರಿ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ಹಾಗೂ ನೌಕರರ ಮಕ್ಕಳಿಗೆ ಜೂನ್ ಬಳಿಕ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ನೋಂದಾಯಿತ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷದ ಸದಸ್ಯ ಪ್ರತಾಪ್ ಸಿಂಹನಾಯಕ್ ಸರ್ಕಾರದ ಗಮನ ಸೆಳೆದ ಸೂಚನೆ ವೇಳೆ ಸಚಿವರು ಉತ್ತರಿಸಿದರು.

ಅರ್ಚಕ, ನೌಕರರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದಲೇ ನೀಡಲು ಸರ್ಕಾರ ಮಂಜೂರಾತಿ ನೀಡಿದೆ. ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಜಮಾ ಮಾಡಿ (ಡಿಬಿಟಿ) ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸಿ ವರ್ಗದ ಅರ್ಚಕ/ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ (ಒಟ್ಟು ವರ್ಷದಲ್ಲಿ 2,200 ಜನರಿಗೆ) ಭಾರತ್ ಗೌರವ್ ಕಾಶಿ ಯಾತ್ರೆ ಹಾಗೂ ದಕ್ಷಿಣ ಭಾರತ ಯಾತ್ರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಿ ವರ್ಗದ ಅನುವಂಶಿಕ ಅರ್ಚಕರಿಗೆ ವಯಸ್ಸಾಗಿದ್ದು ಹಾಗೂ ಅನಾರೋಗ್ಯದ ನಿಮಿತ್ತ ಪೂಜೆ ಮಾಡಲು ಅಶಕ್ತರಾಗಿದ್ದರೆ ಅವರ ಅನುವಂಶಿಕ ಹಕ್ಕು (ನೇಮಕಾತಿ) ವರ್ಗಾಯಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ಸೇವೆಯಲ್ಲಿರುವಾಗ ಮರಣ ಹೊಂದಿದ ನೌಕರರಿಗೆ ರೂ. 2 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಎ ವರ್ಗದಡಿ 205, ಬಿ ವರ್ಗದಡಿ 193 ಹಾಗೂ ಸಿ ವರ್ಗದಡಿ 34, 165 ಪ್ರವರ್ಗದ ದೇವಾಲಯಗಳಿವೆ. ದೇವಸ್ಥಾನಗಳಿಂದ ಬರುವ ಹಣವನ್ನು ಆಯಾ ದೇವಾಲಯಗಳಿಗೆ ವಿನಿಯೋಗಿಸಲಾಗುತ್ತಿದೆ. ಹೆಚ್ಚುವರಿ ಹಣವನ್ನು ಆಯಾ ದೇವಾಲಯದ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು.

ಸದರಿ ದೇವಾಲಯಗಳಲ್ಲಿ ಸಂಗ್ರಹವಾಗುವ ಆದಾಯವನ್ನು ಆಯಾ ದೇವಾಲಯಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇದನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ 1997ರ ಕಾಯ್ದೆಯ ಕಲಂ 36(1)ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಆಯವ್ಯಯದನ್ವಯ ಆಯಾಯ ದೇವಾಲಯದ ಆದಾಯವನ್ನು ಆಯಾ ದೇವಾಲಯದ ನಿತ್ಯ ಕಟ್ಟೆ, ಹೆಚ್ಚುಕಟ್ಟೆ, ಜಾತ್ರೆ, ಹಬ್ಬಗಳು, ಸಿಬ್ಬಂದಿ ವೆಚ್ಚ ಹಾಗೂ ಅಭಿವೃದ್ಧಿ ಕಾರ್ಯಗಳು ಮತ್ತು ನಿರ್ವಹಣೆಗೆ ಬಳಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಧಾರ್ಮಿಕ ದತ್ತಿ ಇಲಾಖೆ ಅಧಿಸೂಚಿತ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗಾಗಿ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ನೋಂದಾಯಿತ 'ಎ' ದರ್ಜೆ ಮತ್ತು 'ಬಿ' ದರ್ಜೆ ದೇವಸ್ಥಾನಗಳಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಅದರಂತೆ ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಹೈಮಾಸ್ಟ್ ಲ್ಯಾಂಪ್ ಅಳವಡಿಕೆ, ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ 65 ವರ್ಷ ತುಂಬಿದವರಿಗೆ ಹಾಗೂ ವಿಶೇಷ ಚೇತನರಿಗೆ ಮತ್ತು 1 ವರ್ಷದೊಳಗೆ ಇರುವ ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರಿಗೆ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: 'ಜ್ಞಾನ ದೇಗುಲವಿದು - ಧೈರ್ಯವಾಗಿ ಪ್ರಶ್ನಿಸಿ' ಘೋಷವಾಕ್ಯಕ್ಕೆ ಸಚಿವ ಹೆಚ್ ಸಿ ಮಹದೇವಪ್ಪ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.