ETV Bharat / state

ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದ ಹೆಚ್.ಡಿ. ಕುಮಾರಸ್ವಾಮಿ - Hassan Case

author img

By ETV Bharat Karnataka Team

Published : Apr 28, 2024, 6:09 PM IST

Updated : Apr 28, 2024, 8:38 PM IST

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬಗ್ಗೆ ಹೆಚ್​ಡಿಕೆ ಪ್ರತಿಕ್ರಿಯೆ
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬಗ್ಗೆ ಹೆಚ್​ಡಿಕೆ ಪ್ರತಿಕ್ರಿಯೆ

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಹೆಚ್​.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಹಾಸನ ಜಿಲ್ಲೆಯ ಪ್ರಕರಣದ ತನಿಖೆಗೆ ಮುಖ್ಯಮಂತ್ರಿಗಳು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ಯಾರೇ ತಪ್ಪು ಮಾಡಿರಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಜೆಪಿ ನಗರ ನಿವಾಸದ ಬಳಿ ಮಾತನಾಡಿದ ಅವರು, ನಾನಾಗಲಿ, ಹೆಚ್.ಡಿ‌. ದೇವೇಗೌಡರಾಗಲಿ ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ. ಈಗಾಗಲೇ ಸಿಎಂ ಎಸ್​ಐಟಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ. ಹಾಸನ ಚುನಾವಣಾ ಪ್ರಚಾರದ ವೇಳೆ ಪ್ರಕರಣ ಆರಂಭವಾಗಿದೆ, ತನಿಖೆಯ ಮೂಲಕ ಎಲ್ಲಾ ಸತ್ಯಾಂಶಗಳು ಹೊರಗೆ ಬರಲಿ. ಯಾರೇ ತಪ್ಪೆಸಗಿದ್ದರೂ, ಅವರು ಯಾರೇ ಆಗಿದ್ದರೂ ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆ ಬರುವುದಿಲ್ಲ. ಆದ್ದರಿಂದ ತನಿಖೆಯ ವರದಿ ಸಂಪೂರ್ಣವಾಗಿ ಹೊರ ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದರು.

''ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ಅದು ನನಗೆ ಸಂಬಂಧವಿಲ್ಲದ್ದು. ಎಸ್​ಐಟಿ ತನಿಖೆಗೆ ಆದೇಶಿಸಿದ್ದಾರೆ, ಅಧಿಕಾರಿಗಳನ್ನೂ ನೇಮಿಸಿದ್ದಾರೆ ವಿದೇಶಕ್ಕೆ ಹೋಗಿದ್ದರೆ ಕರ್ಕೊಂಡು ಬರೋ ಜವಾಬ್ದಾರಿ ಅವರದ್ದು, ಇದಕ್ಕೆ ನಾನು ಉತ್ತರಿಸಕ್ಕಾಗೋದಿಲ್ಲ, ಅವರೇ ಕರ್ಕೊಂಡು ಬರ್ತಾರೆ'' ಎಂದರು.

ಬರ ಪರಿಹಾರದಲ್ಲಿ ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ: ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ. ಅತ್ಯಲ್ಪ ಪರಿಹಾರ ಕೊಟ್ಟು ರಾಜ್ಯದ ಜನರಿಗೆ ವಂಚನೆ ಎಸಗಿದ್ದು ಯುಪಿಎ ಸರಕಾರ ಎಂದು ಇದೇ ವೇಳೆ ಹೆಚ್​ಡಿಕೆ ದೂರಿದರು.

ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ಕಡಿಮೆ ಹಣ ಕೊಟ್ಟಿದೆ ಎಂದು ಹುಯಿಲೆಬ್ಬಿಸುತ್ತಿರುವ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ ಮಾಜಿ ಮುಖ್ಯಮಂತ್ರಿಗಳು, ಎನ್​ಡಿಆರ್​ಎಫ್​ (NDRF) ಮಾರ್ಗಸೂಚಿ ಪ್ರಕಾರ ₹4,860 ಕೋಟಿ ಕೊಟ್ಟರೆ ಸಾಕು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಕೇಂದ್ರ ಸರಕಾರ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ಈಗ ನೋಡಿದರೆ ನಾವು ₹18,172 ಕೋಟಿ ಕೇಳಿದ್ದು ಎಂದು ಹೇಳುತ್ತಿದ್ದಾರೆ. ಇವರು ಪದೇಪದೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ನನಗಿರುವ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರದ 2004ರಿಂದ 2013ರ ವರೆಗಿನ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಎನ್​ಡಿಆರ್​​ಎಫ್​ (NDRF) ಮಾರ್ಗಸೂಚಿಯಂತೆ ಬರ ಪರಿಹಾರಕ್ಕಾಗಿ ಕೇವಲ ಶೇ.8ರಷ್ಟು ಹಣ ನೀಡಿದ್ದಾರೆ. ನರೇಂದ್ರ ಮೋದಿ ಅವರು ಬಂದ ಮೇಲೆ, ಅಂದರೆ, 2014ರಿಂದ ಇಲ್ಲಿಯವರೆಗೆ ಈಗ ಬಿಡುಗಡೆ ಆಗಿರುವ ₹3,454 ಕೋಟಿ ಹೊರತುಪಡಿಸಿ ಶೇ.38ರಷ್ಟು ಬರ ಪರಿಹಾರ ಹಣ ರಾಜ್ಯಕ್ಕೆ ಬಂದಿದೆ. ಕಾಂಗ್ರೆಸ್ ಸರಕಾರ 8% ಕೊಟ್ಟರೆ, ಎನ್ಡಿಎ ಸರಕಾರ 38% ಹಣ ಕೊಟ್ಟಿದೆ. ಅನ್ಯಾಯ ಯಾರಿಂದ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.

ಇವರು ಕೇಂದ್ರ ಸರಕಾರದ ವಿರುದ್ಧ ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ಮಾಡುವುದನ್ನು ಬಿಟ್ಟು, ಕೇಂದ್ರದಿಂದ ಬಂದಿರುವ ಹಣವನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿ ಎಂದು ಹೆಚ್​ಡಿಕೆ ಚಾಟಿ ಬೀಸಿದರು.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ - Hassan Video Case

Last Updated :Apr 28, 2024, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.