ETV Bharat / state

ವಿಶ್ವದ ಬದುಕು, ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Feb 29, 2024, 9:44 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ನೋಡುಗರ ಮನಸ್ಸು, ಆಲೋಚನೆಯ ಮೇಲೆ ಪ್ರಭಾವ ಬೀರುವ ಶಕ್ತಿ ಸಿನಿಮಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆವೃತ್ತಿಗೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ

ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ನಟ ಶಿವರಾಜ್ ಕುಮಾರ್, ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿ ನಟ ಡಾಲಿ ಧನಂಜಯ್, ಸಿನಿಮಾ ನಿರ್ದೇಶಕ ಜಬ್ಬಾರ್ ಪಟೇಲ್, ಚೆಕ್ ರಿಪಬ್ಲಿಕ್ ದೇಶದ ಚಿತ್ರ ವಿಮರ್ಶಕ ಮೆಯೆರಾ ಲಾಂಗೆರೊವಾ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ನಟಿ ಆರಾಧನಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಚಲನಚಿತ್ರ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಸಾಧು ಕೋಕಿಲಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಸೇರಿ ಹಲವು ಗಣ್ಯರು ಇದ್ದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ

ಸಿಎಂ ಸಿದ್ದರಾಮಯ್ಯ ಮಾತನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಸ್ಕೃತಿಯನ್ನು ಪಾಲಿಸಿದಾಗ ಜಗತ್ತಲ್ಲಿ ಶಾಂತಿ ನೆಲೆಸುತ್ತದೆ. ಸಿನಿಮಾ ಬಹಳ ಪ್ರಭಾವಿ ಮಾಧ್ಯಮ. ನೋಡುಗರ ಮನಸ್ಸು, ಆಲೋಚನೆಯ ಮೇಲೆ ಪ್ರಭಾವ ಬೀರುವ ಶಕ್ತಿ ಅದಕ್ಕಿದೆ. ಸಿನಿಮಾಗಳ ಮೂಲಕ ದೇಶದ ಒಳಗಿನ, ಇತರೆ ದೇಶಗಳ ಜನರ ಸಂಸ್ಕೃತಿಯನ್ನು ಅರಿಯುವ ಮತ್ತು ಆ ಮೂಲಕ ನಮ್ಮ ಮಾನವೀಯ ಸಂಸ್ಕೃತಿಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ವೇಗವರ್ಧಕವಾಗಿ ಕೆಲಸ ಮಾಡುತ್ತದೆ ಎಂದರು.

ಶ್ರೇಷ್ಠ ನಟ ಶಿವರಾಜ್ ಕುಮಾರ್, ನಟ ಡಾಲಿ ಧನಂಜಯ್ ಹಾಗೂ ಸಿಎಂ ಸಿದ್ದರಾಮಯ್ಯ
ಶ್ರೇಷ್ಠ ನಟ ಶಿವರಾಜ್ ಕುಮಾರ್, ನಟ ಡಾಲಿ ಧನಂಜಯ್ ಹಾಗೂ ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇತರೆ ದೇಶಗಳ ಸಂವಿಧಾನದಲ್ಲಿಲ್ಲದ ಸಾಮಾಜಿಕ ನ್ಯಾಯದ ಮೌಲ್ಯಗಳಿವೆ. ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಕುವೆಂಪು ಅವರ ವಿಶ್ವ ಮಾನವ ಸಂಸ್ಕೃತಿಯನ್ನು ವಿಶ್ವದಲ್ಲಿ ಹೆಚ್ಚೆಚ್ಚು ಪಾಲಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ವಿಶ್ವ ಸಿನಿಮಾಗಳು ನೆರವಾಗುತ್ತವೆ. 2019ರಿಂದ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿ ರಚಿಸಿದ್ದೇವೆ. 2019ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ಬಾಕಿ ಉಳಿದಿರುವ ವರ್ಷಗಳ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ತಕ್ಷಣ ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದರು.

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

50ಕ್ಕೂ ಹೆಚ್ಚು ದೇಶಗಳ 180 ಚಲನಚಿತ್ರಗಳು: ಚಿತ್ರೋತ್ಸವದಲ್ಲಿ ಕನ್ನಡ, ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನಿಮಾ, ವಿಮರ್ಶಕರ ವಾರ, ಪುನರಾವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ ಹೀಗೆ ವಿವಿಧ ವಿಭಾಗಗಳಲ್ಲಿ 50ಕ್ಕೂ ಹೆಚ್ಚು ದೇಶಗಳ 180 ಚಲನಚಿತ್ರಗಳು ಪ್ರದರ್ಶನವಾಗಲಿವೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ಕಳೆದ ವರ್ಷ ನಮ್ಮನ್ನು ಅಗಲಿದ ಹಿರಿಯ ನಟಿ-ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್‍, ಸಿ.ವಿ.ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರ ಪ್ರದರ್ಶನವಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ನಟ ಡಾಲಿ ಧನಂಜಯ್
ಸಿಎಂ ಸಿದ್ದರಾಮಯ್ಯ ಹಾಗೂ ನಟ ಡಾಲಿ ಧನಂಜಯ್

ಚಿತ್ರೋತ್ಸವ ಇಂದಿನಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಒರಾಯನ್‍ ಮಾಲ್‍ನ ಪಿವಿಆರ್​, ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ದೇಶ, ವಿದೇಶಗಳ ನೂರಾರು ಚಿತ್ರಗಳು ಪ್ರದರ್ಶನವಾಗಲಿವೆ.

ಸಂಕಲನ, ಛಾಯಾಗ್ರಹಣ, ಕಲೆ ಮತ್ತು ನಿರ್ಮಾಣ ವಿನ್ಯಾಸ, ಸಂಗೀತ, ಭಾರತೀಯ ಸಿನಿಮಾದಲ್ಲಿ ಸಾಂವಿಧಾನಿಕ ಮೌಲ್ಯಗಳು, ಚಲನಚಿತ್ರ ವಿಮರ್ಶೆ, ಚಲನಚಿತ್ರ ಸಹ ನಿರ್ಮಾಣ ಮತ್ತು ಮಾರುಕಟ್ಟೆ ಸಾಧ್ಯತೆಗಳು, ಚಲನಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ಮಾತುಕಥೆಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ತಜ್ಞರಿಂದ ಉಪನ್ಯಾಸ, ಸಂವಾದ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಒಳಗೊಂಡಿವೆ. ಮಾರ್ಚ್ 7ರಂದು ವಿಧಾನಸೌಧದ ಬ್ಯಾಂಕ್ವೆಟ್‍ ಹಾಲ್‍ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ಮೆಕ್ಸಿಕೋ ಚಿತ್ರೋತ್ಸವದಲ್ಲಿ ಬಿಗ್​ ಬಾಸ್​ ವಿಜೇತ ಕಾರ್ತಿಕ್ ನಟನೆಯ 'ಡೊಳ್ಳು' ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.