ETV Bharat / state

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮ: ಬಿ ಕೆ ಹರಿಪ್ರಸಾದ್

author img

By ETV Bharat Karnataka Team

Published : Jan 21, 2024, 7:26 PM IST

Updated : Jan 21, 2024, 9:22 PM IST

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಬಿ ಕೆ ಹರಿಪ್ರಸಾದ್​ ಹೇಳಿದ್ದಾರೆ.

ಬಿ ಕೆ ಹರಿಪ್ರಸಾದ್ ವಾಗ್ದಾಳಿ
ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಕಾರ್ಯಕ್ರಮ

ಚಿಕ್ಕಮಗಳೂರು: ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ರಾಜಕೀಯ ಕಾರ್ಯಕ್ರಮವಾಗಿದ್ದು, ಬಿಜೆಪಿಯ ವಿಶ್ವಗುರು ನಡೆಸುತ್ತಿರುವ ಕಾರ್ಯಕ್ರಮ ಎಂದು ವಿಧಾನಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ.​

ಈ ಕುರಿತು ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಕಾರ್ಯಕ್ರಮಕ್ಕೆ ಯಾವುದೇ ಆಮಂತ್ರಣ ಬೇಡ. ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ವಿಶ್ವಗುರು. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾವು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ನಮಗೆ ಹೇಳಿಕೊಟ್ಟಿದ್ದಾರೆ. ಶಂಕರ ಮಠಾಧೀಶರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ಯಾವ ಆಮಂತ್ರಣ ಏನೂ ಬೇಕಾಗಿರಲಿಲ್ಲ. ಸ್ವತಃ ನಾವೇ ಹೋಗ್ತಿದ್ವಿ. ಆದ್ರೆ, ಅಲ್ಲಿ ಜಗದ್ಗುರು ಬದಲು ವಿಶ್ವಗುರು ಇದ್ದಾರೆ. ಹಾಗಾಗಿ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಬಿಜೆಪಿಯ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ದೇವಸ್ಥಾನಕ್ಕೆ ಹೋಗುತ್ತೇನೆ. ಆದರೇ ಇಂತಹದ್ದೇ ದೇವರು ಅಂತಿಲ್ಲ. ದೇಶದಲ್ಲಿ 33 ಕೋಟಿ ದೇವರಿದ್ದಾರೆ. ಎಲ್ಲಾದ್ರು ಹೋಗುವೆ. ನಾವು ಮಾರಮ್ಮ, ಅಣ್ಣಮ್ಮ ಎಂದು ಭೂತ ಪೂಜೆ ಮಾಡೋರು. ಹಾಗಾಗಿ ಅಲ್ಲಿಗೆ ಹೋಗ್ತೀವಿ ಎಂದಿದ್ದಾರೆ. ನಂತರ ನಿಗಮ ಮಂಡಳಿ ನೇಮಕದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ನೀವು ಸರ್ಕಾರದವರನ್ನೇ ಕೇಳಬೇಕು. ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೀನಿ, ಯಾವ ಮಾನದಂಡದಲ್ಲಿ ನಿಗಮ ಮಂಡಳಿ ಮಾಡ್ತಿದ್ದಾರೆ ಅನ್ನೋದರ ಬಗ್ಗೆ ಅವರನ್ನೇ ಕೇಳಬೇಕು. ಅದರ ಬಗ್ಗೆ ನನಗೇ ಗೊತ್ತಿಲ್ಲ. ನಿಗಮ ಮಂಡಳಿ ಮಾಡ್ತಿರೋದು ಗೊತ್ತಿಲ್ಲ, ಮುಂದಾಗೋದು ಗೊತ್ತಿಲ್ಲ ಎಂದು ಹೇಳಿದರು.

ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿ, ನನಗೆ ಕಾಂಗ್ರೆಸ್ ಮೇಲೆ ಅಸಮಾಧಾನ ಇಲ್ಲ. ಯಾಕಂದ್ರೆ, ನಾನು ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಕಾಂಗ್ರೆಸ್ಸಿನಲ್ಲೇ ಇದ್ದೀನಿ. ನಾನೇಕೆ ಅಸಮಾಧಾನಗೊಳ್ಳಲಿ. ಅಧಿಕಾರಕ್ಕಾಗಿ ನಾನು ಬೇರೆ-ಬೇರೆ ಪಕ್ಷಗಳನ್ನು ಬದಲಾವಣೆ ಮಾಡ್ದೋನಲ್ಲ. ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಆದರೆ, ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ, ಅದಕ್ಕೆ ನಮ್ಮ ಅಸಮಾಧಾನ ಅಷ್ಟೇ. ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತೆ ಎಂದ ಬಿ ಕೆ ಹರಿಪ್ರಸಾದ್​, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ. ಅವರ ಮೇಲೆ ಏಕೆ ಸಿಟ್ಟಾಗೋಣ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೋ, ಬೇರೆ ಸರ್ಕಾರವೋ ಯೋಚಿಸಬೇಕಿದೆ: ಬಿ.ಕೆ.ಹರಿಪ್ರಸಾದ್

Last Updated : Jan 21, 2024, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.