ETV Bharat / state

ಬೆಳಗಾವಿ-ಚಿಕ್ಕೋಡಿ ಎರಡೂ ಗೆಲ್ಲಿಸಲು ಬಿಜೆಪಿ ಮುಖಂಡರಿಗೆ ಅಗರವಾಲ್​​ ಸೂಚನೆ: ಎ.15 ರಂದು ಶೆಟ್ಟರ್​ ನಾಮಪತ್ರ ಸಲ್ಲಿಕೆ - Jagadish Shettar

author img

By ETV Bharat Karnataka Team

Published : Apr 7, 2024, 12:32 PM IST

Updated : Apr 7, 2024, 1:16 PM IST

ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ್‌ದಾಸ್​​ ಅಗರವಾಲ್ ಬೆಳಗಾವಿ-ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲೇಬೇಕು ಎಂದು ಪದಾಧಿಕಾರಿಗಳು, ಮುಖಂಡರಿಗೆ ಸೂಚಿಸಿದ್ದಾರೆ.

ಬಿಜೆಪಿ
ಬಿಜೆಪಿ

ಜಗದೀಶ್​ ಶೆಟ್ಟರ್

ಬೆಳಗಾವಿ: ಬೆಳಗಾವಿ-ಚಿಕ್ಕೋಡಿ ಲೋಕಸಭೆ ಅಖಾಡಕ್ಕೆ ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ್‌ದಾಸ್​​ ಅಗರವಾಲ್​​ ಎಂಟ್ರಿ ಕೊಟ್ಟಿದ್ದು, ಪ್ರತ್ಯೇಕ ಸಭೆಗಳ ಮೂಲಕ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲೇಬೇಕು ಎಂಬ ಖಡಕ್​ ಸಂದೇಶವನ್ನು ಪದಾಧಿಕಾರಿಗಳು, ಮುಖಂಡರಿಗೆ ರವಾನಿಸಿದ್ದಾರೆ.

"ಆರಂಭದಲ್ಲಿ ಒಂದೂವರೆ ಗಂಟೆ ಕಾಲ ಬೆಳಗಾವಿ ‌ಹಾಗೂ ಚಿಕ್ಕೋಡಿ ‌ಕ್ಷೇತ್ರದ ಪದಾಧಿಕಾರಿಗಳ ಸಭೆ ನಡೆಸಿದ ರಾಧಾ ಮೋಹನ್‌ದಾಸ್ ಅಗರವಾಲ್, ಒಂದು ಕ್ಷಣವನ್ನೂ ವೇಸ್ಟ್ ಮಾಡದೇ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಮೋದಿ ಸರ್ಕಾರ,‌ ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮೋದಿ ಸರ್ಕಾರ ಎಲ್ಲ ವರ್ಗದವರಿಗೆ ಜಾರಿಗೊಳಿಸಿದ್ದ ಯೋಜನೆಗಳ ಮಹತ್ವದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು" ಎಂದು ಸೂಚಿಸಿದರು.

ಪದಾಧಿಕಾರಿಗಳ ಸಭೆ ಬಳಿಕ ಬೆಳಗಾವಿ ಹಾಗೂ ಚಿಕ್ಕೋಡಿ ಕೋರ್​ ಕಮಿಟಿ ಸಭೆಯನ್ನು ರಾಜ್ಯ‌ ಚುನಾವಣೆ ‌ಉಸ್ತುವಾರಿ ಅಗರವಾಲ್ ನಡೆಸಿದರು. ಬೆಳಗಾವಿ ‌ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ‌ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ‌ಕಡಾಡಿ ಸೇರಿ ಮತ್ತಿತರರು ಭಾಗಿಯಾಗಿದ್ದರು.

