ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಗರದಾದ್ಯಂತ ಜನನಿಬಿಡ ಸ್ಥಳಗಳಲ್ಲಿ ಪೊಲೀಸರು ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಬ್ಮ್ಯೂಪಿಎಲ್ ಪಂದ್ಯಗಳು ನಡೆಯುತ್ತಿರುವುದರಿಂದ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ.
![Bengaluru ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ Bengaluru bomb blast case](https://etvbharatimages.akamaized.net/etvbharat/prod-images/02-03-2024/img-20240302-wa0022_0203newsroom_1709365809_268.jpg)
ಕ್ರೀಡಾಂಗಣದ ಸುತ್ತಮುತ್ತ ಹಾಗೂ ಅಕ್ಕಪಕ್ಕದ ರಸ್ತೆಗಳು, ಆಟಗಾರರು ವಾಸ್ತವ್ಯವಿರುವ ಹೋಟೆಲ್ಗಳ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆಯಿಂದಲೂ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಮೈದಾನದ ಸುತ್ತಮುತ್ತ ಪರಿಶೀಲನೆ ನಡೆಸಲಾಗುತ್ತಿದೆ.
![Bengaluru ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ Bengaluru bomb blast case](https://etvbharatimages.akamaized.net/etvbharat/prod-images/02-03-2024/kn-bng-06-police-alert-7211560_02032024130933_0203f_1709365173_498.jpg)
ಸಿಎಂ ಸಿದ್ದರಾಮಯ್ಯ ಹೇಳಿಕೆ: ''ಬೆಂಗಳೂರಿನಲ್ಲಿ ಟೈಮರ್ ಫಿಕ್ಸ್ ಮಾಡಿ ಬಾಂಬ್ ಸ್ಫೋಟಿಸಿರುವುದು ಸತ್ಯ. ಬಾಂಬ್ ಬ್ಲಾಸ್ಟ್ನಲ್ಲಿ 9 ಜನರು ಗಾಯಗೊಂಡಿದ್ದು, ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ನಿನ್ನೆಯೇ ಡಿಸಿಎಂ, ಗೃಹ ಸಚಿವರು ಭೇಟಿ ನೀಡಿದ್ದರು. ಈ ಕೃತ್ಯದಲ್ಲಿ ಸಂಘಟನೆಯ ಕೈವಾಡವಿದೆಯೋ ಅಥವಾ ಇಲ್ಲವೋ ಎನ್ನುವುದು ತಿಳಿದಿಲ್ಲ. ಈ ಘಟನೆ ಕುರಿತು ಗಂಭೀರವಾಗಿ ತನಿಖೆ ನಡೆಯುತ್ತಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
![Bengaluru ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ Bengaluru bomb blast case](https://etvbharatimages.akamaized.net/etvbharat/prod-images/02-03-2024/bng-police-3_0203newsroom_1709365809_505.jpg)
ಮೈಸೂರು ನಗರದ ಟಿ.ಕೆ. ಲೇಔಟ್ ಬಳಿ ಇರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಾಸ್ಕ್ ಮತ್ತು ಟೋಪಿ ಹಾಕಿಕೊಂಡು ವ್ಯಕ್ತಿಯೊಬ್ಬನು ಬಸ್ನಲ್ಲಿ ಪ್ರಯಾಣಿಸಿಕೊಂಡು ರಾಮೇಶ್ವರ ಕೆಫೆಗೆ ಬಂದಿದ್ದ. ಕೆಫೆಯಲ್ಲಿ ರವೆ ಇಡ್ಲಿ ತೆಗೆದುಕೊಂಡು ಒಂದೆಡೆ ಕುಳಿತು ತಿಂದಿದ್ದಾನೆ. ನಂತರ ಟೈಮರ್ ಅಳವಡಿಸಿ ಹೊರಟು ಹೋಗಿದ್ದ. ನಂತರ ಬಾಂಬ್ ಸ್ಫೋಟಗೊಂಡಿದೆ. ವ್ಯಕ್ತಿ ಸಂಚಾರಿಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜೊತೆಗೆ ಆ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿದೆ'' ಎಂದು ಹೇಳಿದ್ದಾರೆ.
![Bengaluru ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ Bengaluru bomb blast case](https://etvbharatimages.akamaized.net/etvbharat/prod-images/02-03-2024/bng-police-2_0203newsroom_1709365809_67.jpg)
''ಈ ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದೆ. ನಿನ್ನೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಅವರ ಆರೋಗ್ಯದ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಜೊತೆಗೆ ಬಾಂಬ್ ಸ್ಫೋಟಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಂದು ನಾನು ಕೂಡ ಆಸ್ಪತ್ರೆಗೆ ಮತ್ತು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುತ್ತೇನೆ'' ಎಂದಿದ್ದಾರೆ.
![Bengaluru ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ Bengaluru bomb blast case](https://etvbharatimages.akamaized.net/etvbharat/prod-images/02-03-2024/bng-police-1_0203newsroom_1709365809_1006.jpg)
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಎರಡು ಆಯಾಮಗಳಿಂದ ತನಿಖೆ, ಸಿಸಿಬಿಗೆ ಪ್ರಕರಣ ಹಸ್ತಾಂತರ