ETV Bharat / state

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಹೊಸ ಮುಖ ಸಂಸತ್ತಿಗೆ; ಕೈ-ಕಮಲದ ನಡುವೆ ಸಮಬಲದ ಪೈಪೋಟಿ - Dakshina Kannada

author img

By ETV Bharat Karnataka Team

Published : Apr 22, 2024, 7:29 PM IST

Updated : Apr 22, 2024, 9:49 PM IST

ಬಿಜೆಪಿ-ಕಾಂಗ್ರೆಸ್ ನಡುವೆ ಸಮಬಲದ ಹೋರಾಟ
ಬಿಜೆಪಿ-ಕಾಂಗ್ರೆಸ್ ನಡುವೆ ಸಮಬಲದ ಹೋರಾಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದಿಂದ ಹೊಸ ಮುಖಗಳು ಕಣಕ್ಕಿಳಿದಿದ್ದು ಚುನಾವಣಾ ಬಿಸಿಯೇರತೊಡಗಿದೆ. ಬಿಜೆಪಿಯಿಂದ ಕ್ಯಾ.ಬ್ರಜೇಶ್ ಚೌಟ, ಕಾಂಗ್ರೆಸ್​ನಿಂದ ಪದ್ಮರಾಜ್ ಪೂಜಾರಿ ಸ್ಪರ್ಧಿಸಿದ್ದು ಈ ಬಾರಿ ಯಾರೇ ಗೆದ್ದರೂ ಹೊಸ ವ್ಯಕ್ತಿ ಸಂಸತ್​ ಪ್ರವೇಶಿಸಲಿದ್ದಾರೆ.

ಮಂಗಳೂರು: ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಲೋಕ ಕದನಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಪ್ರಚಾರದಲ್ಲಿ ನಿರತವಾಗಿವೆ. ಜಿಲ್ಲೆಯಲ್ಲಿ ಉಭಯ ಪಕ್ಷಗಳ ನಡುವೆ ಸಮಬಲದ ಹೋರಾಟವೂ ಕಾಣಿಸುತ್ತಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಜಿಲ್ಲೆ ಕಳೆದ ಮೂರುವರೆ ದಶಕಗಳಿಂದ ಬಿಜೆಪಿ ಭದ್ರಕೋಟೆ. ಸಂಘಟನಾತ್ಮಕವಾಗಿ ಪ್ರಬಲವಾಗಿ ನೆಲೆಯೂರಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ 33 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಜಿಲ್ಲೆಯು ಬಿಜೆಪಿಗೆ ಸುಲಭ ತುತ್ತೆಂಬ ಮಾತಿದೆ. ಆದರೆ, ಈ ಬಾರಿಯ ಚುನಾವಣಾ ಅಖಾಡದಲ್ಲಿ ಕ್ಷೇತ್ರ ಕೇಸರಿ ಪಕ್ಷಕ್ಕೆ ಸುಲಭವಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಈ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಬಳಿಕ ಅಭ್ಯರ್ಥಿಗಳು ಬದಲಾದರೂ ಕ್ಷೇತ್ರದಲ್ಲಿ ಗೆಲುವು ಕಾಣಲಾಗಿರಲಿಲ್ಲ. ವೀರಪ್ಪ ಮೊಯ್ಲಿ, ಮಿಥುನ್ ರೈ ಅಭ್ಯರ್ಥಿಗಳಾಗಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಪ್ರಬಲ ನಾಯಕರಾಗಿದ್ದರೂ ಕ್ಷೇತ್ರವನ್ನು ಗೆಲ್ಲಲು ಇವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದ ಪದ್ಮರಾಜ್ ಪೂಜಾರಿಯನ್ನು ಈ ಬಾರಿ ಅಭ್ಯರ್ಥಿ ಮಾಡಿದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲುವ ವಿಶ್ವಾಸ ಮೂಡಿಸಿದೆ. ನಿರೀಕ್ಷೆಯಂತೆ ಬಿಜೆಪಿಯಿಂದ ಹೊಸ ಮುಖ ಕ್ಯಾ.ಬ್ರಜೇಶ್ ಚೌಟ ಕಣಕ್ಕಿಳಿದಿದ್ದಾರೆ. ಎರಡೂ ಪಕ್ಷಗಳಿಂದ ಹೊಸ ಮುಖಗಳು ಕಣದಲ್ಲಿರುವುದರಿಂದ ಕ್ಷೇತ್ರದ ಕುತೂಹಲ ತುಸು ಹೆಚ್ಚಾಗಿಯೇ ಇದೆ. ಇವರಿಬ್ಬರಿಗೂ ಇದು ಮೊದಲ ಚುನಾವಣೆ. ಹಾಗಾಗಿ ಸಹಜವಾಗಿ ಇಬ್ಬರು ಎರಡೂ ಪಕ್ಷಗಳಲ್ಲಿ ಹೊಸ ಆಶಾಭಾವನೆ ಹುಟ್ಟುಹಾಕಿದ್ದಾರೆ.

