ETV Bharat / state

ಬೆಂಗಳೂರು: ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲ ನಿಲ್ಲಿಸಿದ ವಾಹನಗಳ ಹರಾಜಿಗೆ ಹೈಕೋರ್ಟ್ ಸೂಚನೆ

author img

By ETV Bharat Karnataka Team

Published : Feb 9, 2024, 6:55 AM IST

High court
ಹೈಕೋರ್ಟ್

ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನದ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಮಾಹಿತಿ ನೀಡಿದರು.

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಸೂಚನೆ ನೀಡಿದೆ. ತ್ಯಾಗರಾಜ ನಗದರಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ವಾಹನಗಳ ಹರಾಜಿಗೆ ಕಾಲಮಿತಿ ನಿಗದಿಪಡಿಸಿತು. ಅಲ್ಲದೇ, ಹರಾಜು ಮಾಡುವುದಕ್ಕೂ ಮುನ್ನ ಈ ಸಂಬಂಧ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದ ಪ್ರಚಾರ ನೀಡಬೇಕು ಎಂದು ಪೀಠ ಸಲಹೆ ನೀಡಿತು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜ.31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ ನಿರ್ಣಯಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ರಸ್ತೆ ಬದಿ ನಿಂತಲ್ಲೇ ನಿಂತಿರುವ ವಾಹನಗಳನ್ನು ತೆಗೆಯುವಂತೆ ಸ್ಟಿಕ್ಕರ್ ಅಳವಡಿಸಲಾಗುವುದು. 15 ದಿನಗಳ ನಂತರ ಆರ್‌ಟಿಒ ಕಚೇರಿಗೆ ತಂದು ಮಾಲೀಕರನ್ನು ಸಂಪರ್ಕಿಸಲಾಗುವುದು. ಮಾಲೀಕರು ಸಿಗದಿದ್ದರೆ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ: ಕೆಪಿಟಿಸಿಎಲ್​ ಸಹಾಯಕ ಎಂಜಿನಿಯರ್ಸ್​​ ನೇಮಕಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ಅಲ್ಲದೆ, ವಾರಸುದಾರರು ಪತ್ತೆಯಾಗದ ಸಂದರ್ಭದಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲದಿಂದ ಅನುಮತಿ ಪಡೆದು ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ. ಗೆಜೆಟ್ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳಲ್ಲಿ ವಾಹನಗಳನ್ನು ಹರಾಜು ಹಾಕಲು 2023ರ ಜು.11ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ಆಡಳಿತಾತ್ಮಕ ಅಪಾಯಗಳನ್ನು ಸೃಷ್ಟಿಸುತ್ತದೆ. ಹಾಗಾಗಿ, ಅವಧಿಯನ್ನು 15 ದಿನಕ್ಕೆ ಇಳಿಕೆ ಮಾಡಿದರೆ ಅನುಕೂಲವಾಗಲಿದೆ. ಅಲ್ಲದೇ ಕಡಿಮೆ ಅವಧಿ ನಿಗದಿಪಡಿಸಿದರೆ ಅನುಕೂಲವಾಗುತ್ತದೆ. ಅಲ್ಲದೇ ಆಂತಹ ವಾಹನಗಳ ಸ್ಥಳಾಂತರಕ್ಕೆ ಬೆಂಗಳೂರು ಉತ್ತರ ತಾಲೂಕಿನ ಮಲ್ಲಸಂದ್ರದಲ್ಲಿ 2 ಎಕರೆ ಜಾಗ ಗುರುತಿಸಲಾಗಿದೆ ಎಂಬ ಪ್ರಮಾಣಪತ್ರದ ಅಂಶವನ್ನು ಇದೇ ವೇಳೆ, ಅಡ್ವೋಕೇಟ್ ಜನರಲ್ ನ್ಯಾಯಪೀಠದ ಗಮನಕ್ಕೆ ತಂದರು.

ಅದನ್ನು ಒಪ್ಪಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಅವಧಿಯನ್ನು ಕಡಿತಗೊಳಿಸಿತು. ಅದರಂತೆ, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿದ 30 ದಿನಗಳಲ್ಲಿ ಹರಾಜು ಹಾಕಬೇಕು, 1 ರಿಂದ 5 ವರ್ಷದ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5 ರಿಂದ 15 ವರ್ಷದ ವಾಹನಗಳನ್ನು ಹರಾಜು ಹಾಕಬೇಕು. ಅದರ ಪ್ರಗತಿ ಆಧರಿಸಿ ಪೊಲೀಸರು ನ್ಯಾಯಾಲಯದಿಂದ ಮುಂದಿನ ನಿರ್ದೇಶನಗಳನ್ನು ಕೋರಬಹುದು ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿತು.

