ETV Bharat / state

ಗುಬ್ಬಚ್ಚಿಗಳು ಏಕೆ ಕಣ್ಮರೆಯಾದವು?: ವನ್ಯಜೀವಿ ತಜ್ಞ ಕೃಪಾಕರ ಸಂದರ್ಶನ

author img

By ETV Bharat Karnataka Team

Published : Mar 20, 2024, 5:30 AM IST

Updated : Mar 20, 2024, 12:35 PM IST

ವಿಶ್ವ ಗುಬ್ಬಚ್ಚಿ ದಿನದ ಹಿನ್ನೆಲೆಯಲ್ಲಿ ವನ್ಯಜೀವಿ ತಜ್ಞ ಕೃಪಾಕರ ಅವರೊಂದಿಗೆ ಈಟಿವಿ ಭಾರತ ಸಂದರ್ಶನ ನಡೆಸಿದೆ.

Wildlife expert Krupakara
ವನ್ಯಜೀವಿ ತಜ್ಞ ಕೃಪಾಕರ

ವನ್ಯಜೀವಿ ತಜ್ಞ ಕೃಪಾಕರ

ಮೈಸೂರು : ಇತ್ತೀಚಿಗೆ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಲೇ ಇವೆ. ಇದಕ್ಕೆ ಕಾರಣ ಏನು?. ಪರಿಸರದ ಸಮತೋಲನದಲ್ಲಿ ಗುಬ್ಬಚ್ಚಿಯ ಪಾತ್ರ ಏನು? ಹಾಗೂ ಗುಬ್ಬಚ್ಚಿಗಳು ನಗರ ಪ್ರದೇಶಗಳಿಂದ ಕಣ್ಮರೆಯಾಗುವುದಕ್ಕೆ ಪ್ರಮುಖ ಕಾರಣ ಏನು ಎಂಬ ಹಲವು ವಿಚಾರಗಳ ಬಗ್ಗೆ ವನ್ಯಜೀವಿ ತಜ್ಞ ಕೃಪಾಕರ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.

ಇಂದು ವಿಶ್ವ ಗುಬ್ಬಚ್ಚಿ ದಿನ. ಹಿಂದೆ ಮನೆಯ ಮುಂದೆ ಹಾಗೂ ಮನೆಯ ಹಿಂಭಾಗದಲ್ಲಿ ಹಾಗೂ ಮನೆಯ ಹಂಚಿನ ಒಳಗಡೆ ಗೂಡು ಕಟ್ಟಿಕೊಂಡು ಕುಟುಂಬದ ಜೊತೆಯೇ ಸದಸ್ಯನಾಗಿ ಆಹಾರ ಹುಡುಕುತ್ತಾ, ವಂಶವೃದ್ಧಿ ಮಾಡುತ್ತಾ, ಕುಟುಂಬದ ಮಧ್ಯೆಯೇ ಇರುತ್ತಿದ್ದ ಗುಬ್ಬಚ್ಚಿಗಳು ಇತ್ತೀಚೆಗೆ ಕಾಣೆಯಾಗಿವೆ. ಅದಕ್ಕೆ ಪ್ರಮುಖ ಕಾರಣ ಏನು? ಎನ್ನುವುದಕ್ಕೆ ಖ್ಯಾತ ವನ್ಯಜೀವಿ ತಜ್ಞ ಸೂಕ್ಷ್ಮವಾಗಿ ಕೆಲವು ಕಾರಣಗಳನ್ನು ವಿವರಿಸಿದ್ದಾರೆ.