ಕ್ಯಾ.ಬ್ರಿಜೇಶ್ ಚೌಟ
ಕ್ಯಾ.ಬ್ರಿಜೇಶ್ ಚೌಟ

ಮೂರು ಬಾರಿ ಸಂಸದರಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ಷೇತ್ರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಾರಿ ಬಿಜೆಪಿ ಹೈಕಮಾಂಡ್ ಕ್ಯಾ.ಬ್ರಜೇಶ್ ಚೌಟರಿಗೆ ಟಿಕೆಟ್ ನೀಡಿದೆ. ವಿದ್ಯಾವಂತ, ಯುವಕ, ಪಕ್ಷ ನಿಷ್ಠೆಯ ಹೊಂದಿರುವ ಬ್ರಜೇಶ್ ಚೌಟ ಬಿಜೆಪಿಯಲ್ಲಿನ ಅಸಮಾಧಾನ ತೊಡೆದುಹಾಕಲು ಹೈಕಮಾಂಡ್ ಗುರುತಿಸಿದ ಅಭ್ಯರ್ಥಿ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಪದ್ಮರಾಜ್​ಗೆ ಈ ಬಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಪದ್ಮರಾಜ್​ ಸ್ಪರ್ಧೆಯಿಂದ ಕಾಂಗ್ರೆಸ್​ನಲ್ಲಿ ಹೊಸ ಉತ್ಸಾಹ ಬಂದಿದೆ.

ಬಿಲ್ಲವ ಫ್ಯಾಕ್ಟರ್: ಕ್ಷೇತ್ರದಲ್ಲಿ ಬಿಲ್ಲವ ಫ್ಯಾಕ್ಟರ್ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿನ ಹಂತಕ್ಕೆ ತರಲಿದೆ ಎಂಬುದು ಕೈ ಮುಖಂಡರ ವಿಶ್ವಾಸ. ಆದರೆ, ಬಿಜೆಪಿಯೊಂದಿಗೆ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ಬಿಲ್ಲವರು ಈ ಬಾರಿಯೂ ಪಕ್ಷವನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಬಿಜೆಪಿ ಮುಖಂಡರದು.

ಪದ್ಮರಾಜ್ ಪೂಜಾರಿ ಬಿಲ್ಲವ ಮುಖಂಡ. ಬಿಲ್ಲವ ಕೆಂದ್ರೀತ ಸಮಾಜಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವವರು. ಇವರನ್ನು ಅಭ್ಯರ್ಥಿ ಮಾಡಿದ ಬಳಿಕ ಬಿಲ್ಲವ ಬೆಂಬಲ ವಿಚಾರ ಮುನ್ನೆಲೆಗೆ ಬಂದಿದೆ. ಜನಾರ್ದನ ಪೂಜಾರಿ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವರು ಗೆದ್ದು ಬರಲಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಲ್ಲವರಿದ್ದರೂ ಕಳೆದ 33 ವರ್ಷಗಳಲ್ಲಿ ಬಿಜೆಪಿಯಿಂದ ಜೈನ ಸಮುದಾಯದ ಧನಂಜಯಕುಮಾರ್, ಗೌಡ ಸಮುದಾಯದ ಸದಾನಂದಗೌಡ, ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಜಯಗಳಿಸಿದ್ದಾರೆ. ಆದರೆ, ಈ ಬಾರಿ ಬಿಲ್ಲವ ಮುಖಂಡ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಬಿಲ್ಲವ ಸಮುದಾಯ ಪದ್ಮರಾಜ್ ಗೆಲ್ಲಿಸಲು ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಶಿಪ್ಟ್ ಆಗಲಿದ್ದಾರೆ ಎಂಬ ಆಶಾ ಭಾವನೆ ಕಾಂಗ್ರೆಸ್ ಪಾಳಯದಲ್ಲಿದೆ. ಇದಕ್ಕೆ ಪೂರಕವಾಗಿ ಜನಾರ್ದನ ಪೂಜಾರಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಒಟ್ಟಾಗಿರದ ಬಿಲ್ಲವ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಘಟನೆಗಳು ಈ ಬಾರಿ ಒಗ್ಗಟ್ಟಾಗಿ ಪದ್ಮರಾಜ್ ಪರ ಕಾರ್ಯನಿರ್ವಹಿಸುತ್ತಿದೆ.

