ETV Bharat / state

ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆರಾಯನ ಅಬ್ಬರ: ಹವಾಮಾನ ಇಲಾಖೆ ಮುನ್ಸೂಚನೆ - Rainfall Alert

author img

By ETV Bharat Karnataka Team

Published : Apr 21, 2024, 6:50 AM IST

Karnataka rain
ಕರ್ನಾಟಕ ಮಳೆ

ರಾಜ್ಯದಲ್ಲಿ ಪೂರ್ವ ಮುಂಗಾರಿನ ಮಳೆಯಾಗುತ್ತಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬಹುತೇಕ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆ ಸುರಿಯಲಿದೆ.

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಗುಡುಗುಸಹಿತ ಮಳೆ ಬೀಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಗೋಕರ್ಣ, ಮಂಕಿ, ಚಿಕ್ಕಮಗಳೂರಿನ ಕೊಪ್ಪ, ಕಮ್ಮರಡಿ, ಬಾಳೆಹೊನ್ನೂರು, ಜಯಪುರ, ಕೊಟ್ಟಿಗೆಹಾರ, ಕಡೂರು, ಎನ್​.ಆರ್​.ಪುರ, ಉಡುಪಿಯ ಕುಂದಾಪುರ, ಕೋಟ, ಸಿದ್ದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಸುಳ್ಯ, ಉತ್ತರ ಕನ್ನಡದ ಹಳಿಯಾಳ, ಮುಂಡಗೋಡು ಹಾಗು ಯಲ್ಲಾಪುರದಲ್ಲಿ ವರ್ಷಧಾರೆಯಾಗಿದೆ.

ಎಲ್ಲೆಲ್ಲಿ ಮಳೆ?: ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ ಮೂರು ದಿನ ಮಳೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಏ.21ರಂದು ಭಾರಿ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ ಮೂರು ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿತ್ತು. ಹಲವೆಡೆ 2ರಿಂದ 3 ದಿನಗಳಿಂದ ನಿರಂತರವಾಗಿ ಮಳೆಯೂ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಸೇರಿದಂತೆ ಇತರ ಕಾರಣಗಳಿಂದಲೂ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಇಳಿಮುಖವಾಗಿದೆ. ಈ ಮೊದಲು ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​​ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ಈಗ ಮಳೆಯಿಂದಾಗಿ 37ರಿಂದ 38 ಡಿಗ್ರಿ ಉಷ್ಣಾಂಶ ಕಂಡುಬಂದಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ತಾಪಮಾನ ಇಳಿದಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಶಿವಮೊಗ್ಗ: ಸಿಡಿಲು ಬಡಿದು ವ್ಯಕ್ತಿ ಸಾವು, ಮತ್ತೋರ್ವ ಗಂಭೀರ - Heavy Rain In Karnataka

"ಆಗಸದಲ್ಲಿ ಧೂಳಿನ ಕಣಗಳು ಮತ್ತು ಜ್ವಾಲಾಮುಖಿಯಿಂದ ಹೊರಬಂದಿರುವ ಬೂದಿಯ ಕಣಗಳ ಶಾಖ ಇರುತ್ತದೆ. ಇದರ ಪರಿಣಾಮ ಗುಡುಗು ಸಹಿತ ಮಳೆಯಾಗುತ್ತಿದೆ. ಇದು ಪೂರ್ವ ಮುಂಗಾರಿನ ಆರಂಭ ದಿನಗಳಾಗಿವೆ" ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ಹೇಳಿದರು.

ಶನಿವಾರ ಸುರಿದ ಭಾರಿ ಮಳೆಗೆ ನಂಜನಗೂಡು ತಾಲೂಕು, ದಾವಣಗೆರೆ ಜಿಲ್ಲೆ ಮತ್ತು ಯಲಹಂಕ ತಾಲೂಕಿನಲ್ಲಿ ಬೆಳೆಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ.

ಇದನ್ನೂ ಓದಿ: ದಾವಣಗೆರೆ: ಗಾಳಿ-ಮಳೆಗೆ ಬಾಳೆ, ಪಪ್ಪಾಯಿ ಗಿಡಗಳು ನಾಶ; ಧರೆಗುರುಳಿದ ಅಡಿಕೆ ಮರಗಳು - Crop Destroy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.