Wildlife expert Krupakara
ಗುಬ್ಬಚ್ಚಿಗಳ ಫೋಟೋ

ಕೃಪಾಕರ ಮಾತು: ಭಾರತದಲ್ಲಿ 1,400 ಹಕ್ಕಿ ಪ್ರಭೇದಗಳಿವೆ. ಯಾಕೆ ನಾವು ಇಂದು ಗುಬ್ಬಚ್ಚಿ ಬಗ್ಗೆ ಜಾಗೃತಿ ದಿನಾಚರಣೆ ಮಾಡುತ್ತೇವೆ. ಈ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಉಳಿಯಲಿ ಎಂದು ಏನೇನೋ ಮಾಡುತ್ತಿದ್ದಾರೆ. ಕೃತಕ ಗೂಡು, ಸಣ್ಣ ಸಣ್ಣ ಸೆಮಿನಾರ್ ಮಾಡುವುದು ಇವೆಲ್ಲವೂ ನಡೆಯುತ್ತಿದೆ. ಇದೆಲ್ಲಕ್ಕಿಂತಲೂ ಮುಂಚೆ ನಾವು ಯೋಚನೆ ಮಾಡಬೇಕಿರುವುದು ಗುಬ್ಬಿಗಳಿಗೆ ಯಾಕೆ ಈ ಪರಿಸ್ಥಿತಿ ಬಂದಿದೆ?. ಇಷ್ಟು ವರ್ಷ ಚೆನ್ನಾಗಿಯೇ ಇದ್ದವಲ್ಲಾ?. ಇವಾಗ ಯಾಕೆ ಈ ರೀತಿ ಆಗಿದೆ?. ಮನುಷ್ಯ ಯಾಕೆ ಈ ಗುಬ್ಬಿಗಳ ಕುರಿತು ಆಸಕ್ತಿ ಅಥವಾ ಕಾಳಜಿ ತೋರಿಸ್ತಿದ್ದಾನೆ ಎಂಬುದು.

ಮನುಷ್ಯ ಹಿಂದೆಲ್ಲಾ ನಗರದಲ್ಲೇ ನೆಲೆಸಿದ್ದರೂ ಹಂಚಿನ ಮನೆಯಲ್ಲಿ ವಾಸ, ಮನೆ ಹಿಂದೆ ಪಾತ್ರೆ ತೊಳೆಯುವುದು, ಅಕ್ಕಿಯನ್ನು ಅಲ್ಲಲ್ಲೇ ಚೆಲ್ಲುವುದೆಲ್ಲ ಮಾಡುತ್ತಿದ್ದ. ಆದರೆ ಆ ವ್ಯವಸ್ಥೆ ಈಗ ಇಲ್ಲ. ಗುಬ್ಬಿಗಳು ಹಿಂದೆಲ್ಲಾ ಮನೆಯಲ್ಲಿ ಚೆಲ್ಲಿರುವ ಅಕ್ಕಿ ಅಥವಾ ಕಾಳುಗಳನ್ನು ತಮ್ಮ ಆಹಾರವಾಗಿ ತಿನ್ನುತ್ತಿದ್ದವು. ಅವುಗಳಿಗೆ ಗೂಡು ಕಟ್ಟಿಕೊಳ್ಳುವುದಕ್ಕೆ ಸೂಕ್ತ ಸ್ಥಳಾವಕಾಶವಿತ್ತು. ಆದರೆ ಈಗಿನ ಪರಿಸ್ಥಿತಿ ಬೇರೆ. ಹಂಚಿನ ಮನೆ ಇಲ್ಲ, ಗುಡಿಸಲು ಇಲ್ಲ. ಮನುಷ್ಯ ತುಂಬಾ ಬದಲಾಗಿದ್ದಾನೆ. ವ್ಯವಸಾಯ ಮೊದಲಿನಂತಿಲ್ಲ. ಇದರಿಂದಾಗಿ ಈ ಗುಬ್ಬಿಗಳು ಒಂದು ರೀತಿಯಲ್ಲಿ ತನ್ನ ನೆಲೆ ಕಳೆದುಕೊಂಡಿವೆ.