ಪದ್ಮರಾಜ್ ಪೂಜಾರಿ
ಪದ್ಮರಾಜ್ ಪೂಜಾರಿ

ಬಿಲ್ಲವರು ಕಳೆದ ಮೂರು ದಶಕಗಳಿಂದ ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಆ ಕಾರಣದಿಂದಲೇ ಬಿಜೆಪಿ ನಿರಾಯಸವಾಗಿ ಗೆಲ್ಲುತ್ತಾ ಬಂದಿದೆ. ಚುನಾವನೆಯ ಸಂದರ್ಭದಲ್ಲಿ ಜಾತಿ ನೋಡದೆ ಹಿಂದುತ್ವ ವಿಚಾರವನ್ನು ನೋಡಿ ಬಿಲ್ಲವರು ಮತ ಚಲಾಯಿಸಿದ ಪರಿಣಾಮ ಬಿಜೆಪಿಗೆ ಸುಲಭ ಗೆಲುವಾಗುತ್ತಾ ಬಂದಿದೆ. ಕಳೆದ 33 ವರ್ಷಗಳಲ್ಲಿ ಬಿಲ್ಲವರಿಗೆ ಟಿಕೆಟ್ ನೀಡದಿದ್ದರೂ ಬಿಜೆಪಿ ಗೆಲ್ಲುತ್ತಾ ಬಂದಿದ್ದು, ಈ ಬಾರಿಯೂ ಬಂಟ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿದೆ. ಕಾಂಗ್ರೆಸ್​ನಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಇದ್ದರೂ ಬಿಲ್ಲವರು ಈ ಬಾರಿಯೂ ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂಬ ನಂಬುಗೆ ಕಮಲಪಾಳಯದಲ್ಲಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಿಲ್ಲವ ಮತವನ್ನು ಸ್ವಲ್ಪ ಮಟ್ಟಿಗೆ ಸೆಳೆಯಬಹುದು ಎಂಬ ನೆಲೆಯಲ್ಲಿ ಬಿಲ್ಲವ ಪರ ತಂತ್ರಗಾರಿಕೆಯನ್ನು ಬಿಜೆಪಿ ಮಾಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದಾಗ ನಾರಾಯಣ ಗುರುಗಳ ಪ್ರತಿಮೆಗೆ ಹಾರಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿರುವುದರಿಂದ ವೇದ್ಯವಾಗಿದೆ.

ಬಿಜೆಪಿಯ ಚುನಾವಣೆಯ ವಿಷಯಗಳು:
1. ಮೋದಿ ಯಶಸ್ವಿ ಆಡಳಿತ
2. ರಾಜ್ಯ ಸರ್ಕಾರ ಅಭಿವೃದ್ದಿಗೆ ಗಮನ ಕೊಡುತ್ತಿಲ್ಲ
3. ಹಿಂದುತ್ವ

ಕಾಂಗ್ರೆಸ್ ಚುನಾವಣಾ ವಿಷಯಗಳು:
1. ಮೋದಿ ಸರ್ಕಾರದ ದುರಾಡಳಿತ
2. ಬಿಲ್ಲವ ಅಭ್ಯರ್ಥಿ
3. ಕಾಂಗ್ರೆಸ್ ಗ್ಯಾರಂಟಿ

ಕಾಂಗ್ರೆಸ್​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಒಗ್ಗಟ್ಟು: ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಕಾಣಿಸಿಕೊಂಡಿತ್ತು. ಆದರೆ ಇದೀಗ ಬಣ ರಾಜಕೀಯ ದೂರವಾಗಿ ಕೈ ನಾಯಕರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್​ಗೆ ಈ ಬಾರಿ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ಮಾತಿದೆ.

ಕಳೆದ ಬಾರಿಯ ಗೆಲುವಿನ ಅಂತರ 2.75 ಲಕ್ಷ: ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಗೆಲ್ಲುವುದಷ್ಟೇ ಅಲ್ಲದೇ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡು ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2.75 ಲಕ್ಷ ಅಂತರದಿಂದ ಗೆಲುವು ಸಾಧಿಸಿದೆ. ಈ ಬಾರಿ 3.5 ಲಕ್ಷ ಅಂತರ ಇರಲಿದೆ ಎಂಬ ವಿಶ್ವಾಸದಲ್ಲಿದೆ. ಆದರೆ, ಕಾಂಗ್ರೆಸ್ ಈ ಬಾರಿ ಬಿಜೆಪಿಯನ್ನು ಸೋಲಿಸುವ ವಿಶ್ವಾಸದಲ್ಲಿದೆ. ಆದರೆ, ಎರಡು ಪಕ್ಷಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಬಲದ ಹೋರಾಟ ನಡೆಸುತ್ತಿದೆ. ಎರಡು ಪಕ್ಷಕ್ಕೂ ಗೆಲುವು ಸುಲಭ ತುತ್ತಲ್ಲ ಎಂಬುದು ಜನರ ಅಭಿಪ್ರಾಯ.

ಇದನ್ನೂ ಓದಿ: ಲೋಕಸಭಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ: ನಾಮಪತ್ರ ವಾಪಸ್ - Dingaleshwar Swamiji

Last Updated :Apr 22, 2024, 9:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.