ಪ್ರಮಾಣ ಪತ್ರದಲ್ಲಿರುವ ಅಂಶಗಳು: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ ಸಂಬಂಧ ಕ್ರಮವಾಗಿ 2021ರಲ್ಲಿ 74,851, 2022ರಲ್ಲಿ 1,53,983, 2023ರಲ್ಲಿ 78,238 ಮತ್ತು 2024ರಲ್ಲಿ 479 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸಿದ ಕುರಿತು 2021ರಲ್ಲಿ 8,422, 2022ರಲ್ಲಿ 18144, 2023ರಲ್ಲಿ 9547, 2024ರಲ್ಲಿ 113 ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಪಾದಚಾರಿ ಮಾರ್ಗದ ಮೇಲೆ 15 ಮತ್ತು ಅದಕ್ಕಿಂತ ಹೆಚ್ಚು ದಿನಗಳ ಕಾಲ ನಿಲುಗಡೆ ಮಾಡಿದ ವಾಹನಗಳನ್ನು ವಾರಸುದಾರರಿಲ್ಲದ ವಾಹನ (ವೆಹಿಕಲ್ ಅಬಾಂಡೆಂಡ್) ಮತ್ತು ಅದು ಇರುವ ಪ್ರದೇಶವನ್ನು ಪತ್ತೆಹಚ್ಚಿ ಗುರುತು ತಂಡ (ಐಡೆಂಟಿಫಿಕೇಷನ್ ಟೀಮ್) ರಚಿಸಲಾಗಿದೆ. ಆ ತಂಡವು ಅಂತಹ ವಾಹನಗಳನ್ನು ಮಹಜರು ಮಾಡಿದ ನಂತರ ಸಂಗ್ರಹಣಾ ಸ್ಥಳಕ್ಕೆ ಟೋಯಿಂಗ್ ಮಾಡಲಿದೆ. ನಂತರ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಸಂಪರ್ಕಿಸಿ, ಆ ವಾಹನಗಳ ಮಾಲೀಕರ, ಅವರ ವಿಳಾಸ ಹಾಗೂ ಅವುಗಳ ಮೇಲಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ವಾಹನ ಮಾಲೀಕರಿಗೆ ದಂಡ ಪಾವತಿಸಲು ಸೂಚಿಸಲಾಗುವುದು. ದಂಡ ಪಾವತಿಸದಿದ್ದರೆ ಸಾಧ್ಯವಾದರೆ ಹರಾಜು ಹಾಕಲು ಅಥವಾ ಗುಜರಿಗೆ ಹಾಕುವ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಫುಟ್‌ಪಾತ್ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯ 609.89 ಕಿಮೀ ಮತ್ತು 734.45 ಕಿಮೀ ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗದ ಮೇಲೆ ಶಾಶ್ವತ ಹಾಗೂ ಉಪ ಶಾಶತ್ವ ನಿರ್ಮಾಣಗಳನ್ನು ಅನುಮತಿಸುವುದಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕಾಲಕಾಲಕ್ಕೆ ವಿಶೇಷ ಕಾರ್ಯಾಚರಣೆ ಮಾಡಲಾಗುವುದು. ಈ ಕಾರ್ಯಾಚರಣೆಗೆ ಅಗತ್ಯವಾದ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಮ್ಮತಿಸಿದೆ.

ವಸತಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ಮಳಿಗೆಗಳನ್ನು ಇಟ್ಟುಕೊಂಡು ಒತ್ತುವರಿ ಮಾಡಿರುವುದು ಕಂಡು ಬಂದಿದೆ. ಆ ಕುರಿತು ಸರ್ವೇ ನಡೆಸಿ ಆ ರಸ್ತೆಗಳಲ್ಲಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸರ್ವೇ ನಡೆಸಲು ನಗರ ವ್ಯಾಪಾರ ಸಮಿತಿ ರಚಿಸಲಾಗುವುದು. ಆ ಸಮಿತಿಯು ಪಾದಚಾರಿ ಮಾರ್ಗದ ಮೇಲಿನ ಬೀದಿ ಬದಿ ವ್ಯಾಪಾರಗಳನ್ನು ತೆರವುಗೊಳಿಸುವ ಹಾಗೂ ಜೀವನಾಧಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ವಲಯ ಗುರುತಿಸಿ, ಅಲ್ಲಿ ಅವರು ತಮ್ಮ ಸರಕು ಮಾರಾಟ ಮಾಡುವ ವ್ಯವಸ್ಥೆ ಒದಗಿಸಲಿದೆ. ಅವರಿಗೆ ಗುರುತಿನ ಚೀಟಿ ಕಲ್ಪಿಸಲಾಗುತ್ತದೆ.

ಆ ಕುರಿತು ಸರ್ವೇ ನಡೆಸಲು ಸಮಿತಿ ರಚಿಸಲಾಗುವುದು. ಆ ಕುರಿತು ಸಮಿತಿ ಕಾಲಕಾಲಕ್ಕೆ ಪರಿಶೀಲನೆ ನಡೆಸಲಿದೆ. ಇನ್ನೂ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರಕ್ಕೆ ಸಮಯ ನಿಗದಿಪಡಿಸಲು ಮಾರ್ಗಸೂಚಿ ರೂಪಿಸಲಾಗುವುದು. ಮಾರಾಟ ವಲಯಗಳನ್ನು ಗುರುತಿಸುವವರೆಗೆ, ಬೀದಿ ವ್ಯಾಪಾರಿಗಳು ಸರಕು, ವಸ್ತುಗಳನ್ನು ಮಾರಾಟ ಮಾಡಲು ಜಾಗವನ್ನು ಸಾರ್ವಜನಿಕರ ಸಂಚಾರಕ್ಕೆ ಬಿಟ್ಟುಕೊಡಲು ಬಿಬಿಎಂಪಿಯು ಮೇಲ್ವಿಚಾರಣೆ ಮಾಡಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಗಳ ಮೇಲೆ ಮಲತಂದೆಯಿಂದ ಲೈಂಗಿಕ ಕಿರುಕುಳ ಸುಳ್ಳು ಆರೋಪ: ಹೈಕೋರ್ಟ್ ಕಳವಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.