ಇನ್ನು ಚಿಕ್ಕೋಡಿ ‌ಸಭೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ದುರ್ಯೋಧನ ‌ಐಹೊಳೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಎರಡೂ ಕ್ಷೇತ್ರಗಳಲ್ಲಿ ಮರಾಠ ಮತಗಳು ಕೈತಪ್ಪಿ ಹೋಗದಂತೆ ನಿಗಾ ವಹಿಸಬೇಕು. ಸಮುದಾಯವಾರು ಮತ ಸೆಳೆಯಲು ‌ತಂತ್ರಗಳನ್ನು ರೂಪಿಸಬೇಕು. ಎಲ್ಲ ಕ್ಷೇತ್ರಗಳಲ್ಲಿ ಲೀಡ್ ಕೊಡಲೇಬೇಕು ಎಂದು ಹಾಲಿ-ಮಾಜಿ ಶಾಸಕರಿಗೆ ಅಗರವಾಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಭೆಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೆಳಗಾವಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​​​, "ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಅಗರವಾಲ್​, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಭೆ ಮಾಡಿದ್ದಾರೆ‌. ಬೂತ್ ಮಟ್ಟದ ಕಾರ್ಯಚಟುವಟಿಕೆ, ಸಂಘಟನೆ, ಪದಾಧಿಕಾರಿಗಳು ಮತ್ತು ಮುಖ್ಯಸ್ಥರ ಆಯ್ಕೆ ಕುರಿತು ವಿವರ ಪಡೆದುಕೊಂಡಿದ್ದಾರೆ. ಇನ್ನು, ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾದರೆ ಚುನಾವಣೆಯಲ್ಲಿ ಯಶಸ್ವಿಯಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದು ಬಿಜೆಪಿ ಮೂಲ ಮಂತ್ರವಾಗಿದ್ದು, ಇದಕ್ಕೆ ಹೆಚ್ಚು ಒತ್ತು ನೀಡಲಾಗಿದೆ" ಎಂದು ಹೇಳಿದರು‌.

ರಾಮದುರ್ಗದಲ್ಲಿ ಚಿಕ್ಕರೇವಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, "ಚಿಕ್ಕರೇವಣ್ಣ ಅವರಿಗೆ ಎರಡ್ಮೂರು ಬಾರಿ ನಾನು ಫೋನ್ ಮಾಡಿ ಮಾತಾಡಿದ್ದೇನೆ. ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಿದೆ. ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಪ್ರಚಾರ ಮಾಡಲಿದ್ದು, ಅವರ ಬೆಂಬಲಿಗರ ಜೊತೆಯೂ ಸಮಾಲೋಚನೆ ಮಾಡಿದ್ದೇನೆ. ಅದೇ ರೀತಿ ಮಹಾದೇವಪ್ಪ ಯಾದವಾಡ ಅವರ ಜೊತೆಗೂ ಸಭೆ ಮಾಡಲಾಗಿದ್ದು, ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನಿರ್ಧಾರ ಆಗಿದೆ. ಇನ್ನು ಸವದತ್ತಿಯ ಅನೇಕ ಹಳ್ಳಿಗಳಲ್ಲೂ ಪ್ರಚಾರ ಮಾಡಿದ್ದೇನೆ. ಎಲ್ಲಿಯೂ ಹಳಬರು, ಹೊಸಬರು ಎಂಬ ವ್ಯತ್ಯಾಸವಿಲ್ಲ‌" ಎಂದರು.

"ಅಜೆಂಡಾ ಏನು ಅಂತಾ ಜನರೇ ಹೇಳುತ್ತಿದ್ದಾರೆ. ರಾಷ್ಟ್ರೀಯತೆ, ರಾಷ್ಟ್ರೀಯ ವಿಚಾರಧಾರೆ, ರಾಷ್ಟ್ರೀಯ ಭದ್ರತೆ, ಮುಂದಿನ ಪ್ರಧಾನಮಂತ್ರಿ ಯಾರಿರಬೇಕು ಎಂಬ ವಿಚಾರಗಳ ಮೇಲೆ ಚುನಾವಣೆ ನಡೆಯುತ್ತಿದೆ. ಜನಸಾಮಾನ್ಯರಲ್ಲೂ ಇದೇ ವಿಷಯ ಚರ್ಚೆ ಆಗುತ್ತಿದೆ. ಮತ್ತೊಮ್ಮೆ ದೇಶದಲ್ಲಿ ಮೋದಿ ಪ್ರಧಾನಿ ಆಗಬೇಕು ಎಂಬ ಆಶಯವನ್ನು ಜನರೇ ವ್ಯಕ್ತಪಡಿಸುತ್ತಿದ್ದಾರೆ" ಎಂದು ಹೇಳಿದರು.