Wildlife expert Krupakara
ಗುಬ್ಬಚ್ಚಿ ಫೋಟೋ

ಇತ್ತೀಚಿನ ಬದುಕಿನ ಶೈಲಿ ಹೇಗಿದೆ ಎಂದರೆ, ಮಾಲುಗಳಿಂದ ಅಥವಾ ಹೊರಗಡೆಯಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ಮತ್ತಿತರ ರೆಡಿಮೇಡ್‌ ಸಾಮಗ್ರಿಗಳನ್ನು ತರಲಾಗುತ್ತಿದೆ. ಅಕ್ಕಿಯೇ ಆಗಲಿ ಅಥವಾ ಬೇರೆ ಸಾಮಗ್ರಿಗಳೇ ಆಗಲಿ ಯಾವುದನ್ನೂ ಜನರು ಸಾಮಾನ್ಯವಾಗಿ ಎಲ್ಲಿಯೂ ಚೆಲ್ಲುವುದಿಲ್ಲ. ಮನೆಯೊಳಗೆ ಕೂಡ ಏನೂ ಬರದಂತೆ ನೋಡಿಕೊಳ್ಳುತ್ತೇವೆ. ಇದು ಇಂದಿನ ರಿಯಾಲಿಟಿ.

ಮುಂದಿನ ದಿನಗಳಲ್ಲಿ ಗುಬ್ಬಿಗಳ ದಿನಾಚರಣೆ ಮಾತ್ರ ಉಳಿಯಲಿದೆ. ಇಂದು ಹಳ್ಳಿಗಳಲ್ಲಿ ಅಲ್ಲಲ್ಲಿ ಗುಬ್ಬಿಗಳು ಕಾಣ ಸಿಗುತ್ತಿವೆ. ಹಳ್ಳಿಗಳು ಕೂಡ ತುಂಬಾ ಕಂಪ್ಲೀಟ್ ಆಗಿ ಬದಲಾಗುತ್ತಿವೆ. ಹಳೆಯ ಯಾವುದೇ ಸಂಸ್ಕೃತಿ ಇಲ್ಲ. ಸಂತೆ, ಪೇಟೆಗಳಲ್ಲಿ ಅಲ್ಲಲ್ಲಿ ಅಕ್ಕಿ ಹಾಗೂ ಕಾಳು ಚೆಲ್ಲಿರುವಲ್ಲಿ ಗುಬ್ಬಿಗಳ ಸದ್ದು ಕೇಳಿ ಬರುತ್ತಿತ್ತು. ಆದರೀಗ ಅವರ ಪಾಡಿಗೆ ಅವರು ಅಕ್ಕಿ ಮಾರುತ್ತಿರುತ್ತಾರೆ. ಜನಗಳು ಬಂದು ತೆಗೆದುಕೊಂಡು ಹೋಗುತ್ತಾರೆ. ಅವುಗಳ ಬದುಕುವ ನೆಲೆ ಕಿತ್ತುಕೊಂಡು ನಾವು ಎಮೋಷನಲ್ ಆಗಿ ಅದಕ್ಕೆ ಗೂಡು ಕಟ್ಟುತ್ತೇವೆ. ಅದಕ್ಕೆ ಬೇಕಿರುವುದು ಒಂದು ನೆಲೆ. ಅದನ್ನು ನಾವು ಹೇಗೆ ಸೃಷ್ಟಿಸಬೇಕು ಎಂಬುದೇ ಇವತ್ತಿನ ಗುಬ್ಬಿಗಳ ದಿನಾಚರಣೆಯ ಮಹತ್ವ.

