ETV Bharat / state

ಪ್ರಜ್ವಲ್ ರೇವಣ್ಣ ಡಿಪ್ಲೊಮ್ಯಾಟಿಕ್ ಪಾಸ್​ಪೋರ್ಟ್ ರದ್ದುಪಡಿಸಿ: ಮೋದಿಗೆ ಮತ್ತೆ ಪತ್ರ ಬರೆದ ಸಿಎಂ - Siddaramaiah Letter To Modi

author img

By ETV Bharat Karnataka Team

Published : May 23, 2024, 11:33 AM IST

ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದಿದ್ದಾರೆ.

cm siddaramaiah written to pm modi
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ಈಗಾಗಲೇ ಒಮ್ಮೆ ಪತ್ರದ ಬರೆದು ಡಿಪ್ಲೊಮ್ಯಾಟಿಕ್ ಪಾಸ್​​ಪೋರ್ಟ್ ರದ್ದುಪಡಿಸಲು ಮನವಿ ಮಾಡಿದ್ದ ಸಿಎಂ, ಇದೀಗ ಎರಡನೇ ಪತ್ರ ಬರೆದಿದ್ದಾರೆ. ಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ, ತಲೆಮರೆಸಿಕೊಂಡಿರುವ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ತ್ವರಿತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಸಿಎಂ ಪತ್ರದ ವಿವರ: ಪ್ರಜ್ವಲ್ ರೇವಣ್ಣ ಮೇಲೆ ಆರೋಪ ಕೇಳಿಬಂದಿದೆ. ಈ ಘಟನೆಗಳು ಕರ್ನಾಟಕ ರಾಜ್ಯದ ಜನರ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸಿದೆ. ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಮೊಮ್ಮಗ ಏಪ್ರಿಲ್ 27ರಂದು ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. 2024ರಲ್ಲಿ ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಡಿ 1135500 ಅನ್ನು ಬಳಸಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಅವರ ವಿರುದ್ಧ ಆರೋಪಗಳು ಬಂದು, ಹೇಯ ಕೃತ್ಯಗಳು ಹೊರಬಂದ ಬಳಿಕ ಮೊದಲ ಎಫ್‍ಐಆರ್ ದಾಖಲಾಗುವ ಕೆಲವೇ ಗಂಟೆಗಳ ಮೊದಲು ಅವರು ಪರಾರಿಯಾಗಿದ್ದಾರೆ. ದೇಶದಿಂದ ಪಲಾಯನ ಮಾಡಲು ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ರಾಜತಾಂತ್ರಿಕ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿ ನಮ್ಮ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಮಹಿಳೆಯರಿಗೆ ದೌರ್ಜನ್ಯ, ಕಿರುಕುಳ ನೀಡಿದ ಆರೋಪ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧದ ಅಪರಾಧಗಳ ಬಗ್ಗೆ ಎಸ್‍ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಮುಂದಿನ ತನಿಖೆಗಾಗಿ ಆರೋಪಿ ಉಪಸ್ಥಿತಿಗೆ ಎಸ್‍ಐಟಿ ಪ್ರಯತ್ನಿಸುತ್ತಿದೆ. ಸಿಆರ್​ಪಿಸಿ ಕಲಂ 41ಎ ಅಡಿಯಲ್ಲಿ ತನಿಖಾಧಿಕಾರಿಯಿಂದ ಲುಕ್‍ ಔಟ್ ಸುತ್ತೋಲೆ, ಬ್ಲೂ ಕಾರ್ನರ್ ನೋಟಿಸ್ ಜಾರಿ ಆಗಿದೆ.‌

ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಹಾಜರಾಗದೆ ಇಂದಿಗೂ ತಲೆಮರೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧದ ಎಫ್‍ಐಆರ್​​ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ವಸ್ತ್ರಾಪಹರಣ ಮತ್ತು ಬಲವಂತವಾಗಿ ಲೈಂಗಿಕ ಕ್ರಿಯೆಗಳನ್ನು ನಡೆಸಿ ವಿಡಿಯೊ-ಗ್ರಾಫಿಂಗ್ ಮಾಡಿದ ಗಂಭೀರ ಸ್ವರೂಪದ ಆರೋಪಗಳಿವೆ. ಇಷ್ಟೆಲ್ಲಾ ಆರೋಪ ಬಂದಿದ್ದರೂ ಸಂಸತ್ ಸದಸ್ಯರಾಗಿ ತಮಗಿದ್ದ ಸವಲತ್ತುಗಳ ದುರುಪಯೋಗಪಡಿಸಿಕೊಂಡು ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆಗಳಿಗೆ ಅಸಹಕಾರ ತೋರುತ್ತಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯನ್ನು ವಿಚಾರಣೆಗೆ ಕರೆತರುವ ಅಗತ್ಯವಿದೆ, ಅವರನ್ನು ದೇಶಕ್ಕೆ ವಾಪಸ್ ಕರೆಸಬೇಕಿದೆ ಇದಕ್ಕೆ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದು ಸಾಧನವಾಗಿದೆ. ಹಾಗಾಗಿ, ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ, ಈ ಹಿಂದೆ ಬರೆದಿದ್ದ ನನ್ನ ಪತ್ರವು ಸಹ ಪ್ರಕರಣದ ಪರಿಸ್ಥಿತಿಯ ಗಂಭೀರತೆಯನ್ನು ಪ್ರಸ್ತಾಪಿಸಿತ್ತು. ಆದರೆ ನನಗೆ ತಿಳಿದಿರುವಂತೆ, ಕ್ರಮ ತೆಗೆದುಕೊಳ್ಳದಿರುವುದು ನಿರಾಶಾದಾಯಕವಾಗಿದೆ. ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪಾಸ್‌ಪೋರ್ಟ್ ಕಾಯಿದೆ, 1967 ರ ಸೆಕ್ಷನ್ 10(3)(ಎಚ್) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ ತ್ವರಿತ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸುದೀರ್ಘ ಪತ್ರದಲ್ಲಿ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಫೋನ್ ಕದ್ದಾಲಿಕೆಯಂಥ ನೀಚ ಕೆಲಸ ಮಾಡಿಲ್ಲ: ಸಿದ್ದರಾಮಯ್ಯ - phone tapping Allegation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.