"15ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದೇ ಬರುತ್ತಾರೆ. ನಾನು ಹೋದ ಕಡೆಯಲ್ಲೆಲ್ಲಾ ಪ್ರತಿಯೊಬ್ಬರೂ ಕೂಡ ನಾಮಪತ್ರ ಯಾವಾಗ ಸಲ್ಲಿಸುತ್ತಿರಿ, ನಾವು ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಬೇರೆ ಕಡೆಯಿಂದಲೂ ನಾವು ಬರುತ್ತೇವೆ ಎಂದು ಫೋನ್​ ಕರೆಗಳು ಬರುತ್ತಿವೆ. ಇಂಥ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಲಿದ್ದಾರೆ. ಯಾವೆಲ್ಲಾ ನಾಯಕರು ಆಗಮಿಸುತ್ತಾರೆ ಎಂಬುದು ಅಂತಿಮ ಆದ ಬಳಿಕ ತಿಳಿಸುತ್ತೇನೆ" ಎಂದು ಜಗದೀಶ ಶೆಟ್ಟರ್ ಹೇಳಿದರು.

ಪ್ರತಿಪಕ್ಷಗಳಿಗೆ ಬಿಜೆಪಿ ಮತ್ತು ಮೋದಿ ಬಗ್ಗೆ ಮಾತನಾಡಲು ಯಾವುದೇ ವಿಚಾರ ಮತ್ತು ವಿಷಯಗಳು ಇಲ್ಲ‌. ಆ ಹಿನ್ನೆಲೆಯಲ್ಲಿ ಬೇರೆ ವಿಷಯ ಚರ್ಚೆ ಮಾಡುತ್ತಿದ್ದಾರೆ. ಆದರೆ ಜನಸಾಮಾನ್ಯರ ಬಳಿ ಹೋಗಿ ಕೇಳಿದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಅಂತಾನೇ ಹೇಳುತ್ತಾರೆ. ದೇಶ ರಕ್ಷಣೆ ಮತ್ತು ಬಲಿಷ್ಠ ಆಗಲು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಜನ ಮುಕ್ತವಾಗಿ ಹೇಳುತ್ತಿದ್ದಾರೆ ಎಂದು ಜಗದೀಶ ಶೆಟ್ಟರ್ ಸಮರ್ಥಿಸಿಕೊಂಡರು.

ರಮೇಶ ಜಾರಕಿಹೊಳಿ ಅವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಅದು ಅವರಿಗೆ ಮತ್ತು ಮಾಧ್ಯಮಗಳಿಗೆ ಬಿಟ್ಟ ವಿಚಾರ. ಇದರಲ್ಲಿ ನಾನು ಮಧ್ಯಪ್ರವೇಶ ಮಾಡೋದಿಲ್ಲ ಎಂದು ಜಗದೀಶ ಶೆಟ್ಟರ್ ಹಾಸ್ಯಚಟಾಕಿ ಹಾರಿಸಿದರು‌.

ಇದನ್ನೂ ಓದಿ: 'ಮೃದು ಸ್ವಭಾವ ನನ್ನ ದೌರ್ಬಲ್ಯವಲ್ಲ, ಕನಕಪುರ ಬಂಡೆ ವಿರುದ್ಧ ಜಯ ನಿಶ್ಚಿತ': ಈಟಿವಿ ಭಾರತ ಸಂದರ್ಶನದಲ್ಲಿ ಡಾ.ಮಂಜುನಾಥ್ ವಿಶ್ವಾಸ - Dr Manjunath Interview

Last Updated : Apr 7, 2024, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.