ETV Bharat / state

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ - Karnataka Weather

author img

By ETV Bharat Karnataka Team

Published : May 13, 2024, 4:41 PM IST

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

rainfall forecast
ಮಳೆ (ETV Bharat)

ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ. ಈ ಸಂಬಂಧ ರಾಜ್ಯದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಕಲಬುರಗಿ, ಯಾದಗಿರಿ, ದಕ್ಷಿಣ ಕರ್ನಾಟಕ ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ 5 ದಿನಗಳಲ್ಲಿ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ನಿನ್ನೆಯೂ ಮಳೆ: ಭಾನುವಾರ ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಮುಖ್ಯವಾಗಿ ಚಿತ್ರದುರ್ಗದಲ್ಲಿ 21 ಮಿ.ಮೀ., ಬೆಂಗಳೂರು ನಗರ 14.4 ಮಿ.ಮೀ., ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದ ಸುತ್ತಮುತ್ತ 23.4 ಮಿ.ಮೀ. ಹಾಗೂ ಕೊಪ್ಪಳದಲ್ಲಿ 16 ಮಿ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿಯಲ್ಲಿ ತಡರಾತ್ರಿ ಭಾರಿ ಮಳೆ: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿದ್ದಾರೆ. ಸರ್ವಿಸ್ ರಸ್ತೆಗಳು, ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು. ಅವೆನ್ಯೂ ರಸ್ತೆಯಲ್ಲಿ ನೀರು ನುಗ್ಗಿದ್ದು, ಪಾದಚಾರಿಗಳಿಗೆ ತೊಂದರೆ ಉಂಟಾಯಿತು.

ರಾತ್ರಿ ಕೆಲವು ಕಡೆ ದಿಢೀರ್ ವರುಣನ ಆಗಮನದಿಂದಾಗಿ ಜನರು ಮಳೆಯಿಂದ ತಪ್ಪಿಸಿಕೊಳ್ಳು ಹರಸಾಹಸ ಪಟ್ಟರು. ತೀವ್ರ ತಾಪಮಾನ ಏರಿಕೆಯಿಂದಾಗಿ ಬೇಸತ್ತಿದ್ದ ಜನರಿಗೆ ಮಳೆಯಿಂದ ಅಲ್ಪ ತಣ್ಣನೆಯ ಅನುಭವವಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಭಾರಿ ಮಳೆ–ಗಾಳಿಗೆ ಮರ ಬಿದ್ದು ಮಹಿಳೆ ಸಾವು, ಕಾರು ಜಖಂ - WOMAN DIED

ETV Bharat Logo

Copyright © 2024 Ushodaya Enterprises Pvt. Ltd., All Rights Reserved.