ETV Bharat / state

ರಾಯಚೂರು: ಒಂದೇ ಕಾಮಗಾರಿಗೆ 2 ಬಾರಿ ಬಿಲ್ ಮಂಜೂರು ಮಾಡಿದ ಅಧಿಕಾರಿಗಳ ಅಮಾನತು

author img

By ETV Bharat Karnataka Team

Published : Feb 10, 2024, 12:27 PM IST

ಮನೆ ಮನೆಗೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕಾದ ಅಧಿಕಾರಿಗಳೇ ಜಲ ಜೀವನ್ ಮಿಷನ್ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸುವ ಮೂಲಕ ಅಕ್ರಮ ಎಸಗಿರುವುದು ಸಾಬೀತಾಗಿದೆ.

ಅಧಿಕಾರಿಗಳ ಅಮಾನತು
ಅಧಿಕಾರಿಗಳ ಅಮಾನತು

ರಾಯಚೂರು : ಜಲ ಜೀವನ್ ಮಿಷನ್ (ಜೆಜೆಎಂ) ಒಂದೇ ಕಾಮಗಾರಿಗೆ 2 ಬಾರಿ ಬಿಲ್ ಮಂಜೂರು ಮಾಡಿದ ಆರೋಪ ಸಾಬೀತು ಮಾಡಿದ ಹಿನ್ನೆಲೆಯಲ್ಲಿ ಇಂಜಿನಿಯರ್ಸ್​ ಹಾಗೂ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶಿಸಲಾಗಿದೆ.

ರಾಯಚೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಪಾಲಕ ಇಂಜಿನಿಯರ್ ಸೈಯದ್ ಫಜಲ್ ಮಹೆಮೂದ್, ಲೆಕ್ಕಾಧೀಕ್ಷಕ ಅಬ್ದುಲ್ ರಹೀಮ್, ಲೆಕ್ಕ ಶಾಖೆ ಪ್ರಥಮ ದರ್ಜೆ ಸಹಾಯಕ ಜಾಕೀರ್ ಹುಸೇನ್ ಅಮಾನತುಗೊಂಡಿರುವ ಇಂಜಿನಿಯರ್​ಗಳು ಹಾಗೂ ಇಬ್ಬರು ಸಿಬ್ಬಂದಿಗಳಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ.ಎಂ. ಆದೇಶಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಬೆಂಕಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ನಿಂಗಪ್ಪ ತೋಳದ್‌ರಿಗೆ ಕಾಮಗಾರಿ ಮಾಡಿದ ಹಣವನ್ನು 2022 ಸೆ.16 ರಂದು 19,66,285 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಆದರೆ, ಇದೇ ಕಾಮಗಾರಿಗೆ ಮತ್ತೊಮ್ಮೆ 2023ರ ಸೆ.19 ರಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲು ರುಜು ಪಡೆದುಕೊಂಡು ಎರಡನೇ ಬಾರಿಗೆ ಹಣ ಪಾವತಿ ಮಾಡಿ ಆರ್ಥಿಕ ನಷ್ಟ ಉಂಟು ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬಿಲ್ ಮಂಜೂರು ‌ಮಾಡಿದ ಒಬ್ಬ ಇಂಜಿನಿಯರ್ ಹಾಗೂ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಮಹಿಳೆಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ; ಹೆಡ್ ಕಾನ್ಸ್​ಟೇಬಲ್​ ಅಮಾನತು : ಇತ್ತೀಚೆಗೆ ದೂರು ನೀಡಲು ಬಂದ ಮಹಿಳೆಯ ಮೊಬೈಲ್​​ ಫೋನ್​​ಗೆ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಕಾವೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​​ ಸಂತೋಷ್ ಸಿ.ಜೆ. ಎಂಬುವರನ್ನು ಮಂಗಳೂರು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆ ಕಾವೂರು ಠಾಣೆಗೆ ದೂರು ನೀಡಲು ಬಂದಿದ್ದಾಗ ಹೆಡ್ ಕಾನ್ಸ್​ಟೇಬಲ್ ಸಂತೋಷ್‌ ಆಕೆಯ ಮೊಬೈಲ್ ನಂಬ‌ರ್ ಪಡೆದುಕೊಂಡಿದ್ದ. ಆ ಬಳಿಕದಿಂದ ಆಕೆಗೆ ಅಸಭ್ಯವಾದ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುತ್ತೇನೆ. ನಿನ್ನ ಇಡೀ ಕುಟುಂಬವನ್ನೇ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿದ್ದರು.

ಸಂತೋಷ್ ಬೆದರಿಕೆ, ಕಿರುಕುಳದಿಂದ ಬೇಸತ್ತ ಮಹಿಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಆತ ಬೆದರಿಕೆ ಒಡ್ಡಿರುವ ಆಡಿಯೋ ಸಂದೇಶವನ್ನು ಕಮಿಷನರ್ ಅವರಿಗೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನ‌ರ್, ಹೆಡ್ ಕಾನ್ಸ್​ಟೇಬಲ್​​ ಸಂತೋಷ್‌ ಅಮಾನತುಗೊಳಿಸಿ ಆದೇಶಿಸಿದ್ದರು. ಅಲ್ಲದೇ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿಗೆ ಸೂಚಿಸಿದ್ದರು.

ಇದನ್ನೂ ಓದಿ : ‘ಹಲೋ ಮೈ ಲವ್ಲಿ ಲೇಡಿ ಹೂ ಆರ್​ ಯು’ ರೀಲ್ಸ್​: 38 ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.