Sparrow
ಫೋಟೋ ಕೃಪೆ: ಕೃಪಾಕರ

ಈಗ ಬೇರೆ ಬೇರೆ ಗುಬ್ಬಿಗಳು ಕಣ್ಮರೆಯಾದವು. ಅವೈಜ್ಞಾನಿಕ ಕಾರಣದಿಂದ ನಾಶವಾದವು. ಅಂದರೆ ಮೊಬೈಲ್ ಟವರ್ ಸಿಗ್ನಲ್‌​ಗಳಿಂದ ಅನ್ನುವುದು ಊಹೆ. ಅದು ಸುಳ್ಳು. ಅದಕ್ಕೆ ಸರಳವಾಗಿ ನೆಲೆ ಇಲ್ಲದೆ ಇರುವುದರಿಂದ ಮರೆಯಾದವು. ಅದು ಕಟ್ಟಿಕೊಂಡಿದ್ದ ಬದುಕು ಛಿದ್ರವಾಯಿತು. ಇವಾಗ ಮೊಬೈಲ್ ಟವರ್ ಸಿಗ್ನಲ್ ತೆಗೆದರೆ ಮತ್ತೆ ಬರುತ್ತದೆಯೇ? ಇಲ್ಲ. ವಾಸ್ತವವಾಗಿ ವೈಜ್ಞಾನಿಕವಾಗಿ ಯೋಚನೆ ಮಾಡಬೇಕು. ಊಹೆ ಮೇಲೆ ವಿಜ್ಞಾನ ಇಲ್ಲ. ವಾಸ್ತವದ ಮೇಲೆ ವಿಜ್ಞಾನ ಇರುವುದು. ಒಂದೇ ಪದದಲ್ಲಿ ಹೇಳಬೇಕು ಅಂದ್ರೆ ಗುಬ್ಬಿಗಳು ತಮ್ಮ ನೆಲೆ ಕಳೆದುಕೊಂಡವು. ಅದರಿಂದ ಕಣ್ಮರೆಯಾದವು. ಈ ಮನುಷ್ಯ ಸೇರಿ 80 ಲಕ್ಷ ಜೀವಿಗಳು ಭೂಮಿಯಲ್ಲಿವೆ. ಆದರೆ ಈ ಮನುಷ್ಯ ಈ ಜೀವಿಗಳನ್ನು ಧ್ವಂಸ ಮಾಡುತ್ತಿದ್ದಾನೆ.

ವನ್ಯಜೀವಿ ತಜ್ಞ ಕೃಪಾಕರ

ಪ್ರಾಣಿಗಳ ನೆಲೆ ಕಿತ್ತುಕೊಂಡಿದ್ದೇವೆ: ಆದರೆ ಮುಂದಕ್ಕೆ ಇನ್ನೂ ಉಳಿದ ಜೀವಿಗಳು ಇವೆಯಲ್ಲ, ಅವುಗಳನ್ನು ಉಳಿಸಿಕೊಂಡು ಹೋಗಬೇಕು. ಗುಬ್ಬಿಗಳ ನಾಶ ಒಂದು ನಮಗೆ ವಾರ್ನಿಂಗ್. ಮನುಷ್ಯ ಬದಲಾಗಬೇಕು, ಆಹಾರ ಪದ್ಧತಿ ಬದಲಾಯಿಸಬೇಕು. ಗುಬ್ಬಿಗಳು ಮನುಷ್ಯರು ಬರುವ ಮೊದಲೇ ಬಂದಿದ್ದ ಜೀವಿ. ಇವಾಗ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ನೋಡಿರಬಹುದು. ಆನೆಗಳು ದಾಳಿ ಮಾಡಿದ್ದವು. ಹುಲಿ, ಚಿರತೆ ದಾಳಿ ಮಾಡಿತ್ತು ಅಂತ ಹೇಳುತ್ತಾರೆ. ಅದೇ ಯಾಕೆ ಅಂದರೆ ಅವುಗಳ ನೆಲೆಯನ್ನು ನಾವು ಕಿತ್ತುಕೊಂಡಿದ್ದೇವೆ. ನಾವು ಅವುಗಳ ಜಾಗದಲ್ಲಿ ಇದ್ದೇವೆ. ಆನೆ, ಹುಲಿಯ ಜಾಗದಲ್ಲಿ ನಾವು ನಿಂತು ಯೋಚನೆ ಮಾಡಿದಾಗ ಸತ್ಯಾಂಶ ತಿಳಿಯುತ್ತದೆ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ವಿವರಿಸಿದರು.

ಇದನ್ನೂ ಓದಿ : ವಿಶ್ವ ಗುಬ್ಬಚ್ಚಿ ದಿನ: ಹಕ್ಕಿಗಳಿಗೆ ಅನ್ನ, ಆಶ್ರಯದಾತ ರಾಮನಗರದ ಈ ಪರಿಸರಪ್ರೇಮಿ

Last Updated : Mar 20, 2024, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.