ETV Bharat / state

ಕರ್ನಾಟಕ ವಿಶ್ವವಿದ್ಯಾಲಯ, ಮನಸೂರು ಗ್ರಾಮದ ಬಳಿ ಚಿರತೆ ಪ್ರತ್ಯಕ್ಷ, ಸ್ಥಳಕ್ಕೆ ಡಿಸಿ ಭೇಟಿ - Leopard Found

author img

By ETV Bharat Karnataka Team

Published : Mar 26, 2024, 10:49 AM IST

Etv Bharat
Etv Bharat

ಕವಿವಿ ಮತ್ತು ಮನಸೂರು ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮನಸೂರ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಮನಸೂರ ಗ್ರಾಮದ ಕುಬೇರಪ್ಪ ಮಡಿವಾಳಪ್ಪ ಅಗಸರ ಎಂಬವರ ಆಕಳ ಕರು ಕೊಂದು ತಿಂದಿರುವ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ಪರಿಶೀಲಿಸಿದರು.

ಮನಸೂರ, ಮನಗುಂಡಿ ಹಾಗೂ ಸುತ್ತಲಿನ ಐದಾರು ಗ್ರಾಮಗಳಲ್ಲಿ ಡಂಗುರ ಸಾರುವಂತೆ ಹಾಗೂ ಗ್ರಾಮಸ್ಥರು ಒಬ್ಬಂಟಿಯಾಗಿ ಓಡಾಡದಂತೆ ಜಾಗೃತಿ ಮೂಡಿಸುವ ಕುರಿತು ತಹಶೀಲ್ದಾರ ಡಾ.ದುಂಡಪ್ಪ ಹೂಗಾರ ಹಾಗೂ ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಚಿರತೆ ದಾಳಿಯಿಂದ ಹಸು ಕಳೆದುಕೊಂಡ ಮಾಲೀಕರಿಗೆ ಶೀಘ್ರದಲ್ಲಿ ಪರಿಹಾರ ನೀಡುವಂತೆಯೂ ಇದೇ ವೇಳೆ ಸೂಚಿಸಿದರು.

ಮನಸೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ
ಮನಸೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ

ಚಿರತೆ ಸೆರೆ ಹಿಡಿಯಲು ಇಡಲಾಗಿದ್ದ ಬೋನ್ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಗ್ರಾಮಸ್ಥರ ಜೊತೆ ಮಾತನಾಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಯಾರೂ ಆತಂಕಪಡಬಾರದು ಎಂದು ಮನವಿ ಮಾಡಿದರು. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ತಿರುಗಾಡದಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಾಧ್ಯವಾದಷ್ಟು ದನಕರುಗಳನ್ನು ಮನೆಯ ಹತ್ತಿರವೇ ಇಟ್ಟುಕೊಳ್ಳುವುದು ಉತ್ತಮ. ಸದ್ಯ ಮನಸೂರ ಗ್ರಾಮದಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಐಪಿ ಸೆಟ್‍ಗಾಗಿ ಬೆಳಗಿನ ಅವಧಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಕಾಡು ಪ್ರದೇಶದ ಗ್ರಾಮಗಳಲ್ಲಿ ಹೆಚ್ಚಿನ ಗಮನ ಹರಿಸುವಂತೆ ಮತ್ತು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ನೀರಿನ ತೊಟ್ಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.

ಈ ವರ್ಷ ಬರಗಾಲದಿಂದಾಗಿ ಅರಣ್ಯ ಪ್ರದೇಶದಲ್ಲಿ ಕೆರೆ ಹಳ್ಳ-ಕೊಳ್ಳಗಳು ಬತ್ತಿಹೋಗಿವೆ. ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿನ ಸಮಸ್ಯೆಯಾಗಿ ಪ್ರಾಣಿಗಳು ನಾಡಿಗೆ ಬರುತ್ತಿವೆ. ಚಿರತೆ ಹಿಡಿಯಲು ಶೀಘ್ರವೇ ಇನ್ನೊಂದು ಕಡಿಮೆ ಭಾರವುಳ್ಳ ಹಗುರವಾದ ಬೋನ್ ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಪ್ರದೀಪ್ ಪವಾರ್ ತಿಳಿಸಿದರು.

ಇದನ್ನೂ ಓದಿ: ಕೊನೆಗೂ ಬೋನಿಗೆ ಬಿದ್ದ ಚಿರತೆ: ಕುಮಟಾದ ಚಿತ್ರಗಿ ನಿವಾಸಿಗಳು ನಿರಾಳ - Leopard captured

ETV Bharat Logo

Copyright © 2024 Ushodaya Enterprises Pvt. Ltd., All Rights